ರಾಮನಗರ: ನಾವು ಪ್ರಕೃತಿಯನ್ನು ಉಳಿಸಿದರೆ ಪ್ರಕೃತಿಯು ನಮ್ಮನ್ನು ಉಳಿಸುತ್ತದೆ. ಎಲ್ಲರೂ ಆರೋಗ್ಯವಾಗಿರಬೇಕಾದರೆ ನಮಗೆ ಪರಿಸರ ಬಹಳ ಮುಖ್ಯ ಎಂದು ಜ್ಞಾನ ವಿಕಾಸ್ ವಿದ್ಯಾ ಸಂಘದ ಅಧ್ಯಕ್ಷರಾದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹೇಳಿದರು.
ಈ ವಿಶ್ವ ಪರಿಸರ ದಿನವನ್ನು ಇಂದು ಮಾತ್ರ ಆಚರಿಸಿ ಬಿಡುವುದಲ್ಲ ನಿರಂತರ ಗಿಡಗಳನ್ನು ನೆಡುವುದು ಆ ಗಿಡಗಳಿಗೆ ನೀರು ಗೊಬ್ಬರ ಹಾಕಿ ಪೋಷಿಸಿದರೆ ಅವುಗಳು ಭವಿಷ್ಯದಲ್ಲಿ ನಮ್ಮನ್ನು ಕಾಪಾಡುತ್ತವೆ ಎಂದು ಹೇಳಿದರು.
ನಮ್ಮ ಕಾಲೇಜಿನ ಆವರಣದಲ್ಲಿ ಈಗಾಗಲೇ ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುತ್ತಾ ಬಂದಿದ್ದು, ನಮ್ಮ ಕಾಲೇಜು ಆವರಣ ಹಸಿರುಮಯ ವಾತಾವರಣ ಹೊಂದಿದೆ. ಈ ದಿನವೂ ಸಹ 50 ಗಿಡಗಳನ್ನು ನೆಡಲಾಗುತ್ತಿದೆ ಎಂದು ಸಿ.ಎಂ.ಲಿಂಗಪ್ಪ ತಿಳಿಸಿದರು.ಸಂಸ್ಥೆಯ ಖಜಾಂಚಿ ಬಿ.ಎನ್ ಗಂಗಾಧರಯ್ಯ, ಕಾರ್ಯದರ್ಶಿ ರೇಣುಕಾಪ್ರಸಾದ್, ನಿರ್ದೇಶಕರಾದ ಎಲ್ ಸತೀಶ್ ಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ರೂಪಾ , ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಶರತ್ ಕುಮಾರ್ , ಅಧ್ಯಾಪಕರು ಹಾಗೂ ಎನ್ ಎಸ್ ಎಸ್ ವಿದ್ಯಾರ್ಥಿಗಳು ಹಾಜರಿದ್ದರು.
ಬಿಡದಿಯ ಜ್ಞಾನ ವಿಕಾಸ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.