ಕನ್ನಡಪ್ರಭ ವಾರ್ತೆ ವಿಜಯಪುರ
ಶಿಷ್ಯಂದಿರು ತಮಗೆ ಕಲಿಸಿದ ಗುರುವಿಗಿಂತ ಹೆಚ್ಚಿನ ಸಾಧನೆ ಮಾಡಿದರೆ, ಅದೇ ಗುರುವಿಗೆ ನೀಡುವ ಮಹತ್ವದ ಕಾಣಿಕೆ ಎಂದು ಸಮಕುಲಪತಿ ಡಾ.ಅರುಣ ಇನಾಮದಾರ ಹೇಳಿದರು.ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದ ಕಟ್ಟಡ ಸಭಾಂಗಣದಲ್ಲಿ ನಡೆದ 1993ರಲ್ಲಿ ಬ್ಯಾಚ್ ನ ಎಂಬಿಬಿಎಸ್ ಹಳೆಯ ವಿದ್ಯಾರ್ಥಿಗಳ 30ನೇ ವಾರ್ಷಿಕ ಸ್ನೇಹ ಸಂಗಮ ಮತ್ತು ಗುರುವಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಫಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುವ ಗುರುಗಳಿಗಾಗಿ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರಶಂಸನೀಯ. ಪ್ರತಿ ಸ್ನೇಹ ಸಂಗಮದಲ್ಲೂ ಒಂದೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಆಯೋಜಿಸಬೇಕು ಎಂದವರು ಸಲಹೆ ನೀಡಿದರು.ವಿವಿ ಆವರಣದಲ್ಲಿ ಅಲ್ಯುಮಿನಿಯಂ ಹಾಲ್ ನಿರ್ಮಿಸುವ ಯೋಜನೆಯಿದ್ದು, ಹಳೆಯ ವಿದ್ಯಾರ್ಥಿಗಳೆಲ್ಲರೂ ಉದಾರವಾಗಿ ದೇಣಿಗೆ ನೀಡಿ, ಯೋಜನೆಯ ಯಶಸ್ಸಿಗೆ ಸಹಕರಿಸುವಂತೆ ಡಾ. ಅರುಣ ಇನಾಮದಾರ ಕೋರಿದರು.
ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಡಾ.ಎಂ.ಬಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಒಳ್ಳೆಯ ಪಾಠ ಕಲಿಸಿರುವುದರಿಂದ ದೇವರು ವರ್ಷದಿಂದ ವರ್ಷಕ್ಕೆ ಕಾಲೇಜಿನ ಏಳ್ಗೆಯ ಮೂಲಕ ಆಶೀರ್ವದಿಸುತ್ತಿದ್ದಾನೆ. ದೇಶದ ಅತ್ಯುನ್ನತ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಬಿ.ಎಲ್.ಡಿ.ಇ ಒಂದಾಗಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದರು.ಪುಣೆಯ ಡಾ.ಶಿಲ್ಪಾ ವಿಸೀದ ತಮ್ಮ ಸಹಪಾಠಿ ದಿ.ಡಾ.ಸೈಯ್ಯದ್ ಫಯಾಜ್ ಪಾಶಾ ಅವರ ತುರ್ತು ಚಿಕಿತ್ಸಾ ವೈದ್ಯಕೀಯ ವಿಭಾಗದಲ್ಲಿನ ಕೊಡುಗೆಗಳ ಸ್ಮರಣಾರ್ಥ ನಿಷ್ಠ -93 ಬ್ಯಾಚಿನ ವಿದ್ಯಾರ್ಥಿಗಳ ಹೆಸರಿನಲ್ಲಿ ಆ ವಿಭಾಗದಲ್ಲಿ ಪ್ರತಿ ವರ್ಷ ಅತೀ ಹೆಚ್ಚು ಅಂಕ ಗಳಿಸುವ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗೆ ಚಿನ್ನದ ಪದಕ ನೀಡುವುದಾಗಿ ಘೋಷಿಸಿದರು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಬಿ.ಸಿ. ಉಪ್ಪಿನ, ತಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತ ವೈದ್ಯರಾಗಿರುವುದು ಸಂತೋಷದ ವಿಷಯ ಎಂದರು.ನಿವೃತ್ತ ಪ್ರಾಂಶುಪಾಲ ಮತ್ತು ವಿಶ್ರಾಂತ ಉಪಕುಲಪತಿ ಡಾ. ಸತೀಶ.ಜಿಗಜಿನ್ನಿ, ನಿವೃತ್ತ ಪ್ರಾಂಶುಪಾಲ ಡಾ. ಆರ್. ಸಿ. ಬಿದರಿ, ಡಾ. ವಿಜಯ ಕುಲಕರ್ಣಿ, ಡಾ. ಅರ್ಚನಾ, ಡಾ. ಶ್ರೀನಿವಾಸ, ಡಾ. ವಿಜಯ ಕಟ್ಟಿ, ಡಾ.ಪ್ರಕಾಶ ಪಾಟೀಲ, ಡಾ.ಸಂತೋಷ ಬಗಲಿ, ಡಾ.ಜಿ. ಎಸ್. ಪಲ್ಲೇದ, ಡಾ.ಬಾಲರಾಜು ಸೇರಿದಂತೆ ದೇಶ, ವಿದೇಶಗಳಲ್ಲಿ ನೆಲೆಸಿರುವ ಸುಮಾರು 70 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿ.ಎಲ್.ಡಿ.ಇ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ ಸ್ವಾಗತಿಸಿದರು. ಡಾ. ಶಿಲ್ಪಾ ಉಪ್ಪಿನ ವಂದಿಸಿದರು. ಡಾ. ರವಿ.ಕುಲಕರ್ಣಿ, ಡಾ. ಅನಿತಾ, ಡಾ. ನಿರ್ಮಲಾ ನಿರೂಪಿಸಿದರು.