ಪಾಕ್ ಅತಿಕ್ರಮಣದಿಂದ ಸಂಕಷ್ಟದಲ್ಲಿರುವ ಸರ್ವಜ್ಞಪೀಠ ರಕ್ಷಣೆಗೆ ಮನವಿ

KannadaprabhaNewsNetwork | Updated : Dec 27 2023, 01:31 AM IST

ಸಾರಾಂಶ

ಕಾಶ್ಮೀರದ ಹಿಂದೂಗಳ ಪವಿತ್ರ ಶ್ರದ್ಧಾಕೇಂದ್ರ ಸರ್ವಜ್ಞ ಪೀಠವನ್ನು ಪಾಕ್‌ ಸೇನೆ ಅತಿಕ್ರಮಿಸಿ ನಾಶಪಡಿಸಲು ಯತ್ನಿಸುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಹಾಗೂ ವಿದೇಶಾಂಗ ಸಚಿವರಿಗೆ ಜಗದ್ಗುರುಗಳ ಮೂಲಕವೂ ಒತ್ತಾಯ ಮಾಡಿದ್ದೇವೆ ಎಂದು ಕಾಶ್ಮೀರದ ಸೇವ್‌ ಶಾರದಾ ಸಮಿತಿ ಮುಖ್ಯಸ್ಥ ಶ್ರೀ ರವೀಂದ್ರ ಪಂಡಿತ್‌ ತಿಳಿಸಿದರು.

-ಕಾಶ್ಮೀರ್‌ ಸೇವ್‌ ಶಾರದಾ ಸಮಿತಿಯ ರವಿಂದ್ರ ಪಂಡಿತ್‌ರಿಂದ ಜಗದ್ಗುರುಗಳಿಗೆ ಒತ್ತಾಯ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಹಿಂದೂಗಳ ಪವಿತ್ರ ಶ್ರದ್ಧಾಕೇಂದ್ರ ಸರ್ವಜ್ಞ ಪೀಠವನ್ನು ಪಾಕ್‌ ಸೇನೆ ಅತಿಕ್ರಮಿಸಿ ನಾಶಪಡಿಸಲು ಯತ್ನಿಸುತ್ತಿದ್ದು, ಪೀಠ ಅಪಾಯದಲ್ಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಹಾಗೂ ವಿದೇಶಾಂಗ ಸಚಿವರಿಗೆ ಜಗದ್ಗುರುಗಳ ಮೂಲಕವೂ ಒತ್ತಾಯ ಮಾಡಿದ್ದೇವೆ ಎಂದು ಕಾಶ್ಮೀರದ ಸೇವ್‌ ಶಾರದಾ ಸಮಿತಿ ಮುಖ್ಯಸ್ಥ ಶ್ರೀ ರವೀಂದ್ರ ಪಂಡಿತ್‌ ತಿಳಿಸಿದರು.

ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಅಯೋಧ್ಯೆಗೆ ತಲುಪಿಸುವ ದೇಶದ ಪವಿತ್ರ ತೀರ್ಥಗಳನ್ನು ಅನಾವರಣ ಗೊಳಿಸಿ ಮಾತನಾಡಿದರು. ಕಾಶ್ಮೀರದ 72 ಕಿ.ಮೀ. ದೂರದ ತೀತ್ವಾಲ್‌ನಲ್ಲಿ ಶ್ರೀ ಆದಿಶಂಕರರು ಸರ್ವಜ್ಞ ಪೀಠ ಸ್ಥಾಪಿಸಿದ್ದರು. ಪಾಕ್‌ ಸೇನೆ ಈ ಪೀಠ ನಾಶಪಡಿಸುವ ಹುನ್ನಾರ ನಡೆಸುತ್ತಿದೆ. ಸೇನೆ ಸರ್ವಜ್ಞ ಪೀಠದ ಗೋಡೆಯನ್ನು ಕೆಡವಿ, ಅಲ್ಲಿ ಕಾಪಿ ಶಾಪ್‌ ನಿರ್ಮಾಣ ಮಾಡಿದೆ. ಪಾಕ್‌ ಸೇನಾಧಿಕಾರಿ ಬ್ರಿಗೇಡಿಯರ್‌ ತನ್ವೀರ್‌ ಅಹಮದ್‌ ಈ ಕಾಪಿ ಶಾಪ್‌ ಉದ್ಘಾಟನೆ ಮಾಡಿರುತ್ತಾರೆ.

ಸುಪ್ರಿಂ ಕೋರ್ಟ ಆಜಾದ್‌ ಕಾಶ್ಮೀರದ ನಮ್ಮಸರ್ವಜ್ಞ ಪೀಠ ಸ್ಥಳವನ್ನು ಆಧ್ಯಾತ್ಮಿಕ ಮತ್ತು ಶ್ರದ್ಧಾ ಕೇಂದ್ರವೆಂದು ಗುರುತಿಸಿದ್ದು ಇಲ್ಲಿ ಪೂಜೆ, ಧಾರ್ಮಿಕ ಕಾರ್ಯಹೊರತು ಪಡಿಸಿ ಇತರೆ ಅನ್ಯ ಉದ್ದೇಶಕ್ಕೆ ಪರಿವರ್ತಿಸುವಂತಿಲ್ಲ. 2018 ರ ಜನವರಿಯಲ್ಲಿ ನೀಡಿರುವ ತೀರ್ಪಿನ ಪ್ರತಿ ನಮ್ಮ ಬಳಿಯಿದೆ. ನಿಯಂತ್ರಣ ರೇಖೆಯಿಂದಾಚೆಗೆ ಭೇಟಿ ನೀಡಲು ರಕ್ತಸಂಬಂಧಿ ಭಾರತೀಯರಿಗೆ ಮಾತ್ರ ಅವಕಾಶವಿದೆ.ಇತರರಿಗೆ ಅವಕಾಶವಿಲ್ಲ.ಇಲ್ಲಿ ಹಿಂದೂ ನಿವಾಸಿಗಳು ಯಾರು ಇಲ್ಲದಿರುವುದರಿಂದ ಈ ಕರಾರನ್ನು ಮಾರ್ಪಾಡು ಮಾಡಬೇಕು.

ಕರ್ತಾರಪುರದ ಕಾರಿಡಾರ್‌ನಂತೆ ಇಲ್ಲಿಗೂ ಶ್ರದ್ಧಾಳುಗಳು ಮುಕ್ತವಾಗಿ ಪೂಜೆ, ಧಾರ್ಮಿಕ ಕಾರ್ಯ ನಡೆಸಲು ಹೋಗಿ ಬರಲು ಅವಕಾಶ ಮಾಡಿಕೊಡಬೇಕು. ಇದು ಭಾರತ ಮತ್ತು ಪಾಕ್‌ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ. ಪ್ರಸ್ತುತ ನಾವು ಉಭಯ ದೇಶಗಳ ನಾಗರಿಕ ಸಮಿತಿಗಳ ಮೂಲಕ ಸಂವಹನ ಮಾಡಿಕೊಂಡು ಮುಂದುವರೆಯುತ್ತೇವೆ ಎಂದರು.

ಅಯೋಧ್ಯೆ ರಾಮಮಂದಿರ ರಾಮಲಲ್ಲಾನ ಪುನರ್‌ಪ್ರತಿಷ್ಠೆ ಸಮಯದಲ್ಲಿ ಅಭಿಷೇಕಕ್ಕಾಗಿ ಸರ್ವಜ್ಞ ಪೀಠದ ಸ್ಥಳದ 3 ನದಿ ಗಳಿಂದ ಪವಿತ್ರ ಜಲ ಸಂಗ್ರಹಿಸಿ ತಂದಿದ್ದು, ಶ್ರೀಗಳು ಮಂಗಳವಾರ ಜಲಕುಂಭಕ್ಕೆ ಪೂಜೆ ಸಲ್ಲಿಸಿ ಆಶೀರ್ವಾದ ಮಾಡಿದ್ದಾರೆ. ಈ ಜಲವನ್ನು ಅಯೋಧ್ಯೆಗೆ ತಲುಪಿಸುತ್ತೇವೆ. ಶ್ರೀ ರಾಮಮಂದಿರ ಶಿಲಾನ್ಯಾಸಕ್ಕೆ ಸರ್ವಜ್ಞ ಪೀಠದಿಂದ ಮೃತ್ತಿಕೆ ಸಂಗ್ರಹಿಸಿ ಕೊಟ್ಟಿದ್ದನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಕೋಯಮುತ್ತೂರಿನ ವೆಂಕಟರಮಣ, ಮಣೀಶ್ರಿ ಗಣೇಶ್‌, ಮಂಜುನಾಥ್ ಶರ್ಮ ಮತ್ತಿತರರು ಇದ್ದರು.26 ಶ್ರೀ ಚಿತ್ರ 2-

ಶೃಂಗೇರಿಯಲ್ಲಿ ಕಾಶ್ಮೀರದ ಸೇವ್‌ ಶಾರದಾ ಸಮಿತಿಯ ಶ್ರೀ ರವೀಂದ್ರ ಪಂಡಿತ್‌ ಅಯೋಧ್ಯೆಗೆ ತಲುಪಿಸುವ ದೇಶದ ಪವಿತ್ರ ತೀರ್ಥಗಳ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ವೆಂಕಟರಮಣ, ಮಣಿಶ್ರೀ ಗಣೇಶ್ ಮತ್ತಿತರರು ಇದ್ದರು.

Share this article