ಕ್ಲೀನ್‌ ಇದ್ದರೆ ಇಡಿಗೆ ಹೆದರುವ ಅಗತ್ಯವಿಲ್ಲ

KannadaprabhaNewsNetwork |  
Published : Jun 27, 2026, 03:15 AM IST
(ಫೋಟೊ26ಬಿಕೆಟಿ5, ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಅಧಿಕಾರಿಗಳ ಮೇಲೆ ಇಡಿ ರೇಡ್ ಆಗಿದೆ. ಕುಂಬಳಕಾಯಿ ಕಳ್ಳ ಅಂದ್ರೆ ನೀವೇ ಯಾಕೆ ಹೆಗಲು ಮುಟ್ಟಿ ನೋಡ್ಕೋತೀರಾ? ಎಂದು ಅಧಿಕಾರಿಗಳ ಮೇಲೆ ಇಡಿ ರೇಡ್ ಆದ ಬಗ್ಗೆ ನಮ್ಮ ಮೇಲೂ ರೇಡ್ ಆಗಬಹುದು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಾಜಿ ಸಚಿವ ಮುರಗೇಶ ನಿರಾಣಿ ಪ್ರಶ್ನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಧಿಕಾರಿಗಳ ಮೇಲೆ ಇಡಿ ರೇಡ್ ಆಗಿದೆ. ಕುಂಬಳಕಾಯಿ ಕಳ್ಳ ಅಂದ್ರೆ ನೀವೇ ಯಾಕೆ ಹೆಗಲು ಮುಟ್ಟಿ ನೋಡ್ಕೋತೀರಾ? ಎಂದು ಅಧಿಕಾರಿಗಳ ಮೇಲೆ ಇಡಿ ರೇಡ್ ಆದ ಬಗ್ಗೆ ನಮ್ಮ ಮೇಲೂ ರೇಡ್ ಆಗಬಹುದು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಾಜಿ ಸಚಿವ ಮುರಗೇಶ ನಿರಾಣಿ ಪ್ರಶ್ನೆ ಮಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಲೀನ್ ಇದ್ದರೆ ಯಾವ ಇಡಿ ಬಂದರೂ ಹೆದರುವ ಅವಶ್ಯಕತೆ ಇಲ್ಲ. ಇಡಿ ಸ್ವತಂತ್ರ ಸಂಸ್ಥೆ. ಯಾರ ಕೈಗೊಂಬೆಯೂ ಅಲ್ಲ, ಸಾಕಷ್ಟು ಪ್ರೂಫ್ ಸಿಕ್ಕಿದೆ. ಪುರಾವೆ ಇಲ್ಲದೆ ಯಾರ ಮನೆಗೂ ಹೋಗಲ್ಲ. ಪ್ರಿಯಾಂಕ ಖರ್ಗೆ ಅವರು ಕ್ಲೀನ್ ಇದ್ದರೆ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಆರ್‌ಎಸ್‌ಎಸ್ ಬಗ್ಗೆ ಟೀಕೆಗೆ ಆಕ್ಷೇಪ:

ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರಿಗೆ ಉಜ್ವಲ ಭವಿಷ್ಯವಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಕೈಗಾರಿಕೆ, ಕೃಷಿ, ಶಿಕ್ಷಣದ ಕಡೆ ಗಮನಹರಿಸಲಿ. ಅವರ ತಂದೆ ದೊಡ್ಡ ಸ್ಥಾನದಲ್ಲಿದ್ದಾರೆ, ಜವಾಬ್ದಾರಿಯಿದೆ. ಸಂಘದ ಬಗ್ಗೆ ತಿಳಿಯದೆ ಮಾತನಾಡಬೇಡಿ. ಸಮಯವನ್ನು ಆರ್‌ಎಸ್‌ಎಸ್ ಹಿರಿಯರು, ತತ್ವ-ಸಿದ್ಧಾಂತದ ಬಗ್ಗೆ ಗೊತ್ತಿಲ್ಲದೇ ಮಾತನಾಡಲು ಬಳಸಬಾರದು. ಸಂಘವನ್ನು ಟಾರ್ಗೆಟ್ ಮಾಡೋದು ಪ್ರಚಾರಕ್ಕಾ? ಸಂಘ ರಿಜಿಸ್ಟರ್ ಮಾಡಿಸಿ ಅನ್ನೋದು ಕಂಟ್ರೋಲ್ ಮಾಡೋಕಾ ಎಂಬ ಪ್ರಶ್ನೆಗೆ ಪ್ರಿಯಾಂಕ ಖರ್ಗೆ ಕಾಗದದ ಹುಲಿ ಎಂದು ಟೀಕಿಸಿದರು.

ಕೆಲವರು ಪೇಪರ್ ಹುಲಿ. ದಿನಾ ಪೇಪರ್‌ನಲ್ಲಿ ನೆಗೆಟಿವ್ ಬಂದಾಗಲೇ ಕಾಣಿಸಿಕೊಳ್ಳುತ್ತಾರೆ. ಪ್ರಿಯಾಂಕ್ ಖರ್ಗೆ ಅವರು ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ರಮೇಶ್ ಜಿಗಜಿಣಗಿ ತಿಳಿವಳಿಕೆ ಹೇಳಿದ್ದಾರೆ:

ಆರ್‌ಎಸ್‌ಎಸ್ ಬಹಳ ಡೇಂಜರ್ ಅಂತ ಸಂಸದ ಜಿಗಜಿಣಗಿ ಹೇಳಿಕೆಯ ಆಡಿಯೋ ವೈರಲ್ ಆಗಿದೆ. ಇದು ಬಿಜಾಪುರ ಭಾಷೆ. ಅವರು ತಿಳಿವಳಿಕೆ ಹೇಳಲು ಪ್ರಯತ್ನಿಸಿದ್ದಾರೆ. ಕಾಡಸಿದ್ದೇಶ್ವರ ಸ್ವಾಮೀಜಿ ಆಡಿಯೋ ರೀತಿಯೇ ಇದು. ಬಿಜಾಪುರ ಭಾಷೆ ಸಮರ್ಥನೆ, ಬಿಜಾಪುರ-ಬಾಗಲಕೋಟೆ ಭಾಷೆ ಹಾಗೇ ಇರುತ್ತದೆ. ಪ್ರತಿ ಮಾತಿಗೂ ಆ ಶಬ್ದಗಳು ಬರುತ್ತವೆ. ಜಿಗಜಿಣಗಿ ಅವರು ಕೆಟ್ಟ ದೃಷ್ಟಿಯಿಂದ ಹೇಳಿಲ್ಲ. ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಅಂತ ನೋಡಬೇಕು. ಇದನ್ನು ಮೀಡಿಯಾ ವೈರಲ್ ಮಾಡುವುದು ಬೇಡ ಎಂದರು.

ವಿಧಾನ ಪರಿಷತ್ ಅಡ್ಡ ಮತದಾನ, ಬಿ.ವೈ.ವಿಜಯೇಂದ್ರ ಧರ್ಮಸ್ಥಳ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆಗಿರೋದು ಸ್ಪಷ್ಟ. ಅಡ್ಡ ಮತದಾನ ಆಗಿದೆ. ನಮ್ಮ 11 ಸೀಟ್‌ ಕಡಿಮೆಯಾಗಿ ಕಾಂಗ್ರೆಸ್‌ 11 ಸೀಟ್ ಪ್ಲಸ್ ಆಗಿರುವುದೇ ಇದಕ್ಕೆ ಸ್ಪಷ್ಟ ಸಾಕ್ಷಿ. ಯಾರು ಅಂತ ಗುರುತಿಸುವುದು ಕಷ್ಟ. ಇನ್ನೂರು ಕಳ್ಳರು ತಪ್ಪಿಸಿಕೊಂಡರೂ ಒಬ್ಬ ನಿಷ್ಠಾವಂತನಿಗೆ ಶಿಕ್ಷೆ ಆಗಬಾರದು ಎಂಬುದು ನಮ್ಮ ನಿಲುವು. ಪಕ್ಷದ ಎಚ್ಚರಿಕೆ, ಅಡ್ಡ ಮತ ಹಾಕಿದವರ ಬಗ್ಗೆ ಪುರಾವೆ ಸಿಕ್ಕರೆ ರಾಜ್ಯಾಧ್ಯಕ್ಷರು ಮತ್ತು ಹೈಕಮಾಂಡ್ ಸೂಚನೆ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯಾದರೆ ಪಕ್ಷ ಮತ್ತು ಹೈಕಮಾಂಡ್ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಆಣೆ ಪ್ರಮಾಣ ಮಾಡಿ ಅಂತ ಅಧ್ಯಕ್ಷರು ಎಮೋಷನಲ್ ಆಗಿ ಹೇಳಿದ್ದರು. ನಂತರ ಅವರೇ ಬೇಜಾರಾಗಿ ಹೇಳಿದ ಮಾತು ವಾಪಸ್ ಪಡೆಯುತ್ತೇನೆ ಎಂದು ಮೀಡಿಯಾ ಮುಂದೆ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದರು.

ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ನಮ್ಮ ಮಧ್ಯೆ ಯಾವುದೇ ವೈಯಕ್ತಿಕ ವ್ಯವಹಾರಿಕ ಸಂಬಂಧ ಇಲ್ಲ ಎಂದು ವಿಜಯೇಂದ್ರ ಧರ್ಮಸ್ಥಳದಲ್ಲಿ ಸ್ಪಷ್ಟೀಕರಣ ನೀಡಿದ್ದು ಒಳ್ಳೆಯದಾಗಿದೆ. ವೈಯಕ್ತಿಕ ವಿಷಯ ಹೊರಗಿರಲಿ, ವೈಯಕ್ತಿಕ ಜೀವನ, ವ್ಯವಹಾರ, ಸಂಬಂಧಗಳು ಪಕ್ಷದ ಚೌಕಟ್ಟಿನ ಒಳಗೆ ಬರಬಾರದು. ರಾಜಕಾರಣಕ್ಕೆ ತೊಂದರೆ ಬೇಡ. ವೈಯಕ್ತಿಕ ವಿಷಯಗಳಿಂದ ರಾಜಕಾರಣಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು. ಇಂದು ವಿಜಯೇಂದ್ರ ಅವರು ಯಾವುದೇ ವ್ಯವಹಾರಿಕ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಧರ್ಮಸ್ಥಳದಲ್ಲಿ ನಿಂತು ಸ್ಪಷ್ಟನೆ ಕೊಟ್ಟಿದ್ದು ಒಳ್ಳೆಯದಾಯಿತು. ಈ ಸ್ಪಷ್ಟನೆಯಿಂದ ಸಂಶಯ ಪಡುತ್ತಿದ್ದವರಿಗೆ ಕ್ಲಾರಿಟಿ ಸಿಕ್ಕಂತಾಗಿದೆ ಎಂದರು.

ಹೈಕಮಾಂಡ್‌ ಛೀಮಾರಿ ಸುಳ್ಳು:

ಆರ್.ಅಶೋಕ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಹೈಕಮಾಂಡ್ ಛೀಮಾರಿ ಹಾಕಿದೆ ಎಂಬ ಸುದ್ದಿ ಸುಳ್ಳು. ಅವರು ಅಲ್ಲಿಗೆ ಹೋದಾಗ ಮೀಡಿಯಾ, ಪಬ್ಲಿಕ್ ಯಾರೂ ಇರಲಿಲ್ಲ. ಅವರಿಬ್ಬರು, ನಮ್ಮ ಡೆಪ್ಯುಟಿ ಚೀಫ್ ಮತ್ತು ರಾಷ್ಟ್ರೀಯ ಅಧ್ಯಕ್ಷರು ಕೇವಲ ನಾಲ್ಕು ಜನ ಮಾತ್ರ ಇದ್ದರು. ಛೀಮಾರಿ ಹಾಕಿದರು ಎಂದು ಪೇಪರ್, ಟಿವಿಯಲ್ಲಿ ಬಂದಿದ್ದು ಸುಳ್ಳು. ಅಲ್ಲಿ ಅಂತಹ ಯಾವ ಘಟನೆಯೂ ನಡೆದಿಲ್ಲ. ಮೀಡಿಯಾದಲ್ಲಿ ಬಂದ ಸುದ್ದಿಗೆ ಯಾವುದೇ ರೀತಿಯ ಪ್ರೂಫ್ ಇಲ್ಲ. ಅನುಭವದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ತಪ್ಪಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿವಳಿಕೆ ಹೇಳಿದ್ದಾರೆ ಹೊರತು ಬೈದಿಲ್ಲ ಎಂದು ಸ್ಪಷ್ಟನೆ ನೀಡಿದರು.

----------

ಕೋಟ್‌...

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಅವಧಿ ಇನ್ನೂ 2-3 ತಿಂಗಳಿದೆ. ಆನಂತರ ರಾಷ್ಟ್ರೀಯ ನಾಯಕರು ಬದಲಾವಣೆ ಬಗ್ಗೆ ನಿರ್ಧಾರ ತೆಗೆದುಕೊಂಡರೆ ನೋಡಬೇಕು. ಒಂದು ವೇಳೆ ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ಹಗಲು-ರಾತ್ರಿ ರಾಜ್ಯ ಸುತ್ತಿ ಕೆಲಸ ಮಾಡಲು ಸಿದ್ಧ. ಆದರೆ, ಈಗ ಪೋಸ್ಟ್ ಖಾಲಿ ಇಲ್ಲದ ಕಾರಣ ಆಕಾಂಕ್ಷಿ ಅಲ್ಲ. ಈಗಾಗಲೇ ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷ, ಸರ್ದಾರ ವಲ್ಲಭಭಾಯಿ ಪಟೇಲ್ ನಿಧಿ ಸಂಗ್ರಹ ಸಮಿತಿ ಸಂಚಾಲಕನಾಗಿ, ಎರಡು ಬಾರಿ ಕೈಗಾರಿಕೆ ಸಚಿವ ಮತ್ತು ಇಲಾಖೆ ಸಚಿವನಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಯಶಸ್ವಿಯಾಗಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯರು, ಪರಿವಾರದ ಹಿರಿಯರು, ರಾಷ್ಟ್ರೀಯ ನಾಯಕರು ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುವೆ.

- ಮುರಗೇಶ ನಿರಾಣಿ, ಮಾಜಿ ಸಚಿವ

-----

ಬಾಕ್ಸ್

ವಿಜಯೇಂದ್ರ ಚಿಕ್ಕವರೆಂದು ಕೆಲವರ ಅಸಮಾಧಾನ

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಕುರಿತು ಮಾತನಾಡಿದ ಮುರಗೇಶ್ ನಿರಾಣಿ, ಸ್ಥಾನ 3 ವರ್ಷಕ್ಕೊಮ್ಮೆ ಬದಲಾವಣೆಯಾಗಲಿದೆ. ಕರ್ನಾಟಕ ಬಿಜೆಪಿಯಲ್ಲಿ ಮಂಡಲ ಅಧ್ಯಕ್ಷರಿಂದ ಹಿಡಿದು, ರಾಷ್ಟ್ರೀಯ ಅಧ್ಯಕ್ಷರವರೆಗೆ ಪ್ರತಿ 3 ವರ್ಷಕ್ಕೊಮ್ಮೆ ಸಂಘಟನಾತ್ಮಕ ಬದಲಾವಣೆ ಆಗುತ್ತದೆ. ವಿಶೇಷ ಪ್ರಕರಣದಲ್ಲಿ ಮಾತ್ರ ವಿಸ್ತರಣೆ ಇರುತ್ತದೆ. ವಿಜಯೇಂದ್ರಗೆ ಇನ್ನೂ ಕಾಲಾವಕಾಶ ಇದೆ. ಈಗ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರಿಗೆ 2.5 ವರ್ಷ ಆಗಿದೆ. ಇನ್ನೂ ಕಾಲಾವಕಾಶ ಇದೆ. ಅವರು ಯುವಕರಾಗಿ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಸಂಚರಿಸಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ವಯಸ್ಸಿನಲ್ಲಿ ಚಿಕ್ಕವರಾಗಿರುವುದರಿಂದ ಕೆಲವರಿಗೆ ಅವರ ಬಗ್ಗೆ ಅಸಮಾಧಾನ ಇದೆ, ಉಳಿದ ಸಮಯದಲ್ಲಿ ಹಿರಿಯರ ಮಾರ್ಗದರ್ಶನ ಪಡೆದು ಪಕ್ಷ ಸಂಘಟನೆಗೆ ಹೆಚ್ಚಿನ ಗಮನ ಕೊಟ್ಟರೆ ಒಳ್ಳೆಯದು. ಸದ್ಯ ಬದಲಾವಣೆ ಚರ್ಚೆ ಇಲ್ಲ, ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಈಗ ಯಾವುದೇ ಚರ್ಚೆ ಆಗಿಲ್ಲ ವಿಶ್ವಾಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯೋಗಪತಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಿ
ಮಹಿಳಾ ವಿವಿಯಲ್ಲಿ ನೇಮಕಾತಿ ಮರು ಪರಿಶೀಲಿಸಲು ಮನವಿ