ಅಪಾಯ ಮಟ್ಟದ ವಿದ್ಯುತ್ ತಂತಿ, ಶಿಥಿಲಗೊಂಡಿರುವ ಕಂಬ ಕಂಡುಬಂದರೆ ದೂರು ನೀಡಿ

KannadaprabhaNewsNetwork | Published : Feb 28, 2025 12:49 AM

ಸಾರಾಂಶ

ಅಂಕಿ ಆಂಶಗಳ ಪ್ರಕಾರ ಜಿಲ್ಲೆಯಲ್ಲಿ ಕಳೆದ 4 ವರ್ಷಗಳಿಂದ 17 ಜನರು ಅಲ್ಯೂಮಿನಿಯಂ ಏಣಿಗಳನ್ನು ಮತ್ತು ನೀರು ಹಾಯಿಸಲು ಅಲ್ಯೂಮಿನಿಯಂ ಸ್ಪ್ರಿಂಕ್ಲರ್‌ ಪೈಪ್‌ಗಳ ಬಳಕೆಯಿಂದಾಗಿ ಉಂಟಾದಂತಹ ವಿದ್ಯುತ್‌ ಅನಾಹುತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಚೆಸ್ಕಾಂನ ವಿದ್ಯುತ್ ವಿತರಣಾ ಮಾರ್ಗಗಳು ಬಹುತೇಕ ತೋಟಗಳು, ಅರಣ್ಯ ಪ್ರದೇಶಗಳ ಮಧ್ಯೆ ಹಾಗೂ ಕಡಿದಾದ ಬೆಟ್ಟಗುಡ್ಡಗಳ ಅಂಚಿನಲ್ಲಿ ಹಾದುಹೋಗುತ್ತಿದ್ದು, ಮಳೆಗಾಲದ ಹಾಗೂ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಮರದ ಕೊಂಬೆಗಳು ಬೀಳುವಂತದ್ದು, ಕಡಿದಾದ ಗುಡ್ಡಗಳ ಜರಿತದಿಂದ ಕಂಬಗಳು ಬಾಗಿ, ತಂತಿಗಳು ತೀರಾ ಅಪಾಯಮಟ್ಟದಲ್ಲಿ ಜಾರುವಂತಹ ಸನ್ನಿವೇಶಗಳು ಎದುರಾಗಬಹುದು.

ಇದರಿಂದಾಗಿ ವಿದ್ಯುತ್ ಅಪಘಾತಗಳಾಗುವ ಸಂಭವವಿರುತ್ತದೆ. ಆದ್ದರಿಂದ, ಅಪಾಯ ಮಟ್ಟದಲ್ಲಿರುವ ವಿದ್ಯುತ್ ತಂತಿಗಳು, ಶಿಥಿಲಗೊಂಡಿರುವ ಕಂಬಗಳು ಕಂಡುಬಂದರೆ ಈ ವ್ಯಾಪ್ತಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ 24*7 ಸಹಾಯವಾಣಿ 1912 ಗೆ ಸಾರ್ವಜನಿಕರು ದೂರು ನೀಡಲು ಕೋರಿದೆ.

ಹಾಗೆಯೇ ಕೊಡಗು ಜಿಲ್ಲೆಯಾದ್ಯಂತ ರೈತರು ತಮ್ಮ ತೋಟಗಳಲ್ಲಿ ಕಾಳುಮೆಣಸು ಕೀಳಲು ಮತ್ತು ಮರದ ಕೊಂಬೆಗಳನ್ನು ಕಡಿಯಲು ಅಲ್ಯೂಮಿನಿಯಂ ಏಣಿಗಳನ್ನು ಮತ್ತು ನೀರು ಹಾಯಿಸಲು ಅಲ್ಯೂಮಿನಿಯಂ ಸ್ಪ್ರಿಂಕ್ಲರ್ ಪೈಪ್‌ಗಳನ್ನು ಉಪಯೋಗಿಸುತ್ತಿದ್ದು, ಇವುಗಳು ವಿದ್ಯುತ್ ಮಾರ್ಗಕ್ಕೆ ತಾಗಿ ಆಗಿಂದಾಗ್ಗೆ ವಿದ್ಯುತ್ ಅಪಘಾತಗಳು ಸಂಭವಿಸುತ್ತಿದೆ. ಆದ್ದರಿಂದ, ಅಲ್ಯೂಮಿನಿಯಂ, ಕಬ್ಬಿಣದ ಏಣಿ ಬದಲು ಪೈಬರ್ ಏಣಿಗಳನ್ನೇ ಕಡ್ಡಾಯವಾಗಿ ಉಪಯೋಗಿಸುವುದು.

ಅಂಕಿ ಅಂಶಗಳ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಕಳೆದ 4 ವರ್ಷಗಳಿಂದ ಸುಮಾರು 17 ಜನರು ಅಲ್ಯೂಮಿನಿಯಂ ಏಣಿಗಳನ್ನು ಮತ್ತು ನೀರು ಹಾಯಿಸಲು ಅಲ್ಯೂಮಿನಿಯಂ ಸ್ಪ್ರಿಂಕ್ಲರ್ ಪೈಪ್‌ಗಳ ಬಳಕೆಯಿಂದಾಗಿ ಉಂಟಾದಂತಹ ವಿದ್ಯುತ್ ಅನಾಹುತದಲ್ಲಿ ತಮ್ಮ ಪ್ರಾಣಗಳನ್ನು ಕಳೆದುಕೊಂಡಿರುತ್ತಾರೆ. ಆದ್ದರಿಂದ ತೋಟದ ಮಾಲೀಕರು ತಮ್ಮ ಕೆಲಸಗಾರರಿಗೆ/ ನೌಕರರಿಗೆ ತಮ್ಮ ತೋಟದಲ್ಲಿ ಹಾದು ಹೋಗುವ ವಿದ್ಯುತ್ ಮಾರ್ಗಗಳ ಬಗ್ಗೆ ಮೊದಲೇ ತಿಳುವಳಿಕೆ ನೀಡಿ ವಿದ್ಯುತ್ ಅಪಘಾತವನ್ನು ತಪ್ಪಿಸಲು ಇಲಾಖೆಯೊಂದಿಗೆ ಸಹಕರಿಸುವಂತೆ ಚಾವಿಸನಿನಿ, ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Share this article