ಪಾಠ ಅರ್ಥೈಸಿಕೊಂಡಲ್ಲಿ ಪರೀಕ್ಷಾ ಭಯ ಕಾಡದು

KannadaprabhaNewsNetwork | Published : Jun 30, 2024 12:57 AM

ಸಾರಾಂಶ

ಶಾಲಾ -ಕಾಲೇಜು ವಿದ್ಯಾರ್ಥಿಗಳು ಅಂದಿನ ಪಾಠ- ಪ್ರವಚನಗಳನ್ನು ತಪ್ಪದೇ ಅರ್ಥ ಮಾಡಿಕೊಂಡು ಅಭ್ಯಾಸ ಮಾಡಿದಲ್ಲಿ ಸರಿಯಾಗಿ ಮನದಟ್ಟಾಗುವುದಷ್ಟೇ ಅಲ್ಲ, ಯಾವುದೇ ಪರೀಕ್ಷಾಭಯವೂ ಕಾಡುವುದಿಲ್ಲ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದ್ದಾರೆ.

- ಜೈನ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಡಾ.ಮಂಜುನಾಥ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಶಾಲಾ -ಕಾಲೇಜು ವಿದ್ಯಾರ್ಥಿಗಳು ಅಂದಿನ ಪಾಠ- ಪ್ರವಚನಗಳನ್ನು ತಪ್ಪದೇ ಅರ್ಥ ಮಾಡಿಕೊಂಡು ಅಭ್ಯಾಸ ಮಾಡಿದಲ್ಲಿ ಸರಿಯಾಗಿ ಮನದಟ್ಟಾಗುವುದಷ್ಟೇ ಅಲ್ಲ, ಯಾವುದೇ ಪರೀಕ್ಷಾಭಯವೂ ಕಾಡುವುದಿಲ್ಲ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.

ನಗರದ ಬಾಡ ಕ್ರಾಸ್‌ನಲ್ಲಿರುವ ಜೈನ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ, ಯಾವ ಪಠ್ಯಗಳೂ ಆಯಾ ತರಗತಿಗಳ ವಿದ್ಯಾರ್ಥಿಗಳ ಸಾಮರ್ಥ್ಯ ಮೀರಿ ರಚನೆ ಆಗಿರುವುದಿಲ್ಲ. ಆದರೂ ಅರ್ಥವಾಗುವುದಿಲ್ಲ ಎಂಬುದಕ್ಕೆ ಅವರಲ್ಲಿನ ನಿರಾಸಕ್ತಿಯೇ ಕಾರಣ. ಇದು ಮುಂದೆ ಪರೀಕ್ಷಾ ಭಯವನ್ನು ತಂದೊಡ್ಡುತ್ತದೆ. ಆದ್ದರಿಂದ ಅಂದಿನ ಪಾಠಗಳನ್ನು ತಪ್ಪದೇ ಅರ್ಥ ಮಾಡಿಕೊಂಡು, ಸ್ಮರಣೆಯಲ್ಲಿಟ್ಟುಕೊಂಡು ಪರೀಕ್ಷಾ ಕಾಲಕ್ಕೆ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಹಿರಿಯ ವಿದ್ಯಾರ್ಥಿಗಳು ಕಿರಿಯರನ್ನು ಸ್ವಾಗತಿಸಿ ಮಾರ್ಗದರ್ಶಿಸುವುದು ನಮ್ಮ ಸನಾತನ ಗುರುಕುಲ ಪದ್ಧತಿಯಿಂದಲೂ ನಡೆದು ಬಂದ ಸತ್ಸಂಪ್ರದಾಯವಾಗಿದೆ. ಈ ಕಾಲೇಜಿನಲ್ಲೂ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿರುವುದು ಯೋಗ್ಯ ಹಾಗೂ ಅನುಕರಣೀಯ ನಡೆಯಾಗಿದೆ ಎಂದರು.

ಜೈನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಚಲ್ ಚಂದ್ ಜೈನ್ ಮಾತನಾಡಿ, ಭಾರತವು ಜ್ಞಾನದ ನಿಧಿಯಾಗಿದೆ. ವಿದ್ಯಾರ್ಥಿಗಳು ಗುಂಪು ಚರ್ಚೆ ಮೂಲಕ ಪಠ್ಯ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತ ಮಾರ್ಗ ಎಂದರು.

ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ರಘು ಅಧ್ಯಕ್ಷೀಯ ನುಡಿಗಳನ್ನಾಡಿದರು. ಅಧ್ಯಾಪಕಿಯರಾದ ಶ್ವೇತಾ ಹಾಗೂ ಪಾವನಾ ಅತಿಥಿಗಳ ಪರಿಚಯ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು.

- - -

-29ಕೆಡಿವಿಜಿ32ಃ:

ದಾವಣಗೆರೆಯ ಜೈನ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಉದ್ಘಾಟಿಸಿದರು.

Share this article