ಸಚಿವರ ರಾಜ್ಯದ ಬರ ಪರಿಸ್ಥಿತಿಯ ಅಧ್ಯಯನ ಮುಂದುವರಿದಿದ್ದು, ಸತತ 3ನೇ ದಿನವಾದ ಶುಕ್ರವಾರವೂ ತಮ್ಮ ಉಸ್ತುವಾರಿ ವ್ಯಾಪ್ತಿಯ ಜಿಲ್ಲೆಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯ ಅವಲೋಕನ ನಡೆಸಿದರು. ರೈತರ ಹೊಲಗಳಿಗೆ ಭೇಟಿ ನೀಡಿ, ಬರದಿಂದ ಹಾನಿಗೆ ಒಳಗಾದ ಬೆಳೆಗಳ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು:
ಸಚಿವರ ರಾಜ್ಯದ ಬರ ಪರಿಸ್ಥಿತಿಯ ಅಧ್ಯಯನ ಮುಂದುವರಿದಿದ್ದು, ಸತತ 3ನೇ ದಿನವಾದ ಶುಕ್ರವಾರವೂ ತಮ್ಮ ಉಸ್ತುವಾರಿ ವ್ಯಾಪ್ತಿಯ ಜಿಲ್ಲೆಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯ ಅವಲೋಕನ ನಡೆಸಿದರು. ರೈತರ ಹೊಲಗಳಿಗೆ ಭೇಟಿ ನೀಡಿ, ಬರದಿಂದ ಹಾನಿಗೆ ಒಳಗಾದ ಬೆಳೆಗಳ ಪರಿಶೀಲನೆ ನಡೆಸಿದರು.ಸಂತೋಷ ಲಾಡ್ ಅವರು ಧಾರವಾಡ ಜಿಲ್ಲೆ, ಜಮೀರ್ ಅಹ್ಮದ್ ಖಾನ್ ವಿಜಯನಗರ ಜಿಲ್ಲೆ, ಬಸವರಾಜ ರಾಯರಡ್ಡಿ ಗದಗ ಹಾಗೂ ಮುಂಡರಗಿ ತಾಲೂಕಿನಲ್ಲಿ, ರುದ್ರಪ್ಪ ಲಮಾಣಿ ಹಾವೇರಿ, ಡಾ। ಅಜಯ್ ಧರ್ಮಸಿಂಗ್ ರಾಯಚೂರು, ನಾಗೇಂದ್ರ ಬಳ್ಳಾರಿಯ ಸಂಡೂರು ತಾಲೂಕಿನಲ್ಲಿ, ಯತೀಂದ್ರ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ಹುಣಸೂರು ಭಾಗದಲ್ಲಿ, ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರದ ಹನೂರು ಭಾಗದಲ್ಲಿ, ಕೆ.ಜೆ.ಜಾರ್ಜ್ ಚಿಕ್ಕಮಗಳೂರು, ಲಕ್ಷ್ಮಣ ಸವದಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರ ಪರಿಶೀಲನೆ ನಡೆಸಿದರು.
ಸಚಿವ ಸಂತೋಷ ಲಾಡ್ ಅವರು ಧಾರವಾಡ ಜಿಲ್ಲೆ ಅಳ್ನಾವರ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಬರ ಪರಿಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು. ಬಳಿಕ, ಅಳ್ನಾವರ ತಾಲೂಕಿನ ಬೆಣಚಿ ಗ್ರಾಮ ವ್ಯಾಪ್ತಿಯ ಗೋವಿನ ಜೋಳದ ಹೊಲಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.ಸಚಿವ ಜಮೀರ್ ಅಹ್ಮದ್ ಖಾನ್ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಕೂಡ್ಲಗಿ, ಕೊಟ್ಟೂರು, ಹೊಸಪೇಟೆ ತಾಲೂಕಿನ ಬರಪೀಡಿತ ಭಾಗಗಳಿಗೆ ಭೇಟಿ ನೀಡಿ ಬೆಳೆ ಹಾನಿ ಮತ್ತು ರೈತರ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದರು. ಹೊಸಪೇಟೆ ತಾಲೂಕಿನ ನಂದಿಬಂಡಿ, ಹರಪನಹಳ್ಳಿ ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದ ರೈತರ ಜೊತೆ ಸಂವಾದ ನಡೆಸಿದರು.
ಸಚಿವ ಬಸವರಾಜ ರಾಯರಡ್ಡಿಯವರು ಗದಗ ಹಾಗೂ ಮುಂಡರಗಿ ತಾಲೂಕು ವ್ಯಾಪ್ತಿಯ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ಜಿ.ಪಂ.ಸಭಾಭವನದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಗದಗ ತಾಲೂಕಿನ ಗಂಗಿಮಡಿ ಗ್ರಾಮದ ಜಮೀನಿಗೆ ಭೇಟಿ ನೀಡಿ, ಶೇಂಗಾ, ಹೆಸರು ಹಾಗೂ ಮೆಣಸಿನಕಾಯಿ ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿದರು. ಅಲ್ಲಿಂದ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆಯಲಾಗಿದ್ದ ಮೆಣಸಿನಕಾಯಿ, ಈರುಳ್ಳಿ ಬೆಳೆಗಳನ್ನು ಪರಿಶೀಲಿಸಿದರು.ಸಚಿವ ರುದ್ರಪ್ಪ ಲಮಾಣಿಯವರು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಅಳಲಗೇರಿ ಹಾಗೂ ಕಲ್ಲೇದೇವರು ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ, ರೈತರೊಂದಿಗೆ ಬೆಳೆ ಪರಿಸ್ಥಿತಿ ಕುರಿತು ಚರ್ಚಿಸಿದರು. ರೈತರ ಅಹವಾಲುಗಳನ್ನು ಆಲಿಸಿದ ಸಚಿವರು, ಬೆಳೆ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ, ಹಿರೇಕೆರೂರು ತಾಲೂಕಿನ ವಿವಿಧ ಗ್ರಾಮಗಳ ಕೆರೆ ವೀಕ್ಷಣೆ ಮಾಡಿದರು.
ಸಚಿವ ಡಾ। ಅಜಯ್ ಧರ್ಮಸಿಂಗ್ ಅವರು ರಾಯಚೂರು ನಗರ, ಗ್ರಾಮೀಣ, ದೇವದುರ್ಗ,ಲಿಂಗಸುಗೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿದರು. ರಾಯಚೂರು ಸಮೀಪದ ಯಕ್ಲಾಸಪುರ, ದೇವದುರ್ಗ ತಾಲೂಕಿನ ಗಬ್ಬೂರ, ಮಲದಕಲ್ ಕ್ರಾಸ್, ಮಸರಕಲ್, ಚಿಂಚೋಡಿ, ಲಿಂಗಸುಗೂರು ತಾಲೂಕಿನ ಗುರಗುಂಟಾ, ಮೆಟ್ಟಮರಡಿದೊಡ್ಡಿ, ದೇವರಬುಪೂರ, ಯರಡೋಣಿಯಲ್ಲಿ ಬರ ಪರಿಸ್ಥಿತಿಯ ಅವಲೋಕನ ನಡೆಸಿದರು.