ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿಮ್ಮ ಕಾರ್ಯಕ್ರಮ ಪರಿಣಾಮಕಾರಿ ಆಗಿದ್ರೆ, ಬಡವರಿಗೆ ಆರ್ಥಿಕವಾಗಿ ಶಕ್ತಿ ದೊರಕಿದ್ರೆ ಐದು ದಿನ ಪ್ರಚಾರ ಮಾಡುವ ಅವಶ್ಯಕತೆ ಇರಲಿಲ್ಲ. ದೇಶದಲ್ಲಿ ತಲಾ ಆದಾಯದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ರೆ, ಪ್ರತಿ ಕುಟುಂಬದ ತಲಾ ಆದಾಯ ಅಷ್ಟೊಂದು ಪ್ರಮಾಣದಲ್ಲಿದ್ದರೆ ಈ ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಏನಿದೆ? ನಿಮ್ಮಲ್ಲಿಯೇ ದ್ವಂದ್ವ ನಿಲುವುಗಳಿವೆ ಎಂದು ಟೀಕಿಸಿದರು.
ಸರ್ಕಾರ ಗ್ಯಾರಂಟಿಗೆ ದುಡ್ಡು ಖರ್ಚು ಮಾಡ್ತಿಲ್ಲ ಎಂದು ನಾನು ಹೇಳಿಲ್ಲ, ಕೇಂದ್ರವೂ ಸಹ ಸಾಲ ಮಾಡಿದೆ, ಇವರು ಸಹ ಸಾಲ ಮಾಡಿದ್ದಾರೆ, ಖಜಾನೆ ತುಂಬಿಸುತ್ತೇನೆ ಎಂದು ಗ್ಯಾರಂಟಿಗೆ ಹಣ ನೀಡಿದ್ದಾರೆ. ಗ್ಯಾರಂಟಿ ಖರ್ಚಿಗಿಂತ ಸಾಲ ಹೆಚ್ಚು ಮಾಡಿದ್ದಾರೆ. ಆದರೆ ನಾನು ಮುಡಾ ಹಗರಣದ ಬಗ್ಗೆ ಮಾತನಾಡಲ್ಲ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹88 ಕೋಟಿ ದುರ್ಬಳಕೆಯನ್ನು ಸಿದ್ದರಾಮಯ್ಯ ಅವರೇ ಒಪ್ಪಿಕೊಂಡರು. ರಾಜ್ಯದ ಆಡಳಿತದಲ್ಲಿ ಹಲವಾರು ವೈಫಲ್ಯಗಳಿವೆ, ಸಿಎಂಗೆ ನೇರವಾಗಿ ಕೇಳ್ತಿನಿ ಎಂದರು.ಯುಕೆಪಿಗೆ ₹3 ಸಾವಿರ ಕೋಟಿ ಏತಕ್ಕೆ ಸಾಲುತ್ತೆ:ರಾಜ್ಯ ಸರ್ಕಾರ ಯುಕೆಪಿ ಯೊಜನೆ ಅನುಷ್ಠಾನಕ್ಕೆ ತರಲು ಜವಾಬ್ದಾರಿ ಮೆರೆಯುತ್ತಿದೆ? 130 ಟಿಎಂಸಿ ನೀರು ರೈತರ ಹೊಲಕ್ಕೆ ಹರಿಸಲು ನಿಮ್ಮ ಕೊಡುಗೆ ಏನು? ಕೇಂದ್ರ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಮಾಡಿಸಿ ಅಂತ ಹೇಳ್ತೀರಿ, 516 ಮೀಟರ್ ಗೆ ಗೇಟ್ ನಿಲ್ಲಿಸಿಕೊಂಡು ಕೂತಿದ್ದೀರಿ, ಭೂಸ್ವಾಧೀನಕ್ಕೆ ದುಡ್ಡಿನ ಕೊರತೆ ಕಾಡ್ತಿದೆ, ನೀವು ಬಜೆಟ್ನಲ್ಲಿ ತೆಗೆದಿಸಿರುವ ₹3 ಸಾವಿರ ಕೋಟಿ ಹಣ ಯಾವುದಕ್ಕೆ ಸಾಲುತ್ತೆ, ನಾನು ಅತ್ಯಂತ ಕಡಿಮೆ ಅವಧಿಯಲ್ಲಿ ಸಿಎಂ ಆಗಿದ್ದೆ. ಆಗ ನೀರಾವರಿ ಇಲಾಖೆಯಲ್ಲಿ ಕಾಂಗ್ರೆಸ್ ಸದಸ್ಯರಿಗೆ ಜವಾಬ್ದಾರಿ ಕೊಟ್ಟಿದ್ದೆ, ಆಗ ನಮ್ಮ ಇಲಾಖೆಯಲ್ಲಿ ತಲೆ ಹಾಕಬೇಡಿ ಎಂದು ನನಗೆ ಹೇಳಿದ್ದರು ಎಂದು ನೆನಪಿದರು.
ಕೃತಜ್ಞತೆಯ ಸೌಜನ್ಯ ಬೇಡವೇ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೇನು ಸಮಸ್ಯೆ ಆಗುತ್ತಿದೆ. ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಸರಿಯಾಗಿ ಪೂರೈಕೆ ಮಾಡ್ತಿಲ್ಲ ಎಂಬ ಆರೋಪ ಮಾಡ್ತೀರಿ. ಕೇಂದ್ರ ಸರ್ಕಾರದಲ್ಲಿ ಬುದ್ಧಿವಂತರಿಲ್ಲ, ನೀವು ಬುದ್ಧಿವಂತರು ನೀವೇ ಸಲಹೆ ಕೊಡಿ, ಕಷ್ಟದ ಪರಿಸ್ಥಿತಿಯಲ್ಲೂ ನಿರ್ವಹ ಮಾಡುತ್ತಿದ್ದರೂ ಸೌಜನ್ಯ ಬೇಡವೆ ನಿಮಗೆ? ಸದೃಢವಾಗಿ ಖಜಾನೆ ನಿರ್ವಹಣೆ ಮಾಡುತ್ತಿದ್ದೀರಿ, ದಿನ ಕಷ್ಟ ಪಡ್ತಿರುವ ಕುಟುಂಬಗಳಿಗೆ ನಿಮ್ಮ ಸಹಕಾರ ಏನು? ಎಂದು ಪ್ರಶ್ನಿಸಿದರು.
ಯುಕೆಪಿ ಯೋಜನೆ ಗೆಜೆಟ್ ನೋಟಿಫಿಕೇಶನ್ ಯಾಕಾಗ್ತಿಲ್ಲ ಎಂಬ ಪ್ರಶ್ನೆಗೆ ಇಲ್ಲಿಯ ಸರ್ಕಾರ ಕೇಂದ್ರ ಸರ್ಕಾರದ ಜೊತೆಗೆ ಜಗಳ ಮಾಡದೆ ಕೇಂದ್ರ ಸರ್ಕಾರ ಜೊತೆಗೆ ಭೇಟಿ ಮಾಡಿ ಚರ್ಚಿಸಿ ಪರಿಹರಿಸುವ ಅಗತ್ಯತೆ ಇದೆ. ಯೋಜನೆ ಜಾರಿಗೆ ಕೆಲವು ಕಾನೂನು ತೊಡಕುಗಳಿವೆ. ಆ ಕಾನೂನು ತೊಡಕು ನಿವಾರಿಸಬೇಕಿದೆ, ಪ್ರತಿನಿತ್ಯ ಮೋದಿ ಬೈದು ಹೋದ್ರೆ ಯಾರೂ ಕೂಡ ಚರ್ಚೆಗೆ ಬರಲ್ಲ, ಪಕ್ಕದ ಆಂಧ್ರಪ್ರದೇಶದ ಜನ ಜಾಣರಿದ್ದಾರೆ, ಸೂಕ್ಷ್ಮವಾಗಿ ನಿಮಗೆ ಹಿಂಟ್ ಕೊಟ್ಟಿದ್ದೇನೆ ಎಂದು ಪರೋಕ್ಷವಾಗಿ ಪ್ರಾದೇಶಿಕ ಪಕ್ಷಗಳಿಗೆ ಅಧಿಕಾರ ಕೊಡುವುದು ಪರಿಹಾರ ಎಂದು ಕುಮಾರಸ್ವಾಮಿ ಹೇಳಿದರು. ಎತ್ತಿನ ಹೊಳೆ ಯೋಜನೆಗೆ ಅನುಮತಿ ಕೊಡ್ತಿಲ್ಲ ಎಂಬ ಪ್ರಶ್ನೆಗೆ ಸುಪ್ರಿಂ ಕೋರ್ಟಿನಲ್ಲಿ ಪ್ರಕರಣ ಇದೆ. ತಮಿಳುನಾಡಿನಲ್ಲಿ ನಿಮ್ಮದೇ ಸರ್ಕಾರ ಇದೆ, ಅಕ್ಕ ಪಕ್ಕದ ರಾಜ್ಯಗಳ ಜೊತೆಗೆ ಸಮನ್ವಯ ಸಾಧಿಸುವುದು ಪರಿಹಾರ ಎಂದುತಿಳಿಸಿದರು.