ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿಯೊಬ್ಬರು ಸಮಾಜದ ಹಿತಕ್ಕೆ ಶ್ರಮಿಸಬೇಕು. ಸದೃಢ ಸಮಾಜದಲ್ಲಿ ಸಾಧನೆ ಒಂದು ಭಾಗ. ಸಣ್ಣ ಕೆಲಸಗಳಲ್ಲಿ ದೊಡ್ಡ ತೃಪ್ತಿ ಹೊಂದುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಮೌಢ್ಯ ದೂರವಾಗಬೇಕು. ಇತಿಹಾಸ ಪ್ರಜ್ಞೆ ಮುಖ್ಯ ಎಂದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ಶನಿವಾರ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಾರಿಗೆ ತಂದ ಮೀಸಲಾತಿಗೆ 106ರ ಸಂಭ್ರಮಾಚರಣೆ ಮತ್ತು ವೇದಿಕೆಯ 14ನೇ ವಾರ್ಷಿಕೋತ್ಸವದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಾಧಕರನ್ನು ಗಿಡ ಬೆಳೆಸುವ ರೀತಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಪ್ರಶಸ್ತಿ, ಪ್ರಶಂಸೆ, ಅಭಿನಂದನೆ ಇವುಗಳು ಬೆಳೆಯುವ ಬೀಜಕ್ಕೆ ಬೆಚ್ಚನೆಯ ಮಣ್ಣು, ತಂಪಾದ ನೀರು, ಸ್ಫೂರ್ತಿ ತುಂಬುವ ಸೂರ್ಯನ ಕಿರಣಗಳಿದ್ದಾಗೆ. ಸಮಾಜದ ಮಧ್ಯೆ ಕೂರಿಸಿ ಸಾಧಿಸಿದ್ದೀರಾ ಎಂದು ಪ್ರೇರೇಪಿಸುವುದು ಒಂದು ಮಹತ್ಕಾರ್ಯ ಎಂದರು.ಬದುಕಿನಲ್ಲಿ ಗುರಿ ತಲುಪಲು ಪ್ರಯತ್ನ ಮುಖ್ಯ. ಸಾಧನೆ ಯಶಸ್ಸಿನ ಒಂದು ಭಾಗ. ಮನಪೂರ್ವಕವಾಗಿ ಸಾಧಕರನ್ನು ಸನ್ಮಾನಿಸುವ ಕೆಲಸ ದೊಡ್ಡದು. ಎಲೆಮರೆಯ ಕಾಯಿ ತರ ಕಾರ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಆರ್ಥಿಕವಾಗಿ ಸಹಾಯವಾಗದಿದ್ದರು, ಭಾವನಾತ್ಮಕವಾಗಿ ಪ್ರೋತ್ಸಾಹ ಬೆಳೆಸುತ್ತದೆ. ಒಂದು ಬೆಳಕಿನ ಮೂಲಕ ಇನ್ನಷ್ಟು ಬೆಳಕು ಹಬ್ಬಿಸುವ ಕಾರ್ಯ ಇದಾಗಿದೆ ಎಂದು ಅವರು ಶ್ಲಾಘಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ನಾಡಿನಸಮಸ್ತ ಜನಸಮುದಾಯದ ಹಿತ ಕಾಯಲು ಪ್ರಜಾಪ್ರಭುತ್ವದ ಮಾದರಿ ದೊರೆಯಾಗಿದ್ದರು. ತಳ ಸಮುದಾಯದಗಳಿಗೆ ನೂರಾರು ವರ್ಷದ ಹಿಂದೆಯೇ ಸಂವಿಧಾನತ್ಮಕ ಮಾದರಿಯಾಗಿ ಮೀಸಲಾತಿ ಜಾರಿ ಮಾಡಿದ್ದರು ಎಂದರು.ವೈದ್ಯ ಸಾಹಿತಿ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ಸಮಾಜದಲ್ಲಿ ಮೇಲು ಕೀಳು ಎಂಬ ಭಾವೆನೆ ಬೇರೂರಿತ್ತು. ಕೆಳವರ್ಗದವರಿಗೆ ಉದ್ಯೋಗ ಮತ್ತಿತರ ಕಡೆಗಳಲ್ಲಿ ಉತ್ತಮ ಸ್ಥಾನಮಾನಗಳು ಸಿಗುತ್ತಿರಲಿಲ್ಲ. ಶಿಕ್ಷಣ ಪಡೆಯುವುದಕ್ಕೂ ಅವಕಾಶವಿರಲಿಲ್ಲ. ಆದ್ದರಿಂದ ತಳಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಸ್ಥಾನಮಾನ ಕಲ್ಪಿಸಿಕೊಡುವ ಉದ್ದೇಶದಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿಯನ್ನು ಜಾರಿಗೆ ತಂದರು ಎಂದರು.
ಇದೇ ವೇಳೆ ಕೃಷಿ ವಿಜ್ಞಾನಿ ಡಾ. ವಸಂತ ಕುಮಾರ್ ತಿಮಕಾಪುರ ಅವರಿಗೆ ಮನ್ ಮಹಾರಾಜ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ. ವಸಂತಮ್ಮ, ಡಾ. ಸುಜಾತ ಅಕ್ಕಿ, ಕೆರೋಡಿ ಲೋಲಾಕ್ಷಿ, ಅಂಬಿಕ ಎನ್. ಮಸಗಿ ಮೊದಲಾದವರಿಗೆ ಪದ್ಮಭೂಷಣ ಯಶೋಧರಮ್ಮ ದಾಸಪ್ಪ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅಲ್ಲದೆ, ವಿಶೇಷ ಸೇವಾ ಭೂಷಣ ಪ್ರಶಸ್ತಿ, ಮಾದರಿ ರೈತ ಪ್ರಶಸ್ತಿ ಹಾಗೂ ಶಿಕ್ಷಣ, ರಂಗಭೂಮಿ, ಸಂಗೀತ ನೃತ್ಯ ವಿಭಾಗ, ಸಮಾಜ ಸೇವೆ, ಯೋಗ, ಕ್ರೀಡಾ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕುಣಿಗಲ್ ಅರೆಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ, ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಅಧ್ಯಕ್ಷೆ ಎಚ್.ಎಲ್. ಯಮುನಾ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮೊದಲಾದವರು ಇದ್ದರು.
ಪ್ರಸ್ತುತ ಕಾಲಘಟ್ಟದಲ್ಲಿ ಮನುಷ್ಯರ ಮನಸ್ಸುಗಳನ್ನು ಕಟ್ಟಬೇಕಾದ ಅಗತ್ಯ ಬಹಳವಿದೆ. ಈಗಂತೂ ಮನೆಗಳನ್ನು ಯಾರು ಬೇಕಾದರೂ ಕಟ್ಟಬಹುದು. ಆದರೆ ಮನಸ್ಸುಗಳನ್ನು ಕಟ್ಟಲು ಆಗುವುದಿಲ್ಲ. ಇಂತಹ ಮಹತ್ವಯುತವಾದ ಕಾರ್ಯವನ್ನು ಸಂಘಟನೆಗಳು ಹಾಗೂ ಸಂಘ- ಸಂಸ್ಥೆಗಳು ಮಾಡಬೇಕು. ಆಗ ಮಾತ್ರ ಸಮಾಜದಲ್ಲಿ ಉತ್ತಮ ವಾತಾವರಣ ಮೂಡುತ್ತದೆ.- ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಸಂಸ್ಥಾನ ಮಠ