ಸುಸಜ್ಜಿತ ರಂಗಮಂದಿರ ಕಲ್ಪಿಸದೇ ಜನಪ್ರತಿನಿಧಿಗಳಿಂದ ಜಾಣಕುರುಡು ಪ್ರದರ್ಶನ: ತಿಪಟೂರು ಸತೀಶ್

KannadaprabhaNewsNetwork |  
Published : Dec 02, 2025, 01:30 AM IST
1ಕೆಎಂಎನ್ ಡಿ13,14 | Kannada Prabha

ಸಾರಾಂಶ

ಯಾವ ಊರಿನಲ್ಲಿ ರಂಗ ಚಟುವಟಿಕೆ ಜೀವಂತವಾಗಿರುತ್ತದೆಯೋ ಆ ಊರಿನಲ್ಲಿ ಸಾಂಸ್ಕೃತಿಕತೆ, ಜನರ ಆತ್ಮಸಾಕ್ಷಿ ಎಚ್ಚರವಾಗಿರುತ್ತದೆ. ಊರು ಬೆಳೆದಂತೆ ರಂಗ ಚಟುವಟಿಕೆಗೆ ಆರ್ಥಿಕ ಬಲ ಬೇಕು. ಇಲ್ಲವಾದರೆ ರಂಗ ಚಟುವಟಿಕೆ ಆವಿಯಾಗುತ್ತದೆ. ಆದರೆ, ಕನ್ನಡ ಸಂಘ ಇನ್ನೂ ಹಸಿರಾಗಿದೆ. ರಂಗ ಚಟುವಟಿಕೆಗೆ ಬೀಜ ಬಿತ್ತುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಂಗ ಕಾಯಕ ಮಾಡುವ ಮತ್ತು ರಂಗ ಚಟುವಟಿಕೆ ಪ್ರೋತ್ಸಾಹಿಸುವ ಜನರು ತಾಲೂಕಿನಲ್ಲಿದ್ದರೂ 53 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಂಘದ ರಂಗ ಚಟುವಟಿಕೆಗೆ ಸುಸಜ್ಜಿತ ರಂಗಮಂದಿರ ಕಲ್ಪಿಸಲು ಜನಪ್ರತಿನಿಧಿಗಳ ಜಾಣಕುರುಡು ಪ್ರದರ್ಶನ ಬೇಸರ ತರಿಸಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಡಾ.ಎಸ್.ಎಲ್.ಭೈರಪ್ಪ ನೆನಪಿನ ವೇದಿಕೆಯಲ್ಲಿ ಕನ್ನಡ ಸಂಘ ವಿಶ್ವಸ್ಥ ಸಮಿತಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ 17ನೇ ನಾಗರಂಗ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ನುಡಿಗೌರವ ಸ್ವೀಕರಿಸಿ ಮಾತನಾಡಿದರು.

ಯಾವ ಊರಿನಲ್ಲಿ ರಂಗ ಚಟುವಟಿಕೆ ಜೀವಂತವಾಗಿರುತ್ತದೆಯೋ ಆ ಊರಿನಲ್ಲಿ ಸಾಂಸ್ಕೃತಿಕತೆ, ಜನರ ಆತ್ಮಸಾಕ್ಷಿ ಎಚ್ಚರವಾಗಿರುತ್ತದೆ. ಊರು ಬೆಳೆದಂತೆ ರಂಗ ಚಟುವಟಿಕೆಗೆ ಆರ್ಥಿಕ ಬಲ ಬೇಕು. ಇಲ್ಲವಾದರೆ ರಂಗ ಚಟುವಟಿಕೆ ಆವಿಯಾಗುತ್ತದೆ. ಆದರೆ, ಕನ್ನಡ ಸಂಘ ಇನ್ನೂ ಹಸಿರಾಗಿದೆ. ರಂಗ ಚಟುವಟಿಕೆಗೆ ಬೀಜ ಬಿತ್ತುತ್ತಿದೆ. ರಂಗಕಲೆ ಜಾತ್ಯತೀತ ಧರ್ಮಾತೀತವಾಗಿರಲಿ. ಸಮಾಜಕ್ಕೆ ಚೈತನ್ಯ ನೀಡುವ ಕಾಯಕ ನಿರಂತರವಾಗಿರಲಿ. ಅಂತೆಯೇ ಮುಂದಿನ ದಿನಗಳಲ್ಲಿ ರಂಗ ಮಂದಿರದ ಕೊರತೆ ನೀಗುವಂತಾಗಲಿ ಎಂದರು.

ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಪ್ರವಹಿಸುತ್ತಿರುವ ರಂಗಕಲೆ ಸಂಸ್ಕೃತಿ ಅತಿ ಮುಖ್ಯ. ಇದರೊಂದಿಗೆ ಮಕ್ಕಳ ಚಟುವಟಿಕೆ ಹೆಚ್ಚು ಜರುಗಿದಾಗ ಸ್ವಾಸ್ತ್ಯ ಸಮಾಜ ಕಟ್ಟುವ ಕಾಯಕಕ್ಕೆ ವೇಗ ದೊರಕಿದಂತಾಗುತ್ತದೆ. ತಂತ್ರಜ್ಞಾನದ ಸುಳಿಯಲ್ಲಿ ಸಿಲುಕಿ ನಲುಗುತ್ತಿರುವ ಮಕ್ಕಳಿಗೆ ಬಂಧುತ್ವದ ಸೆಳೆತ ಮೂಡಿಸುವಲ್ಲಿ ತಾಂತ್ರಿಕ ಗೋಡೆ ಬೇಧಿಸುವಲ್ಲಿ ರಂಗಭೂಮಿ ಜೀವಂತವಾಗಿರುವ ಅತ್ಯವಶ್ಯಕ ಸನ್ನಿವೇಶ ಇದೆ ಎಂದರು.

ನಾಗಮಂಗಲ ಸಾಂಸ್ಕೃತಿಕ ಹೆಗ್ಗುರುತಿಗೆ ಸಾಕ್ಷಿ. ಈ ಊರಿನ ನಾಗರಿಕ ಪ್ರಜ್ಞೆ ಮೆಚ್ಚುಗೆಗೆ ಅರ್ಹ. ಸಾರ್ವಜನಿಕರು ಉದ್ಯಮಿಗಳು ಎಲ್ಲರ ಸಹಕಾರದಿಂದ ಕಳೆದ 53 ವರ್ಷಗಳಿಂದ ಕನ್ನಡ ಸಂಘ ನಿರಂತರ ರಂಗ ಸೇವೆ ಮಾಡುತ್ತಿದೆ. ಇದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ನೀಲಮ್ಮ ಮಾತನಾಡಿ, ಈ ನಾಟಕೋತ್ಸವ ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತಿದೆ. ರಾಜ್ಯೋತ್ಸವದ ಅಂಗವಾಗಿ ನಾಟಕೋತ್ಸವದ ಆಯೋಜನೆ ತುಂಬಾ ವಿಶೇಷ. ಪ್ರೇಕ್ಷಕರಲ್ಲಿ ನಾಟಕ ಅಭಿರುಚಿ ಬೆಳೆಸುತ್ತಿರುವುದು ಸಂತಸದ ಸಂಗತಿ ಎಂದರು.

ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಮಾತನಾಡಿ, ನಾಗಮಂಗಲದಲ್ಲಿ ಕಲಾವಿದರಿಗೆ ಬರವಿಲ್ಲ. ರಂಗಮಂದಿರ ನಿರ್ಮಾಣ ಶೀಘ್ರವೆ ಆಗುತ್ತದೆ. ಸ್ಥಳದ ಕೊರತೆ ಇದೆ. ಸೂಕ್ತ ಸ್ಥಳ ನಿಗದಿಪಡಿಸಿದರೆ ಕಲಾವಿದನಾಗಿ ಮುಂಚೂಣಿಯಲ್ಲಿ ನಿಂತು ನಾನೇ ನನ್ನ ತಂದೆಯವರಾದ ಚಲುವರಾಯಸ್ವಾಮಿ ಅವರ ಮುಂದೆ ಬೇಡಿಕೆ ಇಡುತ್ತೇನೆ ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ಸಂಘದ ಅಧ್ಯಕ್ಷೆ ಪುಟ್ಟಮ್ಮ ಮಾಯಣ್ಣಗೌಡ ಅಧ್ಯಕ್ಷತೆ ವಹಿಸಿದ್ದರು. ನಂತರ ಮೂಡಬಿದರೆಯ ಆಳ್ವಾಸ್ ರಂಗ ಅಧ್ಯಯನ ತಂಡ ಪ್ರಸ್ತುತಿಯ ಡಾ.ಜೀವನ್‌ರಾಂ ಸುಳ್ಯ ನಿರ್ದೇಶನದ ‘ನಾಯಿಮರಿ’ ಎಂಬ ನಾಟಕ ಪ್ರದರ್ಶನಗೊಂಡಿತು.

ಸಮಾರಂಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಚಂದ್ರು, ಕರ್ನಾಟಕ ಜಾನಪದ ಅಕಾಡೆಮಿ ನಿರ್ದೇಶಕ ಅಣೆಚನ್ನಾಪುರ ಮಂಜೇಶ್, ಕನ್ನಡ ಸಂಘದ ಕಾರ್ಯದರ್ಶಿ ಎನ್.ಸಿ.ಶಿವಕುಮಾರ್, ಸಂಘದ ಮಾಜಿ ಅಧ್ಯಕ್ಷ ನಾ.ಸು.ನಾಗೇಶ, ಸದಸ್ಯರಾದ ಪ್ರಶಾಂತ್ ಮಧು, ಮಂಜುನಾಥ್, ನಟರಾಜು, ಮುರುಳಿ, ಲ.ಬಾಲಕೃಷ್ಣ, ಮೀರಾ ಬಾಲಕೃಷ್ಣ, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಕೊಣನೂರು ಹನುಮಂತು ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ