ಬಾಳೆಹೊನ್ನೂರು: ಅಕ್ರಮವಾಗಿ ಬೀಟೆ ತುಂಡುಗಳನ್ನು ಸಂಗ್ರಹಿಸಿದ ಆರೋಪದಡಿ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಮಸೀದಿಕೆರೆಯ ಅಬೂಬಕರ್ ಹಾಗೂ ಮಣಬೂರು ಗ್ರಾಮದ ಕೃಷ್ಣ ಬಂಧಿತ ಆರೋಪಿಗಳು. ಮಸೀದಿಕೆರೆಯ ಅಬೂಬಕರ್ ಮನೆಯಲ್ಲಿ ಅಕ್ರಮವಾಗಿ ಬೀಟೆ ತುಂಡುಗಳನ್ನು ಸಂಗ್ರಹಿಸಿದ ಕುರಿತು ಸಿಐಡಿ ಅರಣ್ಯ ದಳಕ್ಕೆ ದೂರು ಬಂದಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ದಳದ ಪಿಎಸ್ಐ ಸುನೀತಾ ನೇತೃತ್ವದಲ್ಲಿ ದಾಳಿ ಮಾಡಿದಾಗ ಆರೋಪಿ ಮನೆಯಲ್ಲಿ ಬೀಟೆ ಮರದ ತುಂಡುಗಳು ಪತ್ತೆಯಾಗಿವೆ. ಅರಣ್ಯ ದಳದ ಅಧಿಕಾರಿಗಳು ಪ್ರಕರಣವನ್ನು ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮಣಬೂರು ಗ್ರಾಮದ ಕೃಷ್ಣ ಎಂಬಾತ ಬಸವನಕೋಟೆ ಮೀಸಲು ಅರಣ್ಯದಿಂದ ಬೀಟೆ ಮರದ ತುಂಡುಗಳನ್ನು ತಂದುಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಎರಡು ಬೀಟೆ ತುಂಡುಗಳ ಮೌಲ್ಯ ಸುಮಾರು 50 ಸಾವಿರ ರು. ಎಂದು ಅಂದಾಜಿಸಲಾಗಿದೆ ಎಂದು ಆರ್.ಎಫ್.ಓ ಸಂದೀಪ್ ತಿಳಿಸಿದ್ದಾರೆ. ಆರೋಪಿಗಳಿಂದ ಬೀಟೆ ತುಂಡು ಸಾಗಾಟಕ್ಕೆ ಬಳಸಿದ್ದ ಕಾರು, ಮರ ಕತ್ತರಿಸುವ ಯಂತ್ರ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಎನ್.ಆರ್.ಪುರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಎಸಿಎಫ್ ಚೇತನ್ ಗಸ್ತಿ ಮಾರ್ಗದರ್ಶನದಲ್ಲಿ ಡಿಆರ್ ಎಫ್ಒ ಮಂಜುನಾಥ್, ಸಿಬ್ಬಂದಿ ಸಂಜಯ್, ಅಭಿಲಾಶ್, ಶಿವಶಂಕರ್, ಸದಾಶಿವ, ಚಾಲಕ ಪ್ರಕಾಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪೋಟೋ ಫೈಲ್ ನೇಮ್ 21 ಬಿಹೆಚ್ ಆರ್ 4 ಅಕ್ರಮವಾಗಿ ಬೀಟೆ ತುಂಡುಗಳನ್ನು ಸಂಗ್ರಹ ಮಾಡಿದ ಆರೋಪಿಗಳನ್ನು ಬಾಳೆಹೊನ್ನೂರು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದರು.