ಹುಬ್ಬಳ್ಳಿ:
ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಪಾಲಿಕೆಯ ಆಯುಕ್ತರ ಕಚೇರಿಯ ವರೆಗೆ ಮೆರವಣಿಗೆ ಹಮ್ಮಿಕೊಂಡರು. ಮನವಿ ಸ್ವೀಕರಿಸಲು ಪಾಲಿಕೆ ಆರೋಗ್ಯಾಧಿಕಾರಿ ಬಾರದ ಹಿನ್ನೆಲೆಯಲ್ಲಿ ಪಾಲಿಕೆ ಕಚೇರಿ ಎದುರು ಕುಳಿತು ಭಜನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಜಿಲ್ಲಾ ಸಂಯೋಜಕ ಶ್ರೀಧರ ಕಲಬುರ್ಗಿ ಮಾತನಾಡಿ, ನಗರದಲ್ಲಿ ಹಲವೆಡೆ ಅನಧಿಕೃತ ಕಸಾಯಿಖಾನೆಗಳಿದ್ದು, ಬಹಿರಂಗವಾಗಿಯೇ ಗೋ ಮಾಂಸ ಮಾರಾಟ ಮಾಡಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಎರಡು ದಿನದೊಳಗೆ ಅನಧಿಕೃತ ಕಸಾಯಿಖಾನೆ ಬಂದ್ ಮಾಡಿಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಅಂತಹ ಕಸಾಯಿಖಾನೆಗಳ ಮೇಲೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಲಿದ್ದೇವೆ. ಮುಂದಾಗುವ ಅನಾಹುತಕ್ಕೆ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯೇ ಹೊಣೆ ಎಂದು ಎಚ್ಚರಿಕೆ ನೀಡಿದರು.ಸಮಿತಿಯ ಸಹ ಸಂಯೋಜಕ ರಘು ಯಲ್ಲಕ್ಕನವರ ಮಾತನಾಡಿ, ಅಕ್ರಮವಾಗಿ ಗೋಸಾಗಣೆ ತಡೆಗೆ ಜಿಲ್ಲೆಯ ಎಲ್ಲ ಚೆಕ್ಪೋಸ್ಟ್ಗಳಲ್ಲಿ 24X7 ವಿಶೇಷ ತಪಾಸಣೆ ವ್ಯವಸ್ಥೆ ಜಾರಿಗೊಳಿಸಬೇಕು, ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ವಿಶ್ವನಾಥ ಬುದ್ದುರ, ಗಣೇಶ ಲದ್ವಾ, ಮಂಜುನಾಥ ಕಾಟಕರ, ಗುರು ಪಾಟೀಲ, ಬಸು ದುರ್ಗದ, ಬಸವರಾಜ ಗೌಡರ, ಅಣ್ಣಪ್ಪ ದಿವಟಗಿ ಸೇರಿದಂತೆ ಹಲವರಿದ್ದರು.