ಅಕ್ರಮ ಮದ್ಯ ಮಾರಾಟ: 13 ಮನೆಗಳಿಗೆ ನೀರು ಸ್ಥಗಿತ

KannadaprabhaNewsNetwork |  
Published : Jun 01, 2025, 03:35 AM IST
ಕೂಡ್ಲಿಗಿ ತಾಲೂಕಿನ ಗೆದ್ದಲಗಟ್ಟೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದ 13 ಮನೆಗಳ ನೀರಿನ ಸಂಪರ್ಕ ತಾತ್ಕಾಲಿಕವಾಗಿ ಕಟ್ ಮಾಡಿಸಿದ ಲೇಡಿ ಸಿಂಗಂ ತಹಶೀಲ್ದಾರ್ ವಿ.ಕೆ.ನೇತ್ರಾವತಿ.  | Kannada Prabha

ಸಾರಾಂಶ

ತಾಲೂಕಿನ ಗೆದ್ದಲಗಟ್ಟೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 13 ಮನೆಗಳಿಗೆ ತಹಸೀಲ್ದಾರ್‌ ಕೆ.ವಿ. ನೇತ್ರಾವತಿ ಅವರು ತಾತ್ಕಾಲಿಕವಾಗಿ ನೀರು ಸರಬರಾಜು ಬಂದ್‌ ಮಾಡಿಸಿದ್ದಾರೆ.

ಕೂಡ್ಲಿಗಿ ತಹಸೀಲ್ದಾರ್‌ ದಿಟ್ಟ ಕ್ರಮ, ಪಡಿತರ ಸ್ಥಗಿತಗೊಳಿಸುವ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ತಾಲೂಕಿನ ಗೆದ್ದಲಗಟ್ಟೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 13 ಮನೆಗಳಿಗೆ ತಹಸೀಲ್ದಾರ್‌ ಕೆ.ವಿ. ನೇತ್ರಾವತಿ ಅವರು ತಾತ್ಕಾಲಿಕವಾಗಿ ನೀರು ಸರಬರಾಜು ಬಂದ್‌ ಮಾಡಿಸಿದ್ದಾರೆ.

ತಹಸೀಲ್ದಾರ್‌ ಕ್ರಮಕ್ಕೆ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದರೆ, ಅಕ್ರಮ ಮದ್ಯ ಮಾರಾಟಗಾರರು ಬೆಚ್ಚಿಬಿದ್ದಿದ್ದಾರೆ.

ಕೂಡ್ಲಿಗಿ ತಾಲೂಕಿನ ಗೆದ್ದಲಗಟ್ಟೆ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮಂದಿ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದಾರೆ. ಇದರಿಂದ ಅಪ್ರಾಪ್ತರೂ ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ಈ ಕುರಿತು ಗ್ರಾಮದ 30ಕ್ಕೂ ಹೆಚ್ಚು ಮಹಿಳೆಯರು ಮತ್ತು ಕಟ್ಟಡ ಕಾರ್ಮಿಕರು ಸೇರಿ ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಖಜಾಂಚಿ ಗುನ್ನಳ್ಳಿ ರಾಘವೇಂದ್ರ ನೇತೃತ್ವದಲ್ಲಿ ಕೂಡ್ಲಿಗಿ ತಹಸೀಲ್ದಾರ್, ಕೂಡ್ಲಿಗಿ ಡಿವೈಎಸ್ಪಿ ಹಾಗೂ ಕೂಡ್ಲಿಗಿ ಅಬಕಾರಿ ನಿರೀಕ್ಷಕರಿಗೆ ಇತ್ತೀಚೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕೂಡ್ಲಿಗಿ ತಹಸೀಲ್ದಾರ್ ವಿ.ಕೆ. ನೇತ್ರಾವತಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಬಾಲಕ ಮದ್ಯ ಸೇವನೆ ಮಾಡಿದ್ದನ್ನು ನೋಡಿ ಕೆಂಡಾಮಂಡಲರಾದರು. ಮದ್ಯ ಮಾರಾಟಗಾರರು ಗ್ರಾಮಠಾಣಾ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಂಡು ಅದರಲ್ಲೇ ಅಕ್ರಮ ಮದ್ಯ ಮಾರಾಟ ಮಾಡುತ್ತಾರೆ ಎನ್ನುವ ಮಾಹಿತಿ ಕೂಡ ಸಿಕ್ಕಿತು. ಅವರ ಜಾಗ ಸಕ್ರಮಗೊಳಿಸದೇ ಸರ್ಕಾರಕ್ಕೆ ವಾಪಸ್‌ ಪಡೆದು ಅಲ್ಲಿ ಅಂಗನವಾಡಿ ಅಥವಾ ಇತರ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮದಲ್ಲಿ ಇನ್ನು ಮುಂದೆ ಅಕ್ರಮ ಮದ್ಯ ಮಾರಾಟ ಮಾಡಿದಲ್ಲಿ ತಕ್ಷಣ ಕರೆ ಮಾಡಿ ಎಂದು ತಹಸೀಲ್ದಾರ್ ನೇತ್ರಾವತಿ ಅವರು ಗ್ರಾಮದ ಮಹಿಳೆಯರಿಗೆ ಸೂಚಿಸಿದರು. ಗ್ರಾಮದ ಜನರೊಂದಿಗೆ ಸಭೆ ನಡೆಸಿದ ಕೂಡ್ಲಿಗಿ ಅಬಕಾರಿ ನಿರೀಕ್ಷಕ ಬಸವರಾಜ್ ಹಾಗೂ ಸಿಬ್ಬಂದಿ, ಗುಡೇಕೋಟೆ ಪಿಎಸ್ಐ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ಸೇರಿ ಗ್ರಾಮದಲ್ಲಿ ಇನ್ನು ಮುಂದೆ ಯಾವುದೇ ಅಕ್ರಮ ಮದ್ಯ ಮಾರಾಟದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ 13 ಮನೆಗಳಿಗೆ ತಾತ್ಕಾಲಿಕವಾಗಿ ನೀರು ಸರಬರಾಜು ಬಂದ್ ಮಾಡಲು ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ಪಡಿತರ ಸಹ ತಡೆಯಲಾಗುವುದು ಎಂದು ಎಚ್ಚರಿಕೆ ನೀಡಿದ್ದೇನೆ ಎನ್ನುತ್ತಾರೆ ಕೂಡ್ಲಿಗಿ ತಹಸೀಲ್ದಾರ್‌ ವಿ.ಕೆ. ನೇತ್ರಾವತಿ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ