ಅಕ್ರಮ ಮರಳು ದಂಧೆ: ಸುರಪುರದಲ್ಲಿ ಕೃಷ್ಣೆ ಭೂಗರ್ಭಕ್ಕೆ ಕನ್ನ!

KannadaprabhaNewsNetwork |  
Published : Jan 15, 2024, 01:45 AM IST
ಸುರಪುರ ನಗರದಲ್ಲಿ ಮರಳು ಹೊತ್ತ ಟಿಪ್ಪರ್‌ಗಳ ಅರ್ಭಟ. | Kannada Prabha

ಸಾರಾಂಶ

ಮರಳು ದಂಧೆ ತಾಲೂಕಿನಾದ್ಯಂತ ನಡೆಯುತ್ತಿದ್ದು, ಚೌಡೇಶ್ವರಿಹಾಳ, ಕರ್ನಾಳ, ಸೂಗೂರುಗಳಲ್ಲಿ ಹೆಚ್ಚಳವಾಗಿದೆ. ವಿವಿಧ ಗ್ರಾಮಗಳು ಮತ್ತು ನಗರದ ರಸ್ತೆಗಳಲ್ಲಿ ರಾಜಾರೋಷವಾಗಿ ಹಗಲೂ ರಾತ್ರಿಯೆನ್ನದೇ ಮರಳು ತುಂಬಿದ ಲಾರಿಗಳು ಸಂಚರಿಸುತ್ತಿವೆ.

ನಾಗರಾಜ್ ನ್ಯಾಮತಿ

ಕನ್ನಡಪ್ರಭ ವಾರ್ತೆ ಸುರಪುರ

ಸುರಪುರ ಹೋಬಳಿಯ ಕೃಷ್ಣಾ ನದಿ ತಟದ ವಿವಿಧ ಭಾಗಗಳಲ್ಲಿ ಹರಿಯುವ ನದಿಯ ಭೂಗರ್ಭಕ್ಕೆ ಕನ್ನ ಹಾಕಿ ಅಕ್ರಮ ಮರಳು ದಂಧೆಗಾಗಿ ಬಗೆಯುತ್ತಿದ್ದಾರೆ. ಅವ್ಯಾಹತವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರೂ ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸಿದೆ.

ಮರಳು ದಂಧೆ ತಾಲೂಕಿನಾದ್ಯಂತ ನಡೆಯುತ್ತಿದ್ದು, ಚೌಡೇಶ್ವರಿಹಾಳ, ಕರ್ನಾಳ, ಸೂಗೂರುಗಳಲ್ಲಿ ಹೆಚ್ಚಳವಾಗಿದೆ. ವಿವಿಧ ಗ್ರಾಮಗಳು ಮತ್ತು ನಗರದ ರಸ್ತೆಗಳಲ್ಲಿ ರಾಜಾರೋಷವಾಗಿ ಹಗಲೂ ರಾತ್ರಿಯೆನ್ನದೇ ಮರಳು ತುಂಬಿದ ಲಾರಿಗಳು ಸಂಚರಿಸುತ್ತಿವೆ.

ಸುರಪುರ ಹೋಬಳಿ ವ್ಯಾಪ್ತಿಯಲ್ಲಿ ಮರಳು ತಪಾಸಣಾ ಕೇಂದ್ರಗಳನ್ನು ಕಂದಾಯ ಇಲಾಖೆ ಸ್ಥಾಪಿಸಿದೆ. ಹೆಮನೂರು, ಶೆಳ್ಳಗಿ, ಬೇವಿನಾಳ, ಕರ್ನಾಳನಲ್ಲಿ ಚೆಕ್ ಪೋಸ್ಟ್‌ಗಳಿವೆ. ಇವು ಅಕ್ರಮ ತಡೆಗಟ್ಟುವ ಬದಲು, ದಂಧೆಕೋರರಿಂದ ಹಫ್ತಾ ವಸೂಲಿ ಕೇಂದ್ರದಂತೆ ಕಾರ್ಯನಿರ್ವಹಿಸುತ್ತವೆ ಅನ್ನೋ ಗಂಭೀರ ಆರೋಪಗಳಿವೆ.

ಅಧಿಕಾರಿಗಳಿಂದಲೇ ಅಕ್ರಮಕ್ಕೆ ಬೆಂಬಲ:

ಈ ಅಕ್ರಮ ಮರಳು ದಂಧೆಗೆ ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆ ಕೆಲವು ಅಧಿಕಾರಿಗಳೇ ನೆರಳಾಗಿ ನಿಂತು, ದಂಧೆಕೋರರಿಗೆ ಸಹಕರಿಸುತ್ತಾರೆ ಅನ್ನೋದು ಜನರ ಆರೋಪ.

ಜಲಚರಗಳಿಗೆ ಕಂಟಕ:

ಸಂಜೆಯಾಗುತ್ತಿದ್ದಂತೆಯೇ, ಮರಳು ತುಂಬಿದ ಲಾರಿಗಳು ಮತ್ತು ಟ್ರ್ಯಾಕ್ಟರ್‌ಗಳ ಸಂಚಾರದ ಆರ್ಭಟ ಜೋರಾಗಿರುತ್ತದೆ. ನದಿ ಒಡಲನ್ನು ಆಳವಾಗಿ ಬಗೆಯುವುದರಿಂದ ನದಿ ಅಂಚುಗಳು ವರ್ಷದಿಂದ ವರ್ಷಕ್ಕೆ ಅಗಲಾಗುತ್ತ ಹೋಗುತ್ತಿದೆ. ಜಲಚರ ಜೀವಿಗಳು ನಿರ್ನಾಮವಾಗಿ, ಅಂತರ್ಜಲ ಕುಸಿತಗೊಂಡು ಕೃಷಿ ಭೂಮಿ ಬರುಡಾಗುವ ಕಾಲ ದೂರವಿಲ್ಲ ಎಂಬುದು ಅನ್ನದಾತರ ಅಭಿಪ್ರಾಯವಾಗಿದೆ.

ನೀರಿನ ಮೂಲ ಬರಿದಾಗುತ್ತಿವೆ. ನೀರು ನಿಲ್ಲದಿದ್ದರೆ ಬೇಸಿಗೆ ಕಾಲಕ್ಕೆ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಾಗಲಿದೆ ಎಂಬ ಆತಂಕ ಮೂಡಿದೆ. ನಗರದ ಜನರು ಕೃಷ್ಣಾ ನದಿ ನಂಬಿರುವುದರಿಂದ ಕುಡಿಯುವ ನೀರಿಗೆ ಎಲ್ಲಿ ತೊಂದರೆ ಆಗುತ್ತದೆ ಎಂಬ ಚಿಂತೆ ಸುರಪುರ ನಗರ ನಿವಾಸಿಗಳದ್ದಾಗಿದೆ.

ಕೊನೆಯಿಲ್ಲವೆ?

ಮರಳು ಅಕ್ರಮ ತಡೆಯುವುದು ಯಾರು ಅನ್ನೋ ಪ್ರಶ್ನೆ ಇಲ್ಲಿನ ಜನಸಾಮಾನ್ಯರ ಕಾಡುತ್ತಿದೆ. ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಗಣಿ ಮತ್ತು ಭೂಗರ್ಭ ಶಾಸ್ತ್ರ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹೀಗೆ ಅಕ್ರಮ ತಡೆಯಬೇಕಾದವರೇ ದಂಧೆಕೋರರ ಜತೆ ಕೈಜೋಡಿಸಿದ್ದಾರೆ ಎಂಬ ಶಂಕೆಗಳು ಜನಮಾನಸದಲ್ಲಿ ಮೂಡಿವೆ. ಇದಕ್ಕೆ ಮರಳು ಅಕ್ರಮ ರಾಜಾರೋಷವಾಗಿ ನಡೆಯುತ್ತಿರುವುದೇ ಸಾಕ್ಷಿ.

ಜೀವಭಯ!

ಅಕ್ರಮ ದಂಧೆ ತಡೆಯಲು ಹೋದವರ ಜೀವಬೆದರಿಕೆ ಹಾಕಲಾಗುತ್ತದೆ. ಅಲ್ಲದೆ, ಆಳುವ ಸರ್ಕಾರ ಕೂಡ ಪ್ರಭಾವಿಗಳ ಪರ ವಹಿಸಿದೆ. ಇದರಿಂದ ವಿವಿಧ ಸಂಘಟನೆಗಳು ಸುಮ್ಮನಾಗಿವೆ ಎನ್ನುತ್ತಾರೆ ಕೆಲ ಪ್ರಜ್ಞಾವಂತ ನಾಗರಿಕರು.

ಸಕ್ರಮಕ್ಕಿಂತ ಅಕ್ರಮ ಮರಳು ದಂಧೆ ಹೆಚ್ಚಾಗಿ ನಡೆಯುತ್ತಿದೆ. ಚಿನ್ನದ ಗಣಿಯಲ್ಲಿ ತೋರುವ ಬದ್ಧತೆ ಮರಳು ಗಣಿಗಾರಿಕೆಯಲ್ಲೂ ತೋರಿಸಬೇಕು. ಅಕ್ರಮವಾಗಿ ಸಾಗುವ ಮರಳನ್ನು ತಡೆಯಬೇಕು.

ಮಲ್ಲಿಕಾರ್ಜುನ ಸತ್ಯಂಪೇಟೆ, ರೈತ ಸಂಘದ ರಾಜ್ಯ ಉಪಾಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಚ್ಛೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ
ಕೆಎಲ್‌ಇಗೆ ಅಮಿತ ಕೋರೆ ನೂತನ ಕಾರ್ಯಾಧ್ಯಕ್ಷ