ಅಕ್ರಮ ಕಲ್ಲು ಗಣಿಗಾರಿಕೆ: 9 ಜನರ ವಿರುದ್ಧ ಎಫ್‌ಐಆರ್‌

KannadaprabhaNewsNetwork |  
Published : Jul 24, 2025, 12:45 AM IST
23ಎಚ್‌ಪಿಟಿ5- ಹೊಸಪೇಟೆಯ ಕಾಳಘಟ್ಟ ಗ್ರಾಮದ ಸಮೀಪದ ಸರ್ಕಾರಿ ಗುಡ್ಡ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೀರ್ತಿಕುಮಾರ ನೇತೃತ್ವದಲ್ಲಿ ತಹಸೀಲ್ದಾರ ಶೃತಿ, ಭೂ ವಿಜ್ಞಾನಿ ಕಿರಣ್‌ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ತಾಲೂಕಿನ ಕಾಳಘಟ್ಟ ಗ್ರಾಮದ ಸಮೀಪದ ಸರ್ಕಾರಿ ಗುಡ್ಡ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ 9 ಜನರ ವಿರುದ್ಧ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ತಾಲೂಕಿನ ಕಾಳಘಟ್ಟ ಗ್ರಾಮದ ಸಮೀಪದ ಸರ್ಕಾರಿ ಗುಡ್ಡ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ 9 ಜನರ ವಿರುದ್ಧ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಬಸವನದುರ್ಗ ನಿವಾಸಿಗಳಾದ ರವಿಕುಮಾರ್, ಖಾಸೀಂಸಾಬ್, ಮಂಜುನಾಥ, ಸುಬ್ರಮಣಿ ವಜ್ರವೇಲು, ಸುಬ್ರಹ್ಮಣಿ, ಬಾಲರಾಜ್, ಆರ್ಮುಗಂ, ಶ್ರೀನಿವಾಸ್‌ ಎಂಬವರ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಡಿ.ಆರ್.ಕಿರಣ್ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.

ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿರುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದೂರು ನೀಡಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ 9 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಎಸ್.ಜಾಹ್ನವಿ ತಿಳಿಸಿದ್ದಾರೆ.

ಸ್ಥಳಕ್ಕೆ ಅಧಿಕಾರಿ ತಂಡ ಭೇಟಿ:

ಇಲ್ಲಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೀರ್ತಿಕುಮಾರ ನೇತೃತ್ವದಲ್ಲಿ ತಹಸೀಲ್ದಾರ ಶೃತಿ, ಭೂ ವಿಜ್ಞಾನಿ ಕಿರಣ್‌, ಕಂದಾಯ ನಿರೀಕ್ಷಕ ಮಹಮ್ಮದ್‌ ಶರೀಫ್‌, ಗ್ರಾಮ ಲೆಕ್ಕಾಧಿಕಾರಿ ವೆಂಕಟಸ್ವಾಮಿ ನೇತೃತ್ವದ ತಂಡ ಸರ್ಕಾರಿ ಗುಡ್ಡ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಭಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಗಸ್ತು ಕೂಡ ಹೆಚ್ಚಳ ಮಾಡಿದ್ದಾರೆ.ಅಕ್ರಮ ಗಣಿಗಾರಿಕೆಯ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ: ಸತೀಶ್‌ಕುಮಾರ್

ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕೆಲ ಮುಖಂಡರ ಹೆಸರನ್ನು ಹೆಸರಿಸಿ, ಅವರಿಂದ ಸಂಡೂರು ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದುದು. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡದೆ, ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತು ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್‌ಕುಮಾರ್ ಸಮಾಲು ಹಾಕಿದರು.ಸಂಡೂರು ಪಟ್ಟಣದ ಪ್ರವಾಸಿ ಬಂಗಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ದೂರು ಕೊಡಲಿ. ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನುಭವಿಸಿದ ಸೋಲಿನಿಂದ ಹತಾಶರಾಗಿರುವ ಬಂಗಾರು ಹನುಮಂತು ಅವರು ಆಧಾರರಹಿತವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡರಾದ ಗಡಾದ್ ರಮೇಶ್ ಮಾತನಾಡಿ, ನನ್ನ ಮೇಲೆ ಬಂಗಾರು ಹನುಮಂತು ಅವರು ಆರೋಪ ಮಾಡಿದ್ದಾರೆ. ನಾನು ಒಬ್ಬ ಗುತ್ತಿಗೆದಾರ. ಮರಂ (ಮಣ್ಣು) ಸಾಗಾಣಿಕೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದಿದ್ದೇನೆ. ರಾಜಧನ ಕಟ್ಟಿದ್ದೇನೆ. ದಾಖಲೆ ಇಲ್ಲದೆ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.ಮುಖಂಡರಾದ ಟಿ. ಲಕ್ಷ್ಮಣ ಮಾತನಾಡಿ, ಇನ್ನು ಮುಂದೆ ಆಧಾರ ರಹಿತವಾಗಿ ಸುಳ್ಳು ಆರೋಪ ಮಾಡುವುದನ್ನು ಮುಂದುವರೆಸಿದರೆ, ಬಂಗಾರು ಹನುಮಂತು ಅವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಬಿ.ಜಿ. ಉಜ್ಜಿನಗೌಡ, ಜಿ. ವಿರೇಶ್, ಬಿ.ಜಿ. ಸಿದ್ದೇಶ್ ಹಾಗೂ ಆಶಾಲತಾ ಸೋಮಪ್ಪ ಮಾತನಾಡಿದರು.ಮುಖಂಡರಾದ ಕೆ. ಸತ್ಯಪ್ಪ, ಜೆ.ಎಂ. ಶಿವಪ್ರಸಾದ್, ಎಲ್.ಎಚ್. ಶಿವಕುಮಾರ್, ಹನುಮೇಶ್, ಮಂಜುನಾಥ್, ಶಿವಕುಮಾರ್, ಎ. ಪಂಪಣ್ಣ, ಶಿವಲಿಂಗಪ್ಪ, ಸಾಧನಾ ಬೋಯಿಟೆ, ಈರಮ್ಮ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ