ಕನಕಪುರ: ಆಸ್ತಿ ವಿವಾದ ಮತ್ತು ಅನೈತಿಕ ಸಂಬಂಧ ಶಂಕೆಯಲ್ಲಿ ಮಗನ ಜೊತೆ ಸೇರಿ ಗಂಡನೆ ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ಚಾಕನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಕಸಬಾ ಹೋಬಳಿ ಚಾಕನಹಳ್ಳಿ ಗ್ರಾಮದ ಶಿವರಾಜು ಅವರ ಪತ್ನಿ ಗೌರಮ್ಮ (45) ಕೊಲೆಯಾಗಿರುವ ಮಹಿಳೆಯಾಗಿದ್ದಾರೆ. ಇವರ ಪತಿ ಶಿವರಾಜು (50), ಮಗ ಸಿದ್ದರಾಜು (28) ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಕೊಲೆಯಾಗಿರುವ ಗೌರಮ್ಮ ಮತ್ತು ಶಿವರಾಜು 10 ವರ್ಷಗಳಿಂದ ದೂರ ಇದ್ದರು, ಗೌರಮ್ಮನಿಗೆ ಬೇರೊಬ್ಬರ ಜೊತೆ ಅಕ್ರಮ ಸಂಬಂಧವಿದ್ದು ಅವರೊಟ್ಟಿಗೆ ಜೀವನ ನಡೆಸುತ್ತಿದ್ದರು.ಗೌರಮ್ಮನ ಮಕ್ಕಳು ಪತಿ ಶಿವರಾಜು ಜೊತೆಗೆ ಬೇರೆ ಕಡೆ ಇದ್ದರು. ಗೌರಮ್ಮ ಇತ್ತೀಚೆಗೆ ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿದ್ದರು. ಗಂಡ ಮತ್ತು ಮಕ್ಕಳು ಮಾರಾಟ ಮಾಡದಂತೆ ಆಕ್ಷೇಪಿಸಿದಾಗ ಇಬ್ಬರ ನಡುವೆ ಜಗಳವಾಗಿತ್ತು.
ಶನಿವಾರ ಬೆಳಗ್ಗೆ ಗೌರಮ್ಮ ಕುರುಬರದೊಡ್ಡಿ ಬಳಿ ಇರುವ ತನ್ನ ಜಮೀನಿನ ಕಡೆ ಹೋಗಿದ್ದರು, ಈ ವೇಳೆ ಶಿವರಾಜು ಮತ್ತು ಸಿದ್ದರಾಜು ಇಬ್ಬರು ಸೇರಿ ಕುಡುಗೋಲಿನಿಂದ ಗೌರಮ್ಮ ಅವರ ಕುತ್ತಿಗೆಯನ್ನು ಕುಯ್ದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಆರೋಪಿಗಳು ಗೌರಮ್ಮ ಬೇರೊಬ್ಬ ವ್ಯಕ್ತಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಅವನ ಜೊತೆ ಸೇರಿ ಜಮೀನು ಮಾರಾಟ ಮಾಡಲು ಯತ್ನಿಸಿದ್ದಳು, ಆ ಕಾರಣದಿಂದ ತಾವೇ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಶರಣಾಗಿದ್ದಾರೆ.ಎಸ್.ಪಿ. ಶ್ರೀನಿವಾಸ ಗೌಡ, ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಕೆ.ಸಿ.ಗಿರಿ, ಸರ್ಕಲ್ ಇನ್ ಸ್ಪೆಕ್ಟರ್ ವಿಕಾಶ್, ಎಸ್ ಐ ಆಕಾಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮೃತ ದೇಹವನ್ನು ದಯಾನಂದ ಸಾಗರ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಮೃತರಾದ ಗೌರಮ್ಮ ಅವರ ಸಂಬಂಧಿ ಘಟನೆ ಸಂಭಂದ ದೂರು ನೀಡಿದ್ದಾರೆ, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.ಕೆ ಕೆ ಪಿ ಸುದ್ದಿ 05