ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಸಚಿವೆ ಹೆಬ್ಬಾಳ್ಕರ್ಗೆ ಭೇಟಿಯಾದ ಕಾರ್ಯಕರ್ತೆಯರು ತಮ್ಮ ಪ್ರಮುಖ 17 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ-ಯುಕೆಜಿ ಆರಂಭಿಸುವುದರಿಂದ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತಿದ್ದು, ಇದರಿಂದ ಅಂಗನವಾಡಿ ಕೇಂದ್ರಗಳ ಪರಿಸ್ಥಿತಿಯನ್ನು ಅವಲೋಕಿಸಿ ಈ ಆದೇಶ ಜಾರಿಗೆ ತರಬೇಕು. ಎಲ್ಲ ಅಂಗನವಾಡಿ ನೌಕರರನ್ನು ಕನಿಷ್ಠಕೂಲಿ ಕಾಯ್ದೆಯ ವ್ಯಾಪ್ತಿಗೆ ತಂದು ಇಎಸ್ಐ, ಪಿಎಫ್ ಕೊಡಬೇಕು, ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡುವ ಆಹಾರ ಪದಾರ್ಥಗಳು ಗುಣಮಟ್ಟ ಸರಿ ಇಲ್ಲದ ಕಾರಣ ಬಿಎಸ್ ಪರವಾನಗಿ ರದ್ದು ಮಾಡಿ ಸ್ಥಳೀಯವಾಗಿ ಸಿಗುವ ಆಯಾ ಪ್ರದೇಶಕ್ಕೆ ಅನುಗುಣವಾದ ಸ್ಥಳೀಯ ಆಹಾರ ಸರಬರಾಜು ಮಾಡಬೇಕು, ಶಿಶು ಅಭಿವೃದ್ಧಿ ಯೋಜನೆಗಾಗಿ ದುಡಿದು ಬರಿಗೈಯಲ್ಲಿ 2011ರಿಂದ 2023ರ ಮಾರ್ಚ್ ತನಕ ನಿವೃತ್ತರಾದ ಕಾರ್ಯಕರ್ತೆ ಸಹಾಯಕಿಯರಿಗೂ ಕೂಡಲೇ ಗ್ರಾಚ್ಯುಟಿ ಹಣ ₹ 183 ಕೋಟಿ ಬಿಡುಗಡೆ ಮಾಡಬೇಕು. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ತುಂಬಬೇಕು ಮತ್ತು ಇಲಾಖೆಯಲ್ಲಿ ಖಾಲಿ ಇರುವ ಮೇಲ್ವಿಚಾರಕಿ, ಸಿಡಿಪಿಒ ಹುದ್ದೆ ತುಂಬಬೇಕು. ಚುನಾವಣೆ ಕೆಲಸಗಳಿಂದ ಅಂಗನವಾಡಿ ನೌಕರರನ್ನು ಬಿಡುಗಡೆಗೊಳಿಸಬೇಕು. ನಗರ ಪ್ರದೇಶಗಳಲ್ಲಿ ಸಹಾಯಕಿ ಆಯ್ಕೆಗೆ ಇರುವ ಮಾನದಂಡ ಬದಲಾಯಿಸಬೇಕು ಮತ್ತು ನಗರ ಪ್ರದೇಶಗಳಲ್ಲಿ ಇರುವ ಖಾಲಿ ಹುದ್ದೆ ಬೇಗ ತುಂಬಬೇಕು. ಮುಂಗಡವಾಗಿ ಮೊಟ್ಟೆ, ಬಾಡಿಗೆ, ಗ್ಯಾಸ್, ಕರೆನ್ಸಿ ಹಣ, ತರಕಾರಿ, ಆಡಳಿತ ವೆಚ್ಚ, ಸಾದಿಲ್ವಾರು ಹಾಕದೇ ಫಲಿತಾಂಶ ಕೇಳಬಾರದು. ಸಾಮೂಹಿಕ ಆರೋಗ್ಯ ವಿಮೆ ಜಾರಿ ಮಾಡುವುದು ಸೇರಿದಂತೆ ಒಟ್ಟು 17 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.ಸಂಘಟನೆಯ ಜಿಲ್ಲಾಧ್ಯಕ್ಷೆ ಮಂದಾ ನೇವಗಿ, ಉಲ್ಕಾ ಕೇಸರಕರ, ಸುವರ್ಣಾ ಮೋರೆ, ಸುನೀತಾ ಪಾಟೀಲ, ಲಕ್ಷ್ಮೀ ನಾಯ್ಕ, ರೇಣುಕಾ ಕುಡಚಿ, ಸುಶೀಲಾ ತಳವಾರ ಮುಂತಾದವರು ಈ ವೇಳೆ ಹಾಜರಿದ್ದರು