ಗ್ಯಾರಂಟಿ ಯೋಜನೆ ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ: ಎಂ.ಎಂ. ಹಿರೇಮಠ

KannadaprabhaNewsNetwork | Published : Apr 24, 2025 12:08 AM

ಸಾರಾಂಶ

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಪ್ರಚಾರಪಡಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ ಸೂಚನೆ ನೀಡಿದರು.

ಹಾವೇರಿ: ಜಿಲ್ಲೆಯಲ್ಲಿ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ ಹಾಗೂ ಯುವ ನಿಧಿ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸುವ ನಿಟ್ಟಿನಲ್ಲಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಪ್ರಚಾರಪಡಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಗೃಹಜ್ಯೋತಿ ಯೋಜನೆಯಡಿ ಸೌಲಭ್ಯವನ್ನು ಎಲ್ಲ ಅರ್ಹ ಗ್ರಾಹಕರಿಗೆ ಸಮರ್ಪಕವಾಗಿ ತಲುಪಿಸಬೇಕು. ಈ ನಿಟ್ಟಿನಲ್ಲಿ ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ಸೂಕ್ತ ಕ್ರಮಕೈಗೊಳ್ಳಬೇಕು. ರೈತರ ಭೂಮಿಯಲ್ಲಿ ಕಂಬ ಅಳವಡಿಸುವ ಸಂದರ್ಭದಲ್ಲಿ ಬದುವಿನಲ್ಲಿ ಕಂಬ ಬರುವಂತೆ ಕ್ರಮ ವಹಿಸಬೇಕು ಎಂದರು.

ಗೃಹಲಕ್ಷ್ಮಿ ಯೋಜನೆಯಲ್ಲಿ ಅನುದಾನ ಬಿಡುಗಡೆಯಾದ ಆನಂತರ ಬಾಕಿ ಇರುವ ಫಲಾನುಭವಿಗಳಿಗೆ ಅನುದಾನ ಹಂಚಿಕೆ ಮಾಡಲು ಕ್ರಮ ವಹಿಸಬೇಕು. ಫಲಾನುಭವಿಗಳ ಸ್ಥಿತಿಗತಿ ಪರಿಶೀಲಿಸಬೇಕು. ಈ ಯೋಜನೆಯಿಂದ ಯಾವೊಬ್ಬ ಫಲಾನುಭವಿಯೂ ವಂಚಿತರಾಗಬಾರದು ಎಂದು ಸೂಚಿಸಿದರು.

ಯುವನಿಧಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ, ನೋಂದಾಯಿಸಿದ ಫಲಾನುಭವಿಗಳಿಗೆ ನಿರುದ್ಯೋಗಿ ಭತ್ಯೆ ನೀಡಲು ಹಾಗೂ ಪದವೀದಾರರು, ಡಿಪ್ಲೊಮಾ ಮುಗಿಸಿದವರಿಗೆ/ಎಷ್ಟು ಅನುದಾನ ಮಂಜೂರಾಗಿದೆ? ಇನ್ನೂ ಎಷ್ಟು ಬಾಕಿ ಇದೆ? ಎಷ್ಟು ಉಳಿಕೆಯಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಅನುದಾನದ ಮಾಹಿತಿ ಸಲ್ಲಿಸಲು ಸೂಚನೆ ನೀಡಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಮಾತನಾಡಿ, ಶಕ್ತಿ ಯೋಜನೆಯಡಿ ಹಾವೇರಿ ವಿಭಾಗದ ವ್ಯಾಪ್ತಿಯಲ್ಲಿ 2023 ಜೂ. 11ರಿಂದ 2025 ಏ. 20ರ ವರೆಗೆ ಒಟ್ಟು 11,23,92,194 ಮಹಿಳೆಯರು ಪ್ರಯಾಣಿಸಿದ್ದು, ₹327.75 ಕೋಟಿ ಆದಾಯವಾಗಿದೆ. ಹಾವೇರಿ ವಿಭಾಗಕ್ಕೆ 86 ಹೊಸ ವಾಹನಗಳು ಮಂಜೂರಾಗಿವೆ ಎಂದರು.

ಹೆಸ್ಕಾಂ ವಿಭಾಗ ಹಾವೇರಿ ಕಾರ್ಯನಿರ್ವಾಹಕ ಎಂಜಿನಿಯರ್‌ ಮಾತನಾಡಿ, ಆಗಸ್ಟ್‌ 2023ರಿಂದ ಮಾರ್ಚ್‌ 2025ರ ಅಂತ್ಯಕ್ಕೆ ಗೃಹಜ್ಯೋತಿ ಯೋಜನೆಯಡಿ ಹಾವೇರಿ ಮತ್ತು ರಾಣಿಬೆನ್ನೂರು ವೃತ್ತದ ವ್ಯಾಪ್ತಿಯಲ್ಲಿ ಒಟ್ಟು 41,4,586 ಗ್ರಾಹಕರು ಹೊಂದಿದ್ದು, 4,08,001 ಗೃಹಜ್ಯೋತಿ ಯೋಜನೆಗೆ ಅರ್ಹರಿರುವ ಸ್ಥಾವರಗಳಾಗಿದ್ದು, 4,00,769 ಗೃಹ ಬಳಕೆ ಮಾಡುತ್ತಿದ್ದಾರೆ ಎಂದರು.

ಕೆಲವು ಗ್ರಾಮದಲ್ಲಿ 3 ಮತ್ತು 4 ದಿನ ರೇಷನ್ ಕೊಟ್ಟು 5ನೇ ದಿನಗಳಿಗೆ ರೇಷನ್ ಇಲ್ಲ, ಖಾಲಿಯಾಗಿದೆ ಎಂದು ರೇಷನ್‌ ಅಂಗಡಿಯವರು ಹೇಳುತ್ತಾರೆ. ಪಡಿತರ ಸಾಮಗ್ರಿಗಳನ್ನು ತಿಂಗಳಿನಲ್ಲಿ ಯಾವ ದಿನಾಂಕದಿಂದ ಯಾವ ದಿನಾಂಕದ ವರೆಗೆ ಫಲಾನುಭವಿಗಳಿಗೆ ಯಾವಾಗ ಸರಬರಾಜು ಮಾಡುವ ಬಗ್ಗೆ ಮಾಹಿತಿ ನೀಡಬೇಕು ಎಂದು ಗ್ಯಾರಂಟಿ ಯೋಜನೆ ಸದಸ್ಯರು ಪ್ರಸ್ತಾಪಿಸಿದರು. ಆಗ ಅಧ್ಯಕ್ಷರು ಮಾತನಾಡಿ, ಅರ್ಹ ಫಲಾನುಭವಿಗಳು ಪಡಿತರ ಸೌಲಭ್ಯದಿಂದ ವಂಚಿತರಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಲ್ಲಿ ಜನವರಿ ವರೆಗೆ 3,81,606 ಫಲಾನುಭವಿಗಳಿದ್ದಾರೆ. ಸಹಾಯಧನ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳ ಬಾಕಿ ಅನುದಾನ ಬಿಡುಗಡೆಯಾದ ಮೇಲೆ ಉಳಿದ ಫಲಾನುಭವಿಗಳ ಮೊತ್ತ ಅವರ ಖಾತೆಗೆ ಜಮೆಯಾಗುತ್ತದೆ ಎಂದು ಹೇಳಿದರು.

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 7113 ನೋಂದಣಿಯಾಗಿದ್ದು, ಅದರಲ್ಲಿ ನೇರ ನಗದು ವರ್ಗಾವಣೆಯಾದ ಅರ್ಹ ಫಲಾನುಭವಿಗಳ ಸಂಖ್ಯೆ 5103. ಯುವನಿಧಿ ಯೋಜನೆಯಡಿ ನೇರ ನಗದು ವರ್ಗಾವಣೆ ಮಾಡಲಾದ ಹಾವೇರಿ ಜಿಲ್ಲೆಯ ಒಟ್ಟು ಅಂಕಿ-ಅಂಶದ ಜನವರಿ 2024ರಿಂದ ಫೆಬ್ರವರಿ ಅಂತ್ಯದ ವರೆಗೆ ಪದವಿ, ಡಿಪ್ಲೊಮಾ ಇದರಲ್ಲಿ 29,885 ಅರ್ಹ ಅಭ್ಯರ್ಥಿಗಳಾಗಿರುತ್ತಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ, ಜಿಪಂ ಸಿಇಒ ರುಚಿ ಬಿಂದಲ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪದಾಧಿಕಾರಿಗಳು ಇದ್ದರು.

Share this article