- ಗುಬ್ಬಿಗಾ ಗ್ರಾಮದ ಕೃಷಿಕ ರಾಗ ಅವರ ಗದ್ದೆಯಲ್ಲಿ ಯಂತ್ರಶ್ರೀ ಭತ್ತದ ನಾಟೀ ಪ್ರಾತ್ಯಕ್ಷಿಕೆ
ಭತ್ತದ ಬೀಜದ ಬಿತ್ತನೆಯಿಂದ ಹಿಡಿದು ಭತ್ತದ ಕಟಾವಿನವರೆಗೂ ಯಂತ್ರದ ಮೂಲಕ ಕೃಷಿಯಲ್ಲಿ ಅನುಷ್ಠಾನ ಮಾಡುವುದೇ ಯಂತ್ರಶ್ರೀ ಯೋಜನೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ರವಿ ತಿಳಿಸಿದರು.
ಶುಕ್ರವಾರ ತಾಲೂಕಿನ ಕೈಮರ ವಲಯದ ವಗ್ಗಡೆ ಕಾರ್ಯಕ್ಷೇತ್ರದ ಗುಬ್ಬಿಗಾ ಗ್ರಾಮದ ರಾಘವ ಅವರ ಗದ್ದೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಎನ್.ಆರ್.ಪುರ ಹಾಗೂ ಕೊಪ್ಪ ಬಿಸಿ ಟ್ರಸ್ಟ್ ನ ಸಂಯುಕ್ತಾಶ್ರಯದಲ್ಲಿ ನಡೆದ ಯಂತ್ರಶ್ರೀ ಭತ್ತದ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ಇತ್ತೀಚೆಗೆ ಕೃಷಿ ಕೆಲಸ ನಿರ್ವಹಿಸಲು ಕೃಷಿ ಕಾರ್ಮಿಕರ ಕೊರತೆಯಿಂದ ಭತ್ತದ ಬೆಳೆ ಬೆಳೆಯಲು ರೈತರು ನಿರಾಸಕ್ತಿ ತೋರುತ್ತಿದ್ದಾರೆ.ಆದ್ದರಿಂದ ಯಂತ್ರಶ್ರೀ ಮೂಲಕ ನಾಟಿ ಮಾಡಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಲು ಸಹಕಾರಿ ಯಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಗದ್ದೆ ನಾಟಿ ಮಾಡಿ ಉತ್ತಮ ಗುಣಮಟ್ಟದ ಇಳುವರಿ ಪಡೆಯಬಹುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ ವಹಿಸಿದ್ದರು. ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಕವನ , ಕೃಷಿ ಇಲಾಖೆಯಿಂದ ರೈತರಿಗೆ ದೊರಕುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ.ಬಿ.ಗೌಡ, ಗುಬ್ಬಿಗಾ ಗ್ರಾ.ಪಂ. ಮಾಜಿ ಸದಸ್ಯ ಶಂಕರ್, ಸ್ಥಳೀಯ ಸೇವಾ ಪ್ರತಿನಿಧಿ ಶಿಬಿ, ಕೃಷಿ ಮೇಲ್ವಿಚಾರಕ ಅನೂಪ್ಕುಮಾರ್, ಮಂಜುನಾಥ್ ಇದ್ದರು.