ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ದಾಖಲಾತಿಗಳ ಸುರಕ್ಷತೆಗಾಗಿ ಭೂಸುರಕ್ಷಾ ಯೋಜನೆ ಜಾರಿ : ಶಾಸಕ ಟಿ.ರಘುಮೂರ್ತಿ ಚಾಲನೆ

KannadaprabhaNewsNetwork | Updated : Jan 17 2025, 01:01 PM IST

ಚಳ್ಳಕೆರೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಸರ್ಕಾರದ ಕಂದಾಯ ಇಲಾಖೆಯ ಮಹತ್ತರ ಯೋಜನೆಯಾದ ಭೂಸುರಕ್ಷ ಯೋಜನೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.

 ಚಳ್ಳಕೆರೆ : ತಾಲೂಕಿನ ಸಮಸ್ತ ರೈತರ ಭೂದಾಖಲಾತಿಗಳನ್ನು ಕಂಪ್ಯೂಟರಿಕರಣದ ಮೂಲಕ ಈಗಾಗಲೇ ಸಿದ್ದಪಡಿಸಿದ್ದು, ರೈತರು ಯಾವುದೇ ಗ್ರಾಮದ ಭೂದಾಖಲೆಗಳನ್ನು ಪಡೆಯಲು ಸರ್ಕಾರ ಅನುವು ಮಾಡಿಕೊಟ್ಟಿದೆ. ರೈತರಿಗೆ ಸಂಬಂಧಪಟ್ಟ ಭೂದಾಖಲಾತಿಗಳು ತಾಲೂಕು ಕಚೇರಿ ಸೇರಿದಂತೆ ನಾಡಕಚೇರಿಯಲ್ಲಿಯೂ ಲಭ್ಯವಾಗಲಿದೆ. 

ಭೂದಾಖಲೆ ಪಡೆಯಲು ರೈತರು ಪರದಾಡುವ ಸ್ಥಿತಿ ಅವಲೋಕಿಸಿ ಸರ್ಕಾರ ಭೂಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಗುರುವಾರ ಸಂಜೆ ತಾಲೂಕು ಕಚೇರಿ ಸಭಾಂಗಣದಲ್ಲಿ ಸರ್ಕಾರದ ಕಂದಾಯ ಇಲಾಖೆಯ ಮಹತ್ತರ ಯೋಜನೆಯಾದ ಭೂಸುರಕ್ಷ ಯೋಜನೆಯನ್ನು ಕಂಪ್ಯೂಟರ್ ಮೂಲಕ ಚಾಲನೆ ನೀಡಿ ಮಾತನಾಡಿದರು. 

ಕಳೆದ ಹಲವಾರು ವರ್ಷಗಳಿಂದ ರೈತರು ತಮ್ಮ ದಾಖಲೆಗಳನ್ನು ಪಡೆಯಲು ತಾಲೂಕು ಕಚೇರಿಗೆ ಅಲೆದಾಡಬೇಕಿತ್ತು. ತಂದನಂತರ ಬದಲಾವಣೆ ಮಾಡಿ ವಿವಿಧ ನಾಡಕಚೇರಿಗೆ ನೀಡಲಾಯಿತು, ಮುಂದುವರೆದ ಭಾಗವಾಗಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡರ ನಿರಂತರ ಶ್ರಮದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಭೂಸುರಕ್ಷಾ ದಾಖಲಾತಿಗಳನ್ನು ನೀಡಲು ಈ ವ್ಯವಸ್ಥೆ ಮಾಡಿದ್ದು, ಇದರ ಸದುಪಯೋಗವನ್ನು ರೈತರು ಪೂರ್ಣಪ್ರಮಾಣದಲ್ಲಿ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ತಾಲೂಕಿನ ಭೂಮಿಗೆ ಸಂಬಂಧಪಟ್ಟ ಯಾವುದೇ ದಾಖಲೆಯನ್ನು ಸುಲಭವಾಗಿ ಪಡೆಯುವ ಅವಕಾಶ ಸರ್ಕಾರ ಮಾಡಿಕೊಟ್ಟಿದೆ. ಕೆಲವೊಮ್ಮೆ ಗ್ರಾಮೀಣ ಪ್ರದೇಶಗಳಲ್ಲಿ ಭೂ ದಾಖಲಾತಿಯನ್ನು ಪಡೆಯಲು ಅಡೆತಡೆಯಾಗುತ್ತಿದ್ದು, ಇದನ್ನು ತಪ್ಪಿಸಲು ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ ಎಂದರು.

ಖಾತೆ ಬದಲಾವಣೆ, ಪೌತಿಖಾತೆ, ವರ್ಗಾವಣೆ ಮುಂತಾದವುಗಳನ್ನು ಪಡೆಯಲು ನೇರವಾಗಿ ತಾಲೂಕು ಕಚೇರಿಗೆ ಆಗಮಿಸಬೇಕಿತ್ತು. ಇನ್ನುಳಿದ ಯಾವುದೇ ಭೂದಾಖಲೆಗಳನ್ನು ಬೇಕಾದಲ್ಲಿ ಸಂಬಂಧಪಟ್ಟ ನಾಡಕಚೇರಿ, ತಾಲೂಕು ಕಚೇರಿಯನ್ನು ಜನರು ಸಂಪರ್ಕಿಸಬಹುದು ಎಂದರು.

ತಹಸೀಲ್ದಾರ್‌ ರೇಹಾನ್‌ಪಾಷ, ಶಿರಸ್ಥೇದಾರ್ ಸದಾಶಿವಪ್ಪ, ಗಿರೀಶ್, ನಾಡಕಚೇರಿ ತಹಸೀಲ್ಧಾರ್ ಮಹಮ್ಮದ್‌ ರಫೀ, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಿಗ ಪ್ರಕಾಶ್, ಡಿ.ಶ್ರೀನಿವಾಸ್, ನಗರಸಭಾ ಸದಸ್ಯ ಕೆ.ವೀರಭದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.