ದೊಡ್ಡಬಳ್ಳಾಪುರ: ಕನಿಷ್ಠ ವೇತನ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಮತ್ತು ಸಮಿತಿ ರಚನೆ ಕ್ರಮವನ್ನು ವಾಪಸ್ ಪಡೆದು ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಸಿಐಟಿಯು ಹೋರಾಟಕ್ಕೆ ಕರೆ ನೀಡಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್ ತಿಳಿಸಿದರು.
84 ಉದ್ಯಮಗಳಿಗೆ ಏಕರೂಪ, ಸಾಮಾನ್ಯ ಅಧಿಸೂಚನೆ ಬಂದಿದೆ. 4 ವಲಯಗಳ ಬದಲಿಗೆ 3 ವಲಯಗಳನ್ನಾಗಿ ಮಾರ್ಪಡಿಸಲಾಗಿದೆ. ಕಾರ್ಮಿಕ ಚಳವಳಿಯ ನಿರಂತರ ಹೋರಾಟದ ಪ್ರತಿಫಲವಾಗಿತ್ತು. ಆದರೆ 2017ರ ನಂತರದ ಆಗಿರುವ ಶೇ.60 ವೇತನ ಹೆಚ್ಚಳ ಬಂಡವಾಳಕ್ಕೆ ದೊಡ್ಡ ಹೊರೆಯಾಗುವುದಿಲ್ಲ. ಬದಲಾಗಿ ಸುಮಾರು ಒಂದು ದಶಕದ ಬೆಲೆ ಏರಿಕೆಗೆ ಸೂಕ್ತ ಹೆಚ್ಚಳವಲ್ಲ ಎಂಬುದೇ ಸತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ಸಿಐಟಿಯು ಜಿಲ್ಲಾಧ್ಯಕ್ಷ ಸಿ.ನರಸಿಂಹಮೂರ್ತಿ ಮಾತನಾಡಿ, ಪರಿಷ್ಕೃತ ಕನಿಷ್ಠ ವೇತನದ ಹೆಚ್ಚಳದಿಂದ ಹಣಕಾಸಿನ ಹೊರೆ ಬರುವುದರಿಂದ ಈ ಆದೇಶವನ್ನು ತಡೆ ಹಿಡಿಯಬೇಕು ಎಂಬ ಅಭಿಪ್ರಾಯದಲ್ಲಿ ರಾಜ್ಯ ಸರ್ಕಾರ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ರಚಿಸಿ ಕನಿಷ್ಠ ವೇತನ ಜಾರಿಯ ಅಧಿಕೃತ ಅಧಿಸೂಚನೆ ತಡೆಹಿಡಿದಿದ್ದಾರೆ. ಕಾರ್ಮಿಕ ವಿರೋಧಿ ನೀತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲದು ಎಂದರು.ರಾಜ್ಯದಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ದಿಮೆಗಳು ತಮ್ಮದೇ ಆದ ಸ್ವಂತ ಉತ್ಪನ್ನಗಳನ್ನು ಮಾಡುವುದಿಲ್ಲ. ದೊಡ್ಡ ಬಂಡವಾಳಗಾರರಿಗೆ ಅಗತ್ಯ ಮೂಲ ಹಾಗು ಬಿಡಿಭಾಗಗಳನ್ನು ಉತ್ಪಾದಿಸುತ್ತಾರೆ ಅಷ್ಟೆ. ಅವರಿಗೆ ಉತ್ಪಾದನಾ ವೆಚ್ಚವನ್ನು ಕೊಡಬೇಕಾದವರು ದೊಡ್ಡಮಾಲಿಕರೇ ಆಗಿರುತ್ತಾರೆ. ವೇತನದ ಹೆಚ್ಚಳದಿಂದ ಆಗುವ ಉತ್ಪಾದನಾ ವೆಚ್ಚವನ್ನು ದೊಡ್ಡ ಬಂಡವಾಳಗಾರರು ಬರಿಸಿದಲ್ಲಿ ಸಣ್ಣ ಬಂಡವಾಳಿಗರಿಗೆ ಸೂಚಿತ ವೇತನವನ್ನು ಕಾರ್ಮಿಕರಿಗೆ ನೀಡುವುದು ಹೊರೆಯಾಗುವುದಿಲ್ಲ ಎಂದರು.
19ಕೆಡಿಬಿಪಿ1-