ಕಾಂಗ್ರೆಸ್ ಹಾಗೂ ಇತರೆ ವಿಪಕ್ಷಗಳ ಮುಖಂಡರನ್ನು ಐ.ಟಿ., ಇ.ಡಿ. ದಾಳಿಯಿಂದ ಹೆದರಿಸುವುದು, ಸೂಕ್ತ ಸಾಕ್ಷ್ಯಾಧಾರ ಇಲ್ಲದಿದ್ದರೂ ಮುಖ್ಯಮಂತ್ರಿ, ಮಂತ್ರಿ, ಸಂಸದರನ್ನು ಜೈಲಿಗೆ ಕಳಿಸುವ ನೀಚ ಕೃತ್ಯ ಎಸಗುತ್ತ ಕೇಂದ್ರದ ಬಿಜೆಪಿ ಸರ್ಕಾರ ಅಘೋಷಿತವಾಗಿ ದೇಶದಲ್ಲಿ ತುರ್ತು ಸ್ಥಿತಿ ಹೇರಿದೆ ಎಂದು ಕಾಂಗ್ರೆಸ್ನ ಮಾಜಿ ಸಚಿವ ಎಚ್.ಆಂಜನೇಯ ಹರಿಹರದಲ್ಲಿ ಆರೋಪಿಸಿದ್ದಾರೆ.
- ಬಿಜೆಪಿ ಆಡಳಿತದಿಂದ ಪ್ರಜಾತಂತ್ರ ವ್ಯವಸ್ಥೆಗೆ ತೀವ್ರ ಧಕ್ಕೆ: ಎಚ್.ಆಂಜನೇಯ ಆರೋಪ - - - ಕನ್ನಡಪ್ರಭ ವಾರ್ತೆ ಹರಿಹರ
ಕಾಂಗ್ರೆಸ್ ಹಾಗೂ ಇತರೆ ವಿಪಕ್ಷಗಳ ಮುಖಂಡರನ್ನು ಐ.ಟಿ., ಇ.ಡಿ. ದಾಳಿಯಿಂದ ಹೆದರಿಸುವುದು, ಸೂಕ್ತ ಸಾಕ್ಷ್ಯಾಧಾರ ಇಲ್ಲದಿದ್ದರೂ ಮುಖ್ಯಮಂತ್ರಿ, ಮಂತ್ರಿ, ಸಂಸದರನ್ನು ಜೈಲಿಗೆ ಕಳಿಸುವ ನೀಚ ಕೃತ್ಯ ಎಸಗುತ್ತ ಕೇಂದ್ರದ ಬಿಜೆಪಿ ಸರ್ಕಾರ ಅಘೋಷಿತವಾಗಿ ದೇಶದಲ್ಲಿ ತುರ್ತು ಸ್ಥಿತಿ ಹೇರಿದೆ ಎಂದು ಕಾಂಗ್ರೆಸ್ನ ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋಟಿಗಟ್ಟಲೆ ಹಣ ನೀಡಿ ಶಾಸಕರನ್ನು ಖರೀದಿಸುವ ಮೂಲಕ ಬಿಜೆಪಿ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ತೀವ್ರ ಧಕ್ಕೆ ತಂದಿದೆ. ದೇಶದ ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಬಿಜೆಪಿಗೆ ಇರುವ ನಿಕೃಷ್ಟ ಭಾವನೆ ಇದು ಬಿಂಬಿಸುತ್ತದೆ ಎಂದರು.
ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬಹುಮತ ಪಡೆದು ಅಧಿಕಾರ ಪಡೆದಿದ್ದ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಸರ್ಕಾರಗಳನ್ನು ಬಿಜೆಪಿ ಉರುಳಿಸಿದೆ. ಶಾಸಕರನ್ನು ಖರೀದಿ ಮಾಡಿ ಬಹುಮತ ಪಡೆದ ಸರ್ಕಾರಗಳನ್ನು ಉರುಳಿಸುವ ಕೆಟ್ಟ ಸಂಸ್ಕೃತಿ ದೇಶದಲ್ಲಿ ಹುಟ್ಟುಹಾಕಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದರು.
ಈಗಾಗಲೆ ಇಬ್ಬರು ಶಾಸಕರಿರುವ ಶಾಮನೂರು ಕುಟುಂಬದವರಿಗೆ ಲೋಕಸಭಾ ಟಿಕೆಟ್ ನೀಡಿರುವುದು ಸರಿಯೆ? ಎಂಬ ಪ್ರಶ್ನೆಗೆ, ಜನರ ನಡುವೆ ಬೆರೆತು ಸಾಮಾಜಿಕ ಸೇವಾ ಕಾರ್ಯ ಮಾಡುತ್ತಿರುವುದು ಹಾಗೂ ಮಹಿಳೆಗೆ ಟಿಕೆಟ್ ನಿಗದಿ ಆಗಿದ್ದರಿಂದ ಅನಿವಾರ್ಯವಾಗಿ ಶಾಮನೂರು ಕುಟುಂಬದ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಅವಕಾಶ ಸಿಕ್ಕಿದೆ ಎಂದು ಉತ್ತರಿಸಿದರು.
ಮಾಜಿ ಶಾಸಕ ಎಸ್.ರಾಮಪ್ಪ, ಪಕ್ಷದ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಎಲ್.ಬಿ.ಹನುಮಂತಪ್ಪ, ನಗರಸಭಾ ಸದಸ್ಯ ರಜನೀಕಾಂತ್, ಸುರೇಶ್ ಹಾದಿಮನಿ, ಎಂ.ಬಿ.ಅಣ್ಣಪ್ಪ, ಸಂತೋಷ್ ನೋಟದವರ್, ಎ.ಬಿ.ನಾಗರಾಜ್, ಎನ್.ಬಿ.ರಮೇಶ್, ಅಬ್ದುಲ್ ರಹಮಾನ್, ತಿಪ್ಪೇಶ್ ಹಾಗೂ ಇತರರಿದ್ದರು.
- - -
ಕೋಟ್ ರಾಜ್ಯದಲ್ಲಿ ನೀಡಿದ ವಚನದಂತೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ, ಅದೇ ರೀತಿ ಕೇಂದ್ರದಲ್ಲೂ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿ ಮಾಡಲು ಬದ್ಧವಾಗಿದೆ. ದಾವಣಗೆರೆ ಕ್ಷೇತ್ರದ ಅಹಿಂದ ಸೇರಿದಂತೆ ಮಹಿಳೆಯರು, ಪ್ರಗತಿಪರರು, ಶಾಂತಿ ಪ್ರಿಯರೆಲ್ಲರೂ ಡಾ.ಪ್ರಭಾರನ್ನು ಬೆಂಬಲಿಸಬೇಕು
- ಎಚ್.ಆಂಜನೇಯ, ಮಾಜಿ ಸಚಿವ
- - - -೨೯ಎಚ್ಆರ್ಆರ್೧:
ಹರಿಹರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.