ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳಿಲ್ಲದೇ ನೂರು ವರ್ಷ ಬದುಕಬಹುದೆಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ ತಿಳಿಸಿದರು.
ಕೆಜಿಎಫ್ನ ಜೆಎಂಎಫ್ಸಿ ನ್ಯಾಯಾಲಯದ ಮುಂಭಾಗ ಯೋಗ ದಿನಾಚರಣೆ
ಕೆಜಿಎಫ್: ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳಿಲ್ಲದೇ ನೂರು ವರ್ಷ ಬದುಕಬಹುದೆಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ ತಿಳಿಸಿದರು.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೆಜಿಎಫ್ನ ಜೆಎಂಎಫ್ಸಿ ನ್ಯಾಯಾಲಯದ ಮುಂಭಾಗ ಪತಂಜಲಿ ಯೋಗ ಶಿಕ್ಷಣ ಸಮಿತಿ, ವಕೀಲರ ಸಂಘ ಹಾಗೂ ಕೆಜಿಎಫ್ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ಯೋಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ತನಗಾಗಿ ಮತ್ತು ಸಮಾಜಕ್ಕಾಗಿ ಎಂಬುದು ಈ ಬಾರಿಯ ವಸ್ತು ವಿಷಯವಾಗಿದೆ, ಪ್ರಧಾನಿ ನರೇಂದ್ರ ಮೋದಿ ಪ್ರಯತ್ನದ ಫಲವಾಗಿ ವಿಶ್ವಸಂಸ್ಥೆ ಹಾಗೂ ಅದರ ಬಹುತೇಕ ಸದಸ್ಯ ರಾಷ್ಟ್ರಗಳು ಈ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲು ನಿರ್ಧರಿಸಿದವು ಎಂದು ತಿಳಿಸಿದರು.
ಯೋಗ ಗುರು ಶ್ರೀನಿವಾಸ್ ಮಾತನಾಡಿ, ಯೋಗ ಮಾಡುವುದರಿಂದ ನಮಗೆ ಮಾನಸಿಕ ಮತ್ತು ದೈಹಿಕವಾಗಿ ನೆಮ್ಮದಿ ಸಿಗುತ್ತದೆ, ಯೋಗಕ್ಕೆ ಹೆಚ್ಚಿನ ಮಹತ್ವ ಕೊಟ್ಟರೆ ಯುವಜನಾಂಗ ದಾರಿ ತಪ್ಪುವುದು ಕಡಿಮೆಯಾಗುತ್ತದೆ. ಯೋಗ ಈಗ ಭಾರತಕ್ಕಷ್ಟೇ ಸೀಮಿತವಾಗಿಲ್ಲ, ಚೀನಾದಲ್ಲೂ ನಮ್ಮ ದೇಶದ ಯೋಗಪಟುಗಳು ಯೋಗ ಕಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ್ಕುಮಾರ್ ಮಾತನಾಡಿ, ಪ್ರತಿ ವರ್ಷ ವಿಶ್ವವು ಜೂ.೨೧ನ್ನು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುತ್ತಿದೆ. ಯೋಗದ ಉಗಮಕ್ಕೆ ಕಾರಣ ಧ್ಯಾನವೆಂದರೆ ತಪ್ಪಾಗಲಾರದು, ಧ್ಯಾನವು ಯೋಗದ ಮಹತ್ವದ ಭಾಗವಾಗಿದೆ, ಚಲನೆಯಿಂದ ನಿಶ್ಚಲತೆಗೆ, ಶಬ್ದದಿಂದ ನಿಶ್ಯಬ್ದವೇ ಧ್ಯಾನವಾಗಿದೆ, ನಾವೆಲ್ಲರೂ ಶಾಂತ, ಪ್ರಶಾಂತ, ಆಹ್ಲಾದಕರ ಮತ್ತು ಸುಂದರವಾದ ಭೂಮಿ ಪಡೆದುಕೊಂಡಿದ್ದೇವೆ, ಧ್ಯಾನವು ಈ ಶಾಂತ ಜಾಗದಲ್ಲಿ ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ಒಳಗೊಂಡಿದೆ ಎಂದರು.
ವಕೀಲರ ಸಂಘದ ರಾಜಗೋಪಾಲಗೌಡ ಮಾತನಾಡಿ, ಧ್ಯಾನದ ಮೂಲಕ ನಮ್ಮೊಳಗೆ ಸಂತೋಷ ಮತ್ತು ನೆಮ್ಮದಿಯು ಸೃಷ್ಟಿಯಾಗುತ್ತದೆ ಎಂದರು.
ಹಿರಿಯ ನ್ಯಾಯಾಧೀಶ ಮುಜಂಫರ್ ಎ.ಮಾಂಜರಿ, ನ್ಯಾಯಾಧೀಶ ಮಂಜುನಾಥ್, ವಕೀಲರ ಸಂಘದ ಉಪಾಧ್ಯಕ್ಷ ಮಂಜುನಾಥ್, ವಕೀಲ ದಿನೇಶ್, ಮಾಗೇಶ್, ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನ ರೆಡ್ಡಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.