- ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಒತ್ತಾಯ- - -
ಕನ್ನಡಪ್ರಭ ವಾರ್ತೆ, ದಾವಣಗೆರೆದೇಶದ ಕೃಷಿ ಪದ್ಧತಿ ಸುಧಾರಿಸುವ ಜೊತೆಗೆ ರೈತರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಪ್ರಥಮಾದ್ಯತೆ ಮೇಲೆ ಮುಂದಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಒತ್ತಾಯಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಕಸಾಪ ಹಾಗೂ ಭಾರತೀಯ ಕಿಸಾನ್ ಸಂಘ ಸೇವಾ ಉಪಕ್ರಮದಡಿ ಜಿಲ್ಲೆಯ ಕೃಷಿಕರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಆರ್ಥಿಕತೆಗೆ ಅಪಾರ ಕೊಡುಗೆ ನೀಡುವ ರೈತರು ಮತ್ತು ಕೃಷಿ ಕ್ಷೇತ್ರದ ಸಮಸ್ಯೆ ನಿವಾರಣೆ, ಸುಧಾರಣೆಗೆ ಉಭಯ ಸರ್ಕಾರಗಳು ಮುಂದಾಗಲಿ ಎಂದರು.ರೈತ ಸಂಕಷ್ಟಗಳನ್ನು ಸರ್ಕಾರ ಪರಿಹರಿಸಿದರೆ, ದೇಶದ ಆರ್ಥಿಕತೆಗೆ ರೈತರೂ ಕೊಡುಗೆ ನೀಡುತ್ತಾರೆ. ದೇಶದ ಆರ್ಥಿಕ ಪ್ರಗತಿಗೆ ಅನ್ನದಾತನ ಕೊಡುಗೆಯೂ ಅದ್ಭುತವಾಗಿರುತ್ತದೆ. ಸಂವಾದದಲ್ಲಿ ಉಭಯ ಸರ್ಕಾರಗಳಿಂದ ರೈತರಿಗೆ ಸಿಗುವ ಯೋಜನೆ, ಸೌಲಭ್ಯ, ನೆರವುಗಳು, ಆಧುನಿಕ ಬೇಸಾಯ ಪದ್ಧತಿಗೆ ಬೇಕಾದಂತಹ ಸವಲತ್ತುಗಳ ಬಗ್ಗೆ ತಿಳಿಸುವ ಕೆಲಸ ಆಗಲಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಕೇಂದ್ರ ಸಮಿತಿ ನಿರ್ದೇಶಕ ಜಿ.ರುದ್ರಯ್ಯ ಮಾತನಾಡಿ, ರೈತರ ಜೀವನಮಟ್ಟ ಇತರೆ ಎಲ್ಲ ಉದ್ಯೋಗಗಳಿಗಿಂತಲೂ ಉತ್ತಮವಾಗಿದ್ದು ಎಂಬ ಸ್ಥಿತಿ ಬರಬೇಕು. ಆಗ ಮಾತ್ರ ರೈತರ ಮಕ್ಕಳಿಗೆ ವಧು ಕೊಡಲು ಹೆಣ್ಣುಹೆತ್ತವರು ಮುಂದೆ ಬರುತ್ತಾರೆ. ರೈತರ ಪರಿಸ್ಥಿತಿ ಸುಧಾರಿಸುವಲ್ಲಿ ಸರ್ಕಾರಗಳು ಇಚ್ಛಾಶಕ್ತಿ, ಬದ್ಧತೆ, ಕಾಳಜಿ ತೋರಬೇಕಾಗಿದೆ. ಕೃಷಿ ಕ್ಷೇತ್ರದಲ್ಲಿ ಬದಲಾವಣೆ, ರೈತರ ಬದುಕನ್ನು ಹಸನಾಗಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಮುಂದಾಗಲಿ ಎಂದು ಆಗ್ರಹಿಸಿದರು.ಮುಖ್ಯ ಸಂಪನ್ಮೂಲ ವ್ಯಕ್ತಿ ಹುಬ್ಬಳ್ಳಿಯ ಕೃಷಿ ತಜ್ಞ ಡಾ. ಪಿ.ಎಸ್. ರಂಜಿತಕುಮಾರ ಮಾತನಾಡಿ, ರೈತರಿಗೆ ಬೇಕಾಗುವ ಹಾಗೂ ಅನುಸರಿಸಬೇಕಾದ ಉಪಯುಕ್ತವಾಗ ಹಾಗೂ ಲಾಭದಾಯಕ ಕ್ರಮಗಳ ಬಗ್ಗೆ ಸ್ಲೈಡ್ಸ್ಗಳ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು. ರೈತರ ಪ್ರಶ್ನೆಗಳಿಗೆ ಸಮರ್ಪಕವಾಗಿ ವಿವರಿಸುವ ಮೂಲಕ ಸಂವಾದವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿದರು.
ಕೆನರಾ ಬ್ಯಾಂಕ್ ಲೀಡ್ ಬ್ಯಾಂಕ್ನ ಅಧಿಕಾರಿ ಶಿವಪ್ಪ, ನಗರದ ಸೇವಾ ಕಾರ್ಯಕರ್ತ ರೂಪೇಶ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ವೇದಾನಂದ ಹೊನ್ನೆಬಾಗಿ, ಜಿಲ್ಲಾ ಸಂಚಾಲಕ ಅಶೋಕ ದುರ್ವಿಗೆರೆ ಇತರರು ಇದ್ದರು. ಜಿಲ್ಲೆಯ ವಿವಿಧೆಡೆಯಿಂದ ರೈತರು ಸಂವಾದದಲ್ಲಿ ಭಾಗವಹಿಸಿದ್ದರು.- - - -11ಕೆಡಿವಿಜಿ7:
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಕಸಾಪ ಹಾಗೂ ಭಾರತೀಯ ಕಿಸಾನ್ ಸಂಘ ಹಮ್ಮಿಕೊಂಡಿದ್ದ ಸೇವಾ ಉಪಕ್ರಮದಡಿ ಜಿಲ್ಲೆಯ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಉದ್ಘಾಟಿಸಿದರು.