ಕನ್ನಡಪ್ರಭ ವಾರ್ತೆ ಮೈಸೂರು
ಕಾರ್ಮಿಕರು ತಮಗೆ ದಕ್ಕಬೇಕಾದ ಹಕ್ಕುಗಳನ್ನು ಹೋರಾಟದಿಂದ ಪಡೆಯುವುದಲ್ಲದೆ ತಮ್ಮ ಜವಾಬ್ದಾರಿಗಳನ್ನು ಸಹ ಕಟಿಬದ್ದವಾಗಿ ನಿರ್ವಹಿಸಿ ತಾವು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳ ಏಳಿಗೆಗಾಗಿ ಶ್ರಮಿಸಬೇಕು ಎಂದು ಮೈಸೂರು ಜಿಲ್ಲಾ ಕೈಗಾರಿಕಾ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಮಿಕ ಕಾನೂನು ಸಲಹೆಗಾರ ಎಚ್.ಎಸ್. ಜಗದೀಶ್ ಕರೆ ನೀಡಿದರು.ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆ ಮತ್ತು ಸುಯೋಗ್ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಮೂಹಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಇಎಸ್ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಮಾತನಾಡಿ, ಕಾರ್ಮಿಕರಿಗೆ ಇಎಸ್ಐ ಆಸ್ಪತ್ರೆಯಿಂದ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದು, ಅಲ್ಲಿ ಇಲ್ಲದ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆಯನ್ನು ಒಡಂಬಡಿಕೆಯ ಮೇಲೆ ಖಾಸಗಿ ಆಸ್ಪತ್ರೆಗಳಿಂದ ಕಾರ್ಮಿಕರು ಪಡೆಯುತ್ತಿದ್ದಾರೆ ಎಂದರು.ಸುಯೋಗ್ ಆಸ್ಪತ್ರೆಯು ಕಾರ್ಮಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಕಾರ್ಮಿಕರ ಮನ್ನಣೆ ಗಳಿಸಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಸದೃಢವಾಗಿದ್ದರೆ ಮಾತ್ರ ಕಾರ್ಮಿಕರು ಸೇವೆ ಸಲ್ಲಿಸಲು ಸಾಧ್ಯ. ಹೀಗಾಗಿ, ಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ..ಯೋಗಣ್ಣ ಮಾತನಾಡಿ, ಕಾರ್ಮಿಕರ ಕ್ಷೇಮಾಭಿವೃದ್ದಿ ನಿಧಿಗೆ ರಾಜ್ಯದಿಂದ ವಾರ್ಷಿಕ ಸುಮಾರು 1500 ಕೋಟಿಗಳು ಕಾರ್ಮಿಕರಿಂದ ಮತ್ತು ಉದ್ಯಮಿಗಳಿಂದ ಪಾವತಿಯಾಗುತ್ತಿದ್ದು, ಇದರಲ್ಲಿ ವಾರ್ಷಿಕ 500 ಕೋಟಿಗಳು ಮಾತ್ರ ಖರ್ಚಾಗುತ್ತಿದು, ಸಂಪೂರ್ಣ ಹಣವನ್ನು ಕಾರ್ಮಿಕರ ಅಭಿವೃದ್ಧಿಗೆ ಬಳಸಬೇಕು ಎಂದರು.ಇದೇ ವೇಳೆ ಸುಯೋಗ್ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಹಣಕಾಸು ಅಧಿಕಾರಿ ಶ್ರೀನಿವಾಸ್, ಶುಚಿತ್ವಗೊಳಿಸುವ ಸಾವಿತ್ರಮ್ಮ, ತೋಟಗಾರಿಕೆಯ ನಂಜುಡ, ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಕಾರ್ಮಿಕ ಸಂಘದ ಜಗದೀಶ್, ಸಿದ್ದರಾಜು ಮತ್ತು ವೈದ್ಯಾಧಿಕಾರಿ ಡಾ.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಗಾಯಿತ್ರಿ ನಾರಾಯಣಗೌಡ ಸ್ವಾಗತಿಸಿದರು. ವ್ಯವಸ್ಥಾಪಕ ಪಿ.ಜೆ.ಅರುಣ್ ಕುಮಾರ್ ವಂದಿಸಿದರು. ಅನಂತು ನಿರೂಪಿಸಸಿದರು.