ನಂಜನಗೂಡಿನಲ್ಲಿ ಗೃಹಬಳಕೆ ಸಿಲಿಂಡರ್‌ ಗಾಗಿ ಮುಗಿ ಬಿದ್ದ ಜನತೆ

KannadaprabhaNewsNetwork |  
Published : Apr 03, 2026, 01:15 AM IST
59 | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ರೈತರು ಮತ್ತು ಕೂಲಿಕಾರ್ಮಿಕರು ಒಂದು ದಿನದ ಕೂಲಿಯನ್ನು ಬಿಡುವ ಜೊತೆಗೆ ಖಾಲಿ ಸಿಲಿಂಡರ್ ಸಾಗಿಸಲು ಆಟೋ ಟೆಂಪೋಗಳಿಗೆ ಬಾಡಿಗೆಯನ್ನು ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಚೌಡೇಶ್ವರಿ ಇಂಡಿಯನ್ ಗ್ಯಾಸ್ ವಿತರಕರ ಕಚೇರಿಯ ಮುಂಭಾಗ ಗ್ರಾಮೀಣ ಪ್ರದೇಶದ ಮತ್ತು ನಗರ ಪ್ರದೇಶದ ಜನರು ಸಿಲಿಂಡರ್ ಗಾಗಿ ಮುಗಿಬಿದ್ದರು.

ಕನ್ನಡಪ್ರಭ ವಾರ್ತೆ ನಂಜನಗೂಡು

ಕೊಲ್ಲಿ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಲಭ್ಯತೆ ಕೊರತೆಯಾಗಿದ್ದು, ನಂಜನಗೂಡಿನಲ್ಲಿ ಜನತೆ ಖಾಲಿ ಸಿಲಿಂಡರ್ ಹಿಡಿದು ಗೃಹಬಳಕೆ ಗ್ಯಾಸ್ ಸಿಲಿಂಡರ್ ಪಡೆಯಲು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗೃಹಬಳಕೆಯ ಎಲ್.ಪಿಜಿ ಪಡೆಯುವ ಸಲುವಾಗಿ ಸುಮಾರು 15 ರಿಂದ 20 ದಿನಗಳ ಮುಂಚೆಯೇ ಬುಕ್ ಮಾಡಿದ್ದರೂ ಸಹ ಗ್ರಾಹಕರಿಗೆ ಗ್ಯಾಸ್ ಸಿಲೆಂಡರ್ ಲಭ್ಯವಾಗುತ್ತಿಲ್ಲ, ಗ್ರಾಮೀಣ ಪ್ರದೇಶದ ಜನರಿಗಂತೂ ಸಿಲಿಂಡರ್ ಸಿಗದೆ ಪರದಾಡುತ್ತಿದ್ದಾರೆ, ಪಟ್ಟಣ ಪ್ರದೇಶದಲ್ಲೂ ಸಹ ಗ್ಯಾಸ್ ಸಿಲಿಂಡರ್ ಕೊರತೆ ಹೆಚ್ಚಾಗಿದೆ, ಇದರಿಂದ ನಗರ ಪ್ರದೇಶದ ನೌಕರರು ಮತ್ತು, ಕೂಲಿ ಕಾರ್ಮಿಕರು ಸಿಲಿಂಡರ್ ಪಡೆಯುವ ಸಲುವಾಗಿಯೇ ರಜೆಯನ್ನು ಹಾಕಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ, ರಜೆ ಹಾಕಿ ಸಾಲುಗಟ್ಟಿ ನಿಂತಿದ್ದರೂ ಸಹ ಗ್ಯಾಸ್ ಸಿಲಿಂಡರ್ ಲಭ್ಯವಾಗುತ್ತಿಲ್ಲ.

ಗ್ರಾಮೀಣ ಪ್ರದೇಶದ ರೈತರು ಮತ್ತು ಕೂಲಿಕಾರ್ಮಿಕರು ಒಂದು ದಿನದ ಕೂಲಿಯನ್ನು ಬಿಡುವ ಜೊತೆಗೆ ಖಾಲಿ ಸಿಲಿಂಡರ್ ಸಾಗಿಸಲು ಆಟೋ ಟೆಂಪೋಗಳಿಗೆ ಬಾಡಿಗೆಯನ್ನು ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಚೌಡೇಶ್ವರಿ ಇಂಡಿಯನ್ ಗ್ಯಾಸ್ ವಿತರಕರ ಕಚೇರಿಯ ಮುಂಭಾಗ ಗ್ರಾಮೀಣ ಪ್ರದೇಶದ ಮತ್ತು ನಗರ ಪ್ರದೇಶದ ಜನರು ಸಿಲಿಂಡರ್ ಗಾಗಿ ಮುಗಿಬಿದ್ದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಅಧಿಕಾರಿಗಳು ಕ್ರಮವಹಿಸಿ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುವುದನ್ನು ತಡೆ ಹಿಡಿದು ಗ್ಯಾಸ್ ಬುಕಿಂಗ್ ಮಾಡಿದ ಕನಿಷ್ಠ 7 ರಿಂದ 10 ದಿನಗಳ ಒಳಗೆ ಸಿಲಿಂಡರ್ ದೊರಕುವಂತೆ ಕ್ರಮವಹಿಸಬೇಕು. ಬುಕ್ ಮಾಡಿ ಹೆಚ್ಚು ದಿನ ಆದರೂ ಸಹ ಗ್ರಾಹಕರಿಗೆ ಸಿಲಿಂಡರ್ ವಿಸ್ತರಿಸದೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಸಿಬ್ಬಂದಿಗಳ ಮೇಲೆ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಎರಡು ಸಾವಿರು ರು.ಗೆ ಮಾರಾಟ

ಹುಣಸನಾಳು ಗ್ರಾಮದ ಲಕ್ಷ್ಮಮ್ಮ ಮಾತನಾಡಿ, ನಾವು ಸಿಲಿಂಡರ್ ಬುಕ್ ಮಾಡಿ ಸುಮಾರು 20 ದಿನ ಕಳೆದಿದೆ, ದಿನನಿತ್ಯ ಗ್ಯಾಸ್ ಹೊತ್ತು ಗ್ಯಾಸ್ ಏಜೆನ್ಸಿ ಯವರ ಆಟೋಗಳು ಗ್ರಾಮಕ್ಕೆ ಬರುತ್ತವೆ ಆದರೂ ಸಹ ನಮಗೆ ಸಿಲಿಂಡರ್ ಕೊಡುತ್ತಿಲ್ಲ, ಆದರೆ ಕೆಲವರು ಬುಕ್ ಮಾಡಿ ಕೇವಲ ಎರಡು ದಿನಕ್ಕೆ ಅವರಿಗೆ ಸಿಲಿಂಡರ್ ಸಿಗುತ್ತಿದೆ, ಅಲ್ಲದೆ ಸಿಲಿಂಡರ್ ಕೊಡುವ ಡೆಲಿವರಿ ಸಿಬ್ಬಂದಿ ನಿಗದಿತ ಅವಧಿಗೆ ಸಿಲಿಂಡರ್ ಕೊಡದೆ ಒಂದು ಸಾವಿರ ಸಿಲಿಂಡರ್ ಗೆ ಎರಡು ಸಾವಿರ ಪಡೆದು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಿಜಯ್ ಮಾತನಾಡಿ, ನಾವು ಗ್ಯಾಸ್ ಬುಕ್ ಮಾಡಿ 20 ದಿನ ಕಳೆದಿದೆ, ಗ್ರಾಮೀಣ ಪ್ರದೇಶದಿಂದ ನಮ್ಮ ಕೂಲಿ ಬಿಟ್ಟು ಬಾಡಿಗೆ ಆಟೋ ಮಾಡಿಕೊಂಡು ಖಾಲಿ ಸಿಲಿಂಡರ್ ಒತ್ತು ಏಜೆನ್ಸಿ ಮುಂಭಾಗ ಬಂದು ವಿಚಾರಿಸಲಾಗಿ ಅವರು ನಗರದ ಮಹದೇಶ್ವರ ಲೇಔಟ್ ಹತ್ತಿರ ಸಿಲಿಂಡರ್ ವಿತರಿಸುತ್ತಾರೆ, ಅಲ್ಲಿಗೆ ಹೋಗಿ ಸಿಲಿಂಡರ್ ಪಡೆಯಿರಿ ಎಂದು ಹೇಳಿದರು.

ನಾವು ಮತ್ತೆ ಬಾಡಿಗೆ ಆಟೋ ಮಾಡಿಕೊಂಡು ಸ್ಥಳಕ್ಕೆ ಬಂದರೂ ಸಹ ಸಿಲಿಂಡರ್ ವಿತರಿಸಲಿಲ್ಲ, ಸಿಲಿಂಡರ್ ನಿಮ್ಮ ಗ್ರಾಮಕ್ಕೆ ಬರುತ್ತದೆ ಹೋಗಿ ಎಂದು ಹೇಳುತ್ತಿದ್ದಾರೆ, ನಾಳೆಯೊಳಗೆ ಸಿಲಿಂಡರ್ ವಿತರಿಸದೆ ಇದ್ದಲ್ಲಿ ಗ್ರಾಮಸ್ಥರ ಒಡಗೂಡಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಳ್ಳಕೆರೆ ಅದ್ಧೂರಿ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ
ವಚನಕಾರ ಕ್ಷಿತಿಜದ ಉಜ್ವಲ ನಕ್ಷತ್ರ ಅಕ್ಕ: ಪ್ರಾಧ್ಯಾಪಕಿ ಡಾ.ಗಾಯತ್ರಿ