ಕನ್ನಡಪ್ರಭ ವಾರ್ತೆ ಟಿ.ನರಸೀಪುರ
ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ರಥಗಳನ್ನು ಎಳೆದು ಸಂಭ್ರಮಿಸಿದರು.
ಶುಭ ಮಿಥುನ ಲಗ್ನದಲ್ಲಿ ದೇವಾಲಯದ ಪ್ರಧಾನ ಅರ್ಚಕರು ಹಾಗೂ ಅರ್ಚಕ ವೃಂದವರು ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದರು. ಪಟ್ಟಣದ ರಥದ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆಯ ಮಂಟಪೋತ್ಸವ ನಡೆಯಿತು. ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ರಥದ ಬಳಿಗೆ ಉತ್ಸವ ಮೂರ್ತಿಗಳನ್ನು ಹೊತ್ತು ತಂದು ವೇದ ಮಂತ್ರ ಪಠಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.ಮಧ್ಯಾಹ್ನ 12.30ರ ವೇಳೆಗೆ ತಹಸೀಲ್ದಾರ್ ಟಿ.ಜೆ. ಸುರೇಶಾಚಾರ್ ರಥದ ಚಕ್ರಕ್ಕೆ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲೆಯ ವಿವಿಧ ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತಾದಿಗಳು ತೇರಿನ ಹಗ್ಗ ಹಿಡಿದು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.
ರಥವು ಪ್ರಮುಖ ಬೀದಿಗಳಲ್ಲಿ ಚಲಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಭಕ್ತರು ರಥಕ್ಕೆ ಹಣ್ಣು-ಧವನ ಎಸೆದು ಹರಕೆ ತೀರಿಸಿಕೊಂಡರು. ನವ ವಧುವರರು ಇಷ್ಟಾರ್ಥ ನೆರವೇರಿಸುವಂತೆ ಕೋರಿಕೊಂಡರು.
ಪ್ರಸಾದ ವಿತರಣೆ - ವಿವಿಧ ಸಂಘ ಸಂಸ್ಥೆಗಳವರು ರಥೊತ್ಸವಕ್ಕೆ ಆಗಮಿಸಿ ಬಿಸಿಲಿನ ಬೇಗೆಯಿಂದ ಬಳಲಿದ್ದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ರೈಸ್ ಬಾತ್, ಮೊಸರನ್ನ, ಪುಳಿಯೋಗರೆ, ಲಾಡು, ಕುಡಿಯುವ ನೀರಿನ ಬಾಟಲ್ ಗಳನ್ನು ವಿತರಿಸಿದರು. ಇದೇ ಮೊದಲ ಬಾರಿಗೆ ವಜ್ರಮಲೆ ಮಹದೇಶ್ವರ ಸಂಘದವರು ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.
ರಥೋತ್ಸವದ ಹಿನ್ನೆಲೆ ದೇವಾಲಯದಲ್ಲಿ ಏ.1ರಿಂದದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಏ. 3ರಂದು ತಿರುನಾಳ್ ಕಟ್ಲೆ ಉತ್ಸವ, ಡೋಲೋತ್ಸವ, ಶಯನೋತ್ಸವ, 4ರಂದು ಅಭವೃತ ಸ್ನಾನ, ಧ್ವಜಾರೋಹಣ, 5ರಂದು ಮಹಾಭಿಷೇಕ ಹಾಗೂ ಹನುಮಂತೋತ್ಸವ ಹಾಗು 6ರಂದು ವೈಮಾಳಿಗೆ ಉತ್ಸವದೊಂದಿಗೆ ಜಾತ್ರೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ. ಆರ್.ಐ. ಮಹೇಂದ್ರ, ದೇವಸ್ಥಾನದ ಪಾರುಪತ್ತೇದಾರ್ ದೀಪು, ಸೆಸ್ಕ್ ಎಇಇ ವೀರೇಶ್ ಇದ್ದರು.