ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಉಪಚುನಾವಣೆಯಲ್ಲಿ ಕುರುಡು ಕಾಂಚಾಣ, ಗಿಫ್ಟ್ ಬಾಕ್ಸ್ ಗಳ ಸದ್ದು !

KannadaprabhaNewsNetwork | Published : Feb 16, 2024 1:48 AM

ಅಭ್ಯರ್ಥಿಗಳು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದ ಕಾರಣ ಸಮಾಜವನ್ನು ತಿದ್ದುವ ಜವಾಬ್ಧಾರಿ ಸ್ಥಾನದಲ್ಲಿರುವ ಶಿಕ್ಷಕರು ಕೂಡಾ ಇಂತಹ ಆಮಿಷಗಳಿಗೆ ಬಲಿಯಾಗುತ್ತಿರುವುದು ದುರಂತವೆನಿಸಿದೆ.

ಕನ್ನಡಪ್ರಭ ವಾರ್ತೆ ಕುದೂರು

ಪ್ರಜ್ಞಾವಂತರ ಮನೆ ಎನಿಸಿಕೊಂಡ ವಿಧಾನಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಯಲ್ಲಿ ಕುರುಡು ಕಾಂಚಾಣ, ಗಿಫ್ಟ್ ಬಾಕ್ಸ್ ಗಳು ಸದ್ದು ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಮತ್ತು ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ನಡುವೆ ಬಿರುಸಿನ ಪೈಪೋಟಿ ನಡೆದಿದೆ.

ಕಳೆದ ಹತ್ತು ದಿನಗಳಿಂದ ಡಾಬಾಗಳಲ್ಲಿ, ತೋಟಗಳಲ್ಲಿ ಪಾರ್ಟಿಗಳನ್ನು ಏರ್ಪಡಿಸಿ ಅಲ್ಲಿ ವಿಶೇಷ ಭೋಜನ ಹಾಗೂ ಪಾನೀಯ ವ್ಯವಸ್ಥೆ ಮಾಡಿದ್ದರು. ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು ಸೇರಿ ಮಾಗಡಿ ತಾಲೂಕಿನಲ್ಲಿ 490 ಜನರು ಮತ ಚಲಾಯಿಸುತ್ತಿದ್ದಾರೆ. ಈಗ ಅಭ್ಯರ್ಥಿಗಳಿಂದ ಬೆಳ್ಳಿ ಬಟ್ಟಲು, ಪಿಂಗಾಣಿ ಪಾತ್ರೆಗಳನ್ನು ಒಳಗೊಂಡ ಗಿಫ್ಟ್ ಬಾಕ್ಸ್ ಹಾಗೂ ಒಂದೊಂದು ಮತಕ್ಕೆ 4 - 5 ಸಾವಿರದವರೆಗೆ ಹಣ ಹಂಚಲಾಗುತ್ತಿದೆ. ಇದರಿಂದ ಪ್ರಜಾಪ್ರಭುತ್ವವನ್ನೇ ಅಣಕಿಸಿ ಚುನಾವಣೆ ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಬೇಲಿಯೇ ಎದ್ದು ಹೊಲ ಮೇಯ್ದಂತೆ

ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದ ಕಾರಣ ಸಮಾಜವನ್ನು ತಿದ್ದುವ ಜವಾಬ್ಧಾರಿ ಸ್ಥಾನದಲ್ಲಿರುವ ಶಿಕ್ಷಕರು ಕೂಡಾ ಇಂತಹ ಆಮಿಷಗಳಿಗೆ ಬಲಿಯಾಗುತ್ತಿರುವುದು ದುರಂತವೆನಿಸಿದೆ. ಇನ್ನು ಆಯ್ಕೆಯಾದವರು, ಸಮಾಜದ ಹಿತ ಕಾದು ನಾಯಕನೆಸಿಸಿಕೊಂಡವರು, ಆಡಳಿತ ನಡೆಸಿ ಜನೋಪಯೋಗಿ ಕೆಲಸಗಳನ್ನು ಮಾಡಬೇಕಿದ್ದವರು, ಆಯ್ಕೆಗಾಗಿ ಮತದಾರರಿಗೆ ಆಮಿಷವೊಡ್ಡಿ ಮತ ಪಡೆದು ಗೆದ್ದಾದ ನಂತರ ಇವರಿಂದ ಇನ್ಯಾವ ರೀತಿ ಸಮಾಜ ಒಳ್ಳೆಯ ಕೆಲಸಗಳನ್ನು ನಿರೀಕ್ಷೆ ಮಾಡಬಹುದು ಎಂಬುದನ್ನು ಚಿಂತಿಸಬೇಕಾಗಿದೆ ಎಂದು ಸಮಾಜದ ಹಿರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪರೀಕ್ಷಾ ಸಮಯದಲ್ಲಿ ಪಾಠಕ್ಕಿಂತ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿರುವ ಶಿಕ್ಷಕರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.