ಗೃಹಲಕ್ಷ್ಮಿ ಪರಿಷ್ಕರಣೆ ಹೆಸರಿನಲ್ಲಿ ಮಹಿಳೆಯರಿಗೆ ಸರ್ಕಾರದಿಂದಲೇ ಅನ್ಯಾಯ: ಸಿ.ಸಿ.ಪಾಟೀಲ ಆರೋಪ

KannadaprabhaNewsNetwork |  
Published : Jun 21, 2026, 02:15 AM IST
ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ ಕೇಂದ್ರ ಸರ್ಕಾರದ ಸಾಧನೆಗಳ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.  | Kannada Prabha

ಸಾರಾಂಶ

ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ಹೆಸರಿನಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗೆ ತೀವ್ರ ಅನ್ಯಾಯ ಮಾಡುತ್ತಿದೆ, ಬಡವರಿಗೆ ತೊಂದರೆ ಕೊಡುತ್ತಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಆರೋಪಿಸಿದರು.

ಗದಗ: ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ಹೆಸರಿನಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗೆ ತೀವ್ರ ಅನ್ಯಾಯ ಮಾಡುತ್ತಿದೆ, ಬಡವರಿಗೆ ತೊಂದರೆ ಕೊಡುತ್ತಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರ್ಕಾರಕ್ಕೆ ದಿಕ್ಕುತೋಚದಂತಾಗಿದೆ ಎನ್ನುವುದಕ್ಕೆ ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಯೇ ಪ್ರಮುಖ ಸಾಕ್ಷಿಯಾಗಿದೆ. ಯೋಜನೆಯಲ್ಲಿ ಅನರ್ಹರಿದ್ದಾರೆ ಎಂದು ಈಗ ಹೇಳುತ್ತಿದ್ದೀರಲ್ಲ, ಮೊದಲು ಇವರಿಗೆ ಯೋಜನೆ ಜಾರಿ ಮಾಡಿದ್ದು ಯಾರು? ನಿಮ್ಮ ಸರ್ಕಾರವಲ್ಲವೇ ಎಂದು ಪ್ರಶ್ನಿಸಿದರು.

ಕಳೆದ 3 ವರ್ಷಗಳಿಂದ ಈ ಯೋಜನೆಯ ಹಣ ಅನರ್ಹರಿಗೆ ಹೋಗಿದೆ ಎನ್ನುವುದಾದರೆ ಇದಕ್ಕೆ ಹೊಣೆ ಯಾರು? ರಾಜ್ಯದ ಬೊಕ್ಕಸವನ್ನು ಹಾಳು ಮಾಡಿರುವವರು ಈಗ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಗೃಹಲಕ್ಷ್ಮಿ ಯೋಜನೆಗೆ ಮೀಸಲಿಟ್ಟಿರುವ ₹5 ಸಾವಿರ ಕೋಟಿ ಕುರಿತು ಸರ್ಕಾರ ಇದುವರೆಗೂ ಸ್ಪಷ್ಟ ಲೆಕ್ಕ ನೀಡಿಲ್ಲ, ವಿಧಾನಸಭೆಯಲ್ಲಿಯೇ ಈ ಪ್ರಶ್ನೆಯನ್ನು ನಮ್ಮ ಶಾಸಕರು ಕೇಳಿದರೂ ಇದುವರೆಗೂ ಸರ್ಕಾರ ಉತ್ತರಿಸುವ ಧೈರ್ಯ ತೋರಿಸಿಲ್ಲ. ಹಾಗಾದರೆ ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ನೂರಾರು ಸಿಬ್ಬಂದಿಯನ್ನು ಕಡಿತಗೊಳಿಸಿರುವುದು ಯಾಕೆ? ಅವರಿಗೆ ಅಲ್ಲಿ ಕೆಲಸವಿಲ್ಲ ಎನ್ನುವುದಾದರೆ ಇಷ್ಟೊಂದು ದಿನಗಳ ಕಾಲ ಆ ಸಿಬ್ಬಂದಿ ಏನು ಕೆಲಸ ಮಾಡುತ್ತಿದ್ದರು. ಇದು ಸಾರ್ವಜನಿಕರ ಜನರ ತೆರಿಗೆ ಹಣ ಲೂಟಿ ಅಲ್ಲದೇ ಮತ್ತೇನು? ಕಳೆದ 3 ವರ್ಷದಲ್ಲಿ ಏನೂ ಮಾಡದ ಸರ್ಕಾರ ಈಗ ಏನು ಮಾಡಲು ಸಾಧ್ಯ ಎಂದು ಲೇವಡಿ ಮಾಡಿದ ಅವರು, ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲಿ ಹೋಗಿದೆ? ಈ ಬಗ್ಗೆ ಸರ್ಕಾರ ಜನರಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆಯ ಈ ಸಂದರ್ಭದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವುದಕ್ಕೆ ಅತೀವ ಬೇಸರ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಹಲವು ಸಚಿವರು ತಮ್ಮ ಖಾತೆಗಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಕೆಲವರು ಖಾತೆಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಒಬ್ಬ ಸಚಿವರು ನೀರಾವರಿ ಖಾತೆ ಬೇಡ ಎನ್ನುತ್ತಾರೆ, ಮತ್ತೊಬ್ಬರು ಬೇರೆ ಖಾತೆಗಳನ್ನು ನಿರಾಕರಿಸುತ್ತಾರೆ. ಈಗಿನ ಪರಿಸ್ಥಿತಿ ಹೀಗಿದ್ದರೆ, ಮುಂದಿನ ದಿನಗಳಲ್ಲಿ ಸರ್ಕಾರದ ಸ್ಥಿತಿ ಏನಾಗಲಿದೆ ಎಂಬುದೇ ಪ್ರಶ್ನೆಯಾಗಿದೆ ಎಂದರು.

ಕೇವಲ 12 ಜನ ಸಚಿವರಾಗಿಯೇ ಇಷ್ಟೊಂದು ಸಮಸ್ಯೆ ಸೃಷ್ಟಿಯಾಗಿದೆ. ಇನ್ನುಳಿದ ಖಾತೆಗಳ ಹಂಚಿಕೆಯಾದ ನಂತರ ಖಾತೆಗಳಿಗಾಗಿ ಇನ್ನೆಷ್ಟು ಖ್ಯಾತೆಗಳು ಸೃಷ್ಟಿಯಾಗುತ್ತವೆ ಎನ್ನುದನ್ನು ಕಾಯ್ದು ನೋಡಿ ಎಂದರು. ಅಡ್ಡ ಮತದಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅಡ್ಡ ಮತದಾನದ ಪ್ರಕರಣ ಕುರಿತು ಸತ್ಯಶೋಧನಾ ಸಮಿತಿ ರಚನೆಯಾಗಿದ್ದು, ತನಿಖೆ ಪೂರ್ಣಗೊಂಡ ನಂತರ ವಾಸ್ತವ ತಿಳಿಯಲಿದೆ. ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ನಮ್ಮ ಪಕ್ಷದ ವರಿಷ್ಠರು ಕಠಿಣ ನಿರ್ಧಾರವನ್ನೇ ತೆಗೆದುಕೊಳ್ಳಲಿದ್ದಾರೆ ಎಂದರು.

ಆರ್‌ಎಸ್‌ಎಸ್ ಕುರಿತು ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರ ಪತ್ರದ ಕುರಿತು ಮಾತನಾಡಿದ ಅವರು ಆರ್ ಎಸ್ ಎಸ್ ಇವರಂಥ ನೂರಾರು ಗೃಹ ಮಂತ್ರಿಗಳನ್ನು ನೋಡಿದೆ. ಇವರ ಪಕ್ಷದ ಪರಮೋಚ್ಚ ನಾಯಕ ನೆಹರು ಅವರೇ ಹತ್ತಾರು ಕಾರ್ಯಕ್ರಮಗಳಿಗೆ ಅವಕಾಶ ನೀಡಿದ್ದನ್ನು ಪ್ರಿಯಾಂಕ ಖರ್ಗೆ ತಿಳಿದುಕೊಂಡಿಲ್ಲ. ಗೃಹ ಮಂತ್ರಿಯಾಗಿ ರಾಜ್ಯದಲ್ಲಿ ಅಕ್ರಮ ಚಟುವಟಿಕೆಗಳಾದ ಓಸಿ, ಮಟ್ಕಾ ಹಾಗೂ ಡ್ರಗ್ಸ್ ಮಾರಾಟ ಹೆಚ್ಚುತ್ತಿವೆ. ಅದರ ಬಗ್ಗೆ ಕಾಳಜಿ ವಹಿಸಿ, ಬೆಂಗಳೂರಿನಲ್ಲಿ ಮದ್ಯರಾತ್ರಿ ವರೆಗೂ ಬಾರ್‌ಗಳು ಪಬ್‌ಗಳು ಪ್ರಾರಂಭವಿರುತ್ತವೆ. ಅದರ ಬಗ್ಗೆಯೂ ಕಾಳಜಿ ವಹಿಸಲಿ ಎಂದರು.

ಮಳೆ ಕೊರತೆ ಮತ್ತು ರೈತರ ಸಮಸ್ಯೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷಿ ಸಚಿವರೇ ಇಲ್ಲದಿರುವ ಪರಿಸ್ಥಿತಿಯಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯ ಎಸ್.ವಿ. ಸಂಕನೂರ, ಡಾ. ಚಂದ್ರು ಲಮಾಣಿ ಮುಂತಾದವರು ಹಾಜರಿದ್ದರು. ಪ್ರಧಾನಿ ಮೋದಿ ಅವರ ಸರ್ಕಾರಗಳ ಸಾಧನೆಗಳ ಕುರಿತು ಸುಧೀರ್ಘವಾಗಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಅವಶ್ಯ
ಅರ್ಧಕ್ಕೆ ನಿಂತ ಶಾಲಾ ಕಟ್ಟಡ ಪೂರ್ಣಗೊಳಿಸಿ