ಕನ್ನಡಪ್ರಭ ವಾರ್ತೆ ಹಾಸನ
ನಗರದ ವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ, ಗಾಯಕ ಹಾಗೂ ಶಿಕ್ಷಕ ದಿವಾಕರ್ ಅವರ ‘ಕಾವ್ಯಶ್ರಾವ್ಯ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಹಿರಿಯ ಲೇಖಕ ಗೊರೂರು ಶಿವೇಶ್, ನಿಸರ್ಗದಲ್ಲಿ ಆಧ್ಯಾತ್ಮದ ಹುಡುಕಾಟ ಹಾಗೂ ಪ್ರಕೃತಿಯ ಆರಾಧನೆಯೇ ಕನ್ನಡ ನವೋದಯ ಸಾಹಿತ್ಯದ ಜೀವಾಳ. ನವೋದಯ ಕವಿಗಳು ಪ್ರಕೃತಿಯಲ್ಲಿ ಅಡಗಿರುವ ನಿಗೂಢತೆ, ಸೌಂದರ್ಯ ಮತ್ತು ರಹಸ್ಯಗಳನ್ನು ವರ್ಣಿಸುತ್ತಲೇ ತಾವು ಕಂಡುಕೊಂಡ ಸತ್ಯವನ್ನು ಕಾವ್ಯಗಳ ಮೂಲಕ ಸಮಾಜಕ್ಕೆ ಧಾರೆ ಎರೆದಿದ್ದಾರೆ. ಶ್ರಾವಣ ಮಾಸದಲ್ಲಿ ಇಂತಹ ಸುಮಧುರ ಸಾಹಿತ್ಯ ಮತ್ತು ಸಂಗೀತದ ಶ್ರವಣವು ಮನುಷ್ಯನ ಮನಸ್ಸನ್ನು ಸಂಸ್ಕಾರಗೊಳಿಸಿ, ಸೌಮ್ಯ ಹಾಗೂ ಮೃದುಗೊಳಿಸುತ್ತದೆ " ಎಂದು ತಿಳಿಸಿದರು. ‘ಕಾವ್ಯಶ್ರಾವ್ಯ’ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಗಾಯಕ ಹಾಗೂ ಅಧ್ಯಾಪಕ ದಿವಾಕರ್ ಅವರು ರಾಷ್ಟ್ರಕವಿ ಕುವೆಂಪು, ದ.ರಾ. ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ, ಎಚ್.ಎಸ್. ವೆಂಕಟೇಶಮೂರ್ತಿ ಹಾಗೂ ಸುಬ್ರಾಯ ಚೊಕ್ಕಾಡಿ ಅವರ ಆಯ್ದ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಇದೇ ಸಂದರ್ಭದಲ್ಲಿ ಯೋಗ ಶಾಲೆಯ ವತಿಯಿಂದ ಗಾಯಕ ದಿವಾಕರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಗ ಶಾಲೆಯ ಹಿರಿಯ ಗುರುಗಳಾದ ಧರ್ಮಪ್ಪ, ಪುಟ್ಟಪ್ಪ, ಹಿರಿಯ ಶಿಕ್ಷಣಾರ್ಥಿಗಳಾದ ಶಿಕ್ಷಣ ಇಲಾಖೆಯ ಚೆಲುವೇಗೌಡ, ಆನಂದ್, ಅಣ್ಣಪ್ಪ ಶೆಟ್ಟಿ, ವಿಶ್ವನಾಥ್, ಉದ್ಯಮಿಗಳಾದ ಚಂದ್ರು, ರಾಜೇಶ್, ಪರಮೇಶ್, ಹರ್ಷ ಹಾಗೂ ಪ್ರಮುಖರಾದ ಸುಮನಾ, ಮೋಹನ ಕುಮಾರಿ, ಪದ್ಮಾ, ರುಕ್ಮಿಣಿ, ಜ್ಯೋತಿ, ಜಯಂತಿ, ಪಂಕಜ, ಪದ್ಮ ಸೇರಿದಂತೆ ಹಲವು ಶಿಕ್ಷಣಾರ್ಥಿಗಳು ಹಾಗೂ ಆಧ್ಯಾತ್ಮಾಸಕ್ತರು ಇದ್ದರು.