ಸಿದ್ದಾಪುರ: ಪಟ್ಟಣದ ಪಪಂ ಸಭಾಭವನದಲ್ಲಿ ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಕೆ.ಜಿ. ನಾಯ್ಕ ಹಣಜೀಬೈಲ್ ಮಾತನಾಡಿ, ಶಾಸಕ ಭೀಮಣ್ಣ ನಾಯ್ಕ ಅವರ ಸೂಚನೆಯಂತೆ ಅಧಿಕಾರಿಗಳು ಪ್ರತಿದಿನ ನೀರು ಬಿಡುವುದಕ್ಕೆ ಕ್ರಮತೆಗೆದುಕೊಂಡಿದ್ದಾರೆ. ಅರೆಂದೂರು ಚಾನಲ್ನಿಂದ ಪಟ್ಟಣಕ್ಕೆ ನೀರು ಸರಬರಾಜು ಆಗುವ ಪೈಪ್ ಕೇವಲ ೧೦ ಇಂಚಿನದಾಗಿದೆ. ಇಲ್ಲಿರುವ ನೀರಿನ ಟ್ಯಾಂಕರ್ಗಳು ಹೆಚ್ಚಿನ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿಲ್ಲ. ಇದರಿಂದ ಈಗಾಗಲೇ ನೀರು ಸರಬರಾಜು ಅಸ್ತವ್ಯಸ್ತವಾಗಿದೆ. ಈ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಲಾಗಿದೆ. ಅವರೂ ಒಪ್ಪಿದ್ದಾರೆ. ಆದ್ದರಿಂದ ಹಿಂದಿನಂತೆ ಎರಡು ದಿನಗಳಿಗೊಮ್ಮೆ ನೀರು ಬಿಡಲು ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.
ಪಪಂಗೆ ಸಂಬಂಧಿಸಿದಂತೆ ಹಲವು ಕ್ರಿಯಾಯೋಜನೆ ಮಾಡಲಾಗುತ್ತಿದ್ದು, ಅದನ್ನು ಸಭೆಯಲ್ಲಿ ಮಂಡಿಸಲಾಯಿತು.ಮಾರ್ಚ ತಿಂಗಳು ಮುಗಿದಿದೆ. ಈಗ ಕ್ರಿಯಾಯೋಜನೆ ಮಾಡಲು ಅನುಮತಿ ಕೇಳುತ್ತಿದ್ದೀರಿ. ಅತ್ಯಗತ್ಯವಾಗಿರುವುದನ್ನು ಜನವರಿ, ಫೆಬ್ರವರಿ ತಿಂಗಳ ಸಭೆಯಲ್ಲಿ ಮಂಡಿಸಿ ಮಂಜೂರಾತಿ ಪಡೆಯಬೇಕಿತ್ತು. ಈ ಕುರಿತು ಹಿಂದೆ ಅನೇಕ ಬಾರಿ ಅಧಿಕಾರಿಗಳಿಗೆ ಸೂಚಿಸಿದರೂ ನಿರ್ಲಕ್ಷಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಕೆ.ಜಿ. ನಾಯ್ಕ ಅಸಹನೆ ವ್ಯಕ್ತಪಡಿಸಿದರು.