ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆ ಅರಕೇರಾ ತಾಲೂಕಿನ ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆ ಪ್ರಿನ್ಸಿಪಾಲ್ ಸುರೇಶ ವರ್ಮಾ, ಪತ್ರಕರ್ತರೊಂದಿಗೆ ಅನುಚಿತ ವರ್ತನೆ, ಅವಾಚ್ಯ ಶಬ್ದಗಳೊಂದಿಗೆ ನಿಂದಿಸಿದ್ದು, ಕೂಡಲೇ ಅಮಾನತುಗೊಳಿಸಬೇಕು ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಹಾಗೂ ವಿವಿಧ ತಾಲೂಕು ಸಮಿತಿಗಳು ಪ್ರತ್ಯೇಕವಾಗಿ ಒತ್ತಾಯಿಸಿವೆ.ಸ್ಥಳೀಯ ಜಿಲ್ಲಾಡಳಿತ ಭವನಕ್ಕೆ ತೆರಳಿದ ಜಿಲ್ಲಾ ಸಮಿತಿ ಸದಸ್ಯರು, ಪದಾಧಿಕಾರಿಗಳು ಡಿಸಿಗೆ ಅದೇ ರೀತಿ ದೇವದುರ್ಗ, ಮಾನ್ವಿ, ಸಿರವಾರ ಮತ್ತು ಮಸ್ಕಿ ತಾಲೂಕುಗಳ ಘಟಕಗಳು ಆಯಾ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯ ಸುಮಾರು 35 ವಿದ್ಯಾರ್ಥಿಗಳು ಜ್ವರಭಾದೆಯಿಂದ ನರಳುತ್ತಿದ್ದು, ಅರಕೇರಾ ಸಮುದಾಯ ಅರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದರು.
ಈ ಸಮಯದಲ್ಲಿ ಏಕಾಏಕಿ 35 ಮಕ್ಕಳು ಚಿಕಿತ್ಸೆ ಪಡೆಯಲು ಬಂದಿರುವ ಹಿನ್ನಲೆಯಲ್ಲಿ ಫೊಟೋ ತೆಗೆದು ಮಾಹಿತಿ ತಿಳಿದುಕೊಳ್ಳಲು ಪತ್ರಕರ್ತರು ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಪತ್ರಕರ್ತರ ಮೇಲೆ ಹರಿಹಾಯ್ದು, ಅವಾಚ್ಯ ಶಬ್ದಗಳಿಂದ ಬಯ್ದು, ಸಾರ್ವಜನಿಕವಾಗಿ ಅಗೌರವ ತೋರಿಸಿದ್ದಾರೆ. ಇಲ್ಲಿದೇನು ಬರೆಯುತ್ತೀರಿ, ರಸ್ತೆಗಳು ಹಾಳಾಗಿವೆ. ಇಲ್ಲಿ ನೀವು ಹೀಗೆ ಇದ್ದೀರಿ, ನಿಮ್ಮಜನಪ್ರತಿನಿಧಿಗಳು ಹಾಗೇ ಇದ್ದಾರೆ ಎಂದು ಉಡಾಫೆ ಮಾತುಗಳನ್ನಾಡಿದ್ದಾರೆ.ಸಮಾಜ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಆಗುತ್ತಿರುವ ಲೋಪಗಳನ್ನು ಗುರುತಿಸಿ, ವರದಿ ಮಾಡಿ ಪರಿಹಾರ ಕೊಡಿಸುವ ಉದ್ದೇಶ ಪತ್ರಿಕೆಗಳಾಗಿರುತ್ತದೆ. ಆದರೆ ಪ್ರಿನ್ಸಿಪಾಲ್ ಸುರೇಶ ವರ್ಮಾ, ಬಹಿರಂಗವಾಗಿ ನಿಂದನೆ ಮಾಡಿದ್ದು, ಕೂಡಲೇ ಪತ್ರಕರ್ತರಲ್ಲಿ ಕ್ಷಮೆಯಾಚಿಸಬೇಕು. ಜಿಲ್ಲಾಧಿಕಾರಿಗಳು ಕೂಡಲೇ ಪ್ರಿನ್ಸಿಪಾಲ್ರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ವಿವಿಧ ತಾಲೂಕು ಸಮಿತಿಗಳ ಸದಸ್ಯರು, ಪದಾಧಿಕಾರಿಗಳು, ಹಿರಿಯ-ಕಿರಿಯ ಪತ್ರಕರ್ತರು, ಛಾಯಾಗ್ರಾಹಕರು ಇದ್ದರು.