ಉಪಲೋಕಾಯುಕ್ತರ ಬೇಟಿ: ಇಲಾಖೆಗಳಲ್ಲಿ ಹೈ ಅಲರ್ಟ್

KannadaprabhaNewsNetwork |  
Published : Aug 26, 2025, 01:02 AM IST
25ಕೆಪಿಆರ್‌ಸಿಆರ್‌ 01:  | Kannada Prabha

ಸಾರಾಂಶ

ಕರ್ನಾಟಕ ಉಪ ಲೋಕಾಯುಕ್ತರಾದ ನ್ಯಾ.ಬಿ.ವೀರಪ್ಪ ಅವರು ಇದೇ ಆ.28 ರಿಂದ 30 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಇಲಾಖೆಗಳು ಹಾಗೂ ಸರ್ಕಾರಿ ಸೌಮ್ಯದ ಕಚೇರಿಗಳಲ್ಲಿ ಅಘೋಷಿತ ಹೈ ಅಲರ್ಟ್‌ ಜಾರಿಗೊಂಡಿದೆ

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಕರ್ನಾಟಕ ಉಪ ಲೋಕಾಯುಕ್ತರಾದ ನ್ಯಾ.ಬಿ.ವೀರಪ್ಪ ಅವರು ಇದೇ ಆ.28 ರಿಂದ 30 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಇಲಾಖೆಗಳು ಹಾಗೂ ಸರ್ಕಾರಿ ಸೌಮ್ಯದ ಕಚೇರಿಗಳಲ್ಲಿ ಅಘೋಷಿತ ಹೈ ಅಲರ್ಟ್‌ ಜಾರಿಗೊಂಡಿದೆ. ಇದರ ಪರಿಣಾಮವಾಗಿ ಆಯಾ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗವು ವಾರದ ರಜೆಯನ್ನು ಲೆಕ್ಕಿಸದೇ ತ್ವರಿತಗತಿಯಲ್ಲಿ ಶುದ್ಧೀಕರಣ ಕಾರ್ಯವನ್ನು ಕೈಗೊಂಡಿದ್ದಾರೆ. ಸ್ವಚ್ಛತೆ, ದಾಖಲೆ, ಬಾಕಿ ಕೆಲಸ : ಮೂರು ದಿನಗಳ ಕಾಲ ಜಿಲ್ಲೆಯಲ್ಲಿಯೇ ಬೀಡುಬಿಡುತ್ತಿರುವ ಉಪ ಲೋಕಾಯುಕ್ತರ ಪ್ರವಾಸದಲ್ಲಿ ವಿವಿಧ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ, ಸಾರ್ವಜನಿಕರಿಂದ ದೂರು, ಅಹವಾಲು ಸ್ವೀಕಾರ ಸೇರಿ ಮೊದಲಾದ ಕಾರ್ಯಕ್ರಮಗಳು ನಿಗದಿಯಾಗಿರುವುದರಿಂದ ಜಿಲ್ಲಾಡಳಿತ, ಕಂದಾಯ, ಜಿಪಂ, ನ್ಯಾಯಾಲಯ ಸೇರಿದಂತೆ ಬಹುತೇಕ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಸ್ವಚ್ಛತೆಯ ಜೊತೆಗೆ ದಾಖಲೆಗಳ ಜೋಡಣೆ, ಬಾಕಿ ಉಳಿದಿರುವ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಅಷ್ಟೇ ಅಲ್ಲದೇ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಶನಿವಾರ ಹಾಗೂ ಭಾನುವಾರದ ರಜೆಯನ್ನು ಸಹ ನೀಡದೇ ಬಾಕಿ ಉಳಿದ ಕೆಲಸ-ಕಾರ್ಯಗಳನ್ನು ನಡೆಸುತ್ತಿದ್ದು, ಬರಲಿರುವ ಗೌರಿ ಗಣೇಶ ಹಬ್ಬದ ದಿನವೂ ಪೂರ್ವ ಸಿದ್ಧತೆ ನಡೆಸಲು ಹಲವು ಇಲಾಖೆಗಳು ಮುಂದಾಗಿವೆ.

16 ಸಮಿತಿಗಳ ರಚನೆ: ಉಪಲೋಕಾಯುಕ್ತರ ಪ್ರವಾಸವು ಅಚ್ಚುಕಟ್ಟಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಸುವುದಕ್ಕಾಗಿ ಜಿಲ್ಲಾಡಳಿತದಿಂದ ವಿವಿಧ ರೀತಿಯ 16 ಸಮಿತಿಗಳನ್ನು ರಚನೆ ಮಾಡಲಾಗಿದೆ.

ಉಪಲೋಕಾಯುಕ್ತರು ಸ್ಥಳೀಯ ಕೃಷಿ ವಿಶ್ವ ವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ವಿಚಾರಣೆ ನಡೆಸುವುದರ ಜೊತೆಗೆ ಜಿಲ್ಲೆಗೆ ಸಂಬಂಧಪಟ್ಟ ಈ ಮೊದಲು ಸ್ವೀಕೃತವಾದ ಅರ್ಜಿಗಳನ್ನು ವಿಚಾರಣೆ ಕೈಗೊಂಡು, ಆಯಾ ಅಧಿಕಾರಿಗಳನ್ನು ಕರೆಯಿಸಿ ವಿಲೇವಾರಿ ಕುರಿತು ಕ್ರಮ ಕೈಗೊಳ್ಳುತ್ತಿರುವುದರಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಈ ಸಮಿತಿಗಳಿಗೆ ವಹಿಸಲಾಗಿದೆ.

ಸಹಾಯಕ ಆಯುಕ್ತರ ಮೇಲುಸ್ತುವಾರಿಯಲ್ಲಿ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯೊಳಗೊಂಡು ವಿವಿಧ ಸಮಿತಿಗಳನ್ನು ರಚಿಸಿ ಜಿಲ್ಲಾಧಿಕಾರಿ ಅಧೀಕೃತ ಜ್ಞಾಪನಾ ಪತ್ರ ಹೊರಡಿಸಿದ್ದು, ಅವುಗಳಲ್ಲಿ ಸ್ವಾಗತ ಸಮಿತಿ, ವೇದಿಕೆಗೆ ಪುಷ್ಪಾಲಂಕಾರದ ಹಾಗೂ ಫಾಟ್ ವ್ಯವಸ್ಥೆ ಸಮಿತಿ, ವಾಹನ ವ್ಯವಸ್ಥೆ ಸಮಿತಿ, ವಸತಿ ಸಮಿತಿ., ಆಹಾರ, ಕುಡಿಯುವ ನೀರು ಮತ್ತು ವಿಶ್ರಾಂತಿ ವ್ಯವಸ್ಥೆ ಸಮಿತಿ, ಪ್ರಚಾರ ಸಮಿತಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಭೆಗೆ ಆಹ್ವಾನಿಸುವುದು, ಸ್ಟೇಷನರಿ, ಗಣಕಯಂತ್ರ, ಮುದ್ರಣ ಸೌಲಭ್ಯ ವ್ಯವಸ್ಥೆ, ಸಾರ್ವಜನಿಕ ಅಹವಾಲು ಸ್ವೀಕೃತಿ, ಕಾರ್ಯಕ್ರಮಗಳ ನಿರ್ವಹಣೆಯ ಕುರಿತು ಪರಿಶೀಲನಾ, ವಿಡಿಯೋ ಚಿತ್ರೀಕರಣ, ಕಾನೂನು ಸೇವಾ ಪ್ರಾಧಿಕಾರದ, ಪತ್ರಿಕಾ ಮತ್ತು ಮಾಧ್ಯಮ ನಿರ್ವಹಣಾ ಸಮಿತಿ, ವೈದ್ಯಕೀಯ ಮತ್ತು ತುರ್ತು ಸೇವಾ ಸಮಿತಿ ಹಾಗೂ ಕಾನೂನು ವ್ಯವಸ್ಥೆ ಸೇರಿದಂತೆ ಒಟ್ಟು 16 ಸಮಿತಿಗಳನ್ನು ರಚಿಸಿ ನಾನಾ ಕಾರ್ಯ ಹಂಚಿಕೆ ಮಾಡಲಾಗಿದೆ.

ಉಪಲೋಕಾಯುಕ್ತರ ಪ್ರವಾಸದ ವಿವರ

ರಾಜ್ಯ ಉಪ ಲೋಕಾಯುಕ್ತರಾದ ನ್ಯಾ.ಬಿ.ವೀರಪ್ಪ ಇದೇ 28 ರಿಂದ 30 ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ತಂಗಲಿರುವ ಉಪಲೋಕಾಯುಕ್ತರು ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ನಿತ್ಯ ವಿವಿಧ ಪ್ರದೇಶಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲನೆ ಹಾಗೂ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ಸಂಬಂಧಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ಆರ್‌ಡಿಪಿಆರ್, ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಉಪನೋಂದಣಿ ಕಚೇರಿ, ಆರ್‌ಟಿಒ, ಬಿಇಒ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ರಾಯಚೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಜಿಲ್ಲೆಯ ನ್ಯಾಯಾಂಗ ಅಧಿಕಾರಿಗಳು, ಲೋಕಾಯುಕ್ತ ಪೊಲೀಸರೊಂದಿಗೆ ಸಭೆ, ಸಾರ್ವಜನಿಕರು ವ್ಯಕ್ತಪಡಿಸಿದ ಬಾಕಿ ಇರುವ ದೂರುಗಳು ಮತ್ತು ಕುಂದುಕೊರತೆಗಳ ಬಗ್ಗೆ ದೂರುದಾರರು ಹಾಗೂ ಪ್ರತಿವಾದಿಗಳ ಸಮ್ಮುಖದಲ್ಲಿ ವಿಚಾರಣೆ ಮತ್ತು ವಿಲೇವಾರಿ ನಡೆಸಲಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತದ ರಿಜಿಸ್ಟ್ರಾರ್ ಎಮ್.ಚಂದ್ರಶೇಖರ ರೆಡ್ಡಿ ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!