ಅ. 8ರಂದು ಗೋವರ್ಧನ ಟ್ರಸ್ಟ್‌ನ ಉದ್ಘಾಟನಾ ಸಮಾರಂಭ

KannadaprabhaNewsNetwork |  
Published : Oct 06, 2025, 01:00 AM IST
ಪೊಟೋ: 4ಎಸ್‌ಎಂಜಿಕೆಪಿ07ಶಿವಮೊಗ್ಗ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಗೋವರ್ಧನ ಟ್ರಸ್ಟಿನ ಅಧ್ಯಕ್ಷ ಕೆ.ಇ. ಕಾಂತೇಶ್ ಮಾತನಾಡಿದರು.  | Kannada Prabha

ಸಾರಾಂಶ

ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಅ.8ರಂದು ಮಧ್ಯಾಹ್ನ 3 ಗಂಟೆಗೆ ಗೋವರ್ಧನ ಟ್ರಸ್ಟಿನ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಟ್ರಸ್ಟಿನ ಅಧ್ಯಕ್ಷ ಕೆ.ಇ. ಕಾಂತೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಅ.8ರಂದು ಮಧ್ಯಾಹ್ನ 3 ಗಂಟೆಗೆ ಗೋವರ್ಧನ ಟ್ರಸ್ಟಿನ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಟ್ರಸ್ಟಿನ ಅಧ್ಯಕ್ಷ ಕೆ.ಇ. ಕಾಂತೇಶ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ನಿಟ್ಟಿನಲ್ಲಿ ಗೋವರ್ಧನಾ ಟ್ರಸ್ಟನ್ನು ರಚಿಸಲಾಗಿದೆ. ಗೋಮಾತೆಯ ರಕ್ಷಣೆಗಾಗಿಯೇ ಇದು ರಚಿತವಾಗಿದ್ದು, ಇದರ ಪೂರ್ವಭಾವಿ ತಯಾರಿಗಳು ಈಗಾಗಲೇ ನಡೆದಿವೆ. ಬಿಡಾಡಿ ದನಗಳು, ಬರಡು ಹಸುಗಳು, ಗೋಕಳ್ಳರಿಂದ ರಕ್ಷಿಸಲ್ಪಟ್ಟ ಗೋವುಗಳು ಅಪಘಾತದಲ್ಲಿ ಗಾಯಗೊಂಡ ಗೋವುಗಳು ಹೀಗೆ ವಿವಿಧ ರೀತಿಯಲ್ಲಿ ಗೋವುಗಳನ್ನು ಸಂರಕ್ಷಿಸುವ ನಿಟ್ಟಿನಿಂದ ಗೋವರ್ಧನ ಟ್ರಸ್ಟನ್ನು ರಚಿಸಲಾಗಿದೆ ಎಂದರು.

ಈಗಾಗಲೇ ಗೋಸಂರಕ್ಷಣೆಯ ಇಚ್ಛೆಯುಳ್ಳ ಸಾರ್ವಜನಿಕರು ತಿಂಗಳಿಗೆ 100 ರು.ಗಳನ್ನು ಗೋವರ್ಧನಾ ಟ್ರಸ್ಟಿಗೆ ದೇಣಿಗೆ ನೀಡಬಹುದಾಗಿದೆ. ಇದಕ್ಕಾಗಿ ಕೂಪನ್‌ಗಳನ್ನು ಸಹ ವಿತರಿಸಲಾಗಿದೆ. ಸುಮಾರು 3500ಕ್ಕೂ ಹೆಚ್ಚು ಗೋ ಪ್ರೇಮಿಗಳು 100 ರು. ಹಣ ನೀಡಿ, ಸದಸ್ಯತ್ವ ನೋಂದಾಯಿಸಿದ್ದಾರೆ. ಪ್ರತಿ ತಿಂಗಳು ಈ ಹಣ ಬ್ಯಾಂಕ್ ಖಾತೆಯಿಂದ ಟ್ರಸ್ಟಿಗೆ ವರ್ಗಾವಣೆಯಾಗುವಂತೆ ಇಸಿಎಸ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಹಲವರು ದೇಣಿಗೆ ಕೂಡ ನೀಡಿದ್ದಾರೆ. ಈ ಎಲ್ಲಾ ಆರ್ಥಿಕ ಬಲದಿಂದ ಗೋವುಗಳನ್ನು ರಕ್ಷಿಸಲು ನಾವು ಮುಂದಾಗಿದ್ದೇವೆ ಎಂದರು.

ಟ್ರಸ್ಟಿನ ಉದ್ಘಾಟನಾ ಸಮಾರಂಭ ಅ.8 ರಂದು ನಗರದ ಅಲ್ಲಮಪ್ರಭು ಮೈದಾನನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭಕ್ಕೆ ಶೃಂಗೇರಿ ಶಾರದಾಪೀಠದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಆಗಮಿಸಲಿದ್ದು, ಅಂದು ಸಂಜೆ ಮೂರು ಗಂಟೆಗೆ ಅವರ ಪುರಪ್ರವೇಶ ಇರುತ್ತದೆ. ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಶಂಕರಮಠದಿಂದ ದೈವಜ್ಞ ಕಲ್ಯಾಣ ಮಂದಿರದವರೆಗೆ ವೇದಘೋಷ, ಮಂಗಳವಾದ್ಯ, ಚಂಡೆಯೊಂದಿಗೆ ವಾಹನ ಜಾಥಾ ಇರುತ್ತದೆ. ಮತ್ತು ಸಂಜೆ 4 ಗಂಟೆಗೆ ದೈವಜ್ಞ ಕಲ್ಯಾಣ ಮಂದಿರದಿಂದ ಫ್ರೀಡಂಪಾರ್ಕ್‌ವರೆಗೆ ಶೋಭಾ ಯಾತ್ರೆ ಇರುತ್ತದೆ. ಸಂಜೆ 5 ಗಂಟೆಗೆ ಫ್ರೀಡಂಪಾರ್ಕ್‌ನಲ್ಲಿ ಶ್ರೀಗಳು ಗೋವರ್ಧನ ಟ್ರಸ್ಟನ್ನು ಉದ್ಘಾಟಿಸಿ ಅನುಗ್ರಹ ಭಾಷಣ ಮಾಡಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಟ್ರಸ್ಟಿನ ಮಹಾಪೋಷಕರಾದ ಕೆ.ಎಸ್. ಈಶ್ವರಪ್ಪ, ಎಚ್.ಎಸ್. ಶಿವಶಂಕರ್, ಸಿ.ವಿ. ರುದ್ರಾರಾಧ್ಯ, ಎಚ್.ಎಸ್. ನಾಗರಾಜ್, ಕೆ.ಸಿ. ನಟರಾಜ್ ಭಾಗವತ್, ಬಿ.ಎ. ರಂಗನಾಥ್, ಪದಾಧಿಕಾರಿಗಳಾದ ರಾಘವೇಂದ್ರ ಸ್ವಾಮಿ, ಉಮೇಶ್ ಆರಾಧ್ಯ, ಎಂ.ನಾಗೇಶ್ , ರಮೇಶ್‌ಬಾಬು, ಎಸ್.ಕೆ. ಶೇಷಾಚಲ, ಟ್ರಸ್ಟಿಗಳಾದ ಮಹಾಲಿಂಗಶಾಸ್ತ್ರೀ, ಸಂದೇಶ್ ಉಪಾಧ್ಯ, ಎಚ್. ಶಿವಾಜಿ ಇತರರಿದ್ದರು.

ಗೋವುಗಳ ಮೇವಿಗೆ ಆರು ಎಕರೆ ಜಮೀನು

ಈಗಾಗಲೇ ನಗರದಲ್ಲಿ ಸುರಭಿ, ಮಹಾವೀರ್ ಮತ್ತು ಜ್ಞಾನೇಶ್ವರಿ ಎಂಬ ಮೂರು ಗೋಶಾಲೆಗಳಿವೆ. ಇವುಗಳ ಪುನರ್ ಜೀವನಕ್ಕೂ ಗೋವರ್ಧನ ಟ್ರಸ್ಟ್ ನೆರವು ನೀಡುತ್ತದೆ. ಅಲ್ಲದೆ ಈ ಗೋಶಾಲೆಗಳಿಗೆ ಬೇಕಾದ ಮೇವುಗಳನ್ನು ಬೆಳೆಯಲು ಗೊಂದಿಚಟ್ನಹಳ್ಳಿ ಸಮೀಪದಲ್ಲಿ ಆರು ಎಕರೆ ಜಮೀನು ನೋಡಲಾಗಿದ್ದು, ಅ.೬ರಂದು ಈ ಜಮೀನಿನಲ್ಲಿ ಶ್ರೀಕ್ಷೇತ್ರ ಹೊಂಬುಜದ ದಿಗಂಬರ ಜೈನಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಗಳವರ ಅಮೃತಹಸ್ತದಿಂದ ಬೆಳಗ್ಗೆ 9.30ಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಅಲ್ಲದೆ ಗೋವುಗಳನ್ನು ಆಸ್ಪತ್ರೆಗೆ ಸೇರಿಸಲು ಅನುಕೂಲವಾಗುವಂತೆ ಸ್ವಯಂಚಾಲಿತ ಹೈಡ್ರಾಲಿಕ್ ವ್ಯವಸ್ಥೆಯ ಆಂಬುಲೆನ್ಸ್ ವಾಹನವನ್ನು ಕೂಡ ಈಗಾಗಲೇ 18 ಲಕ್ಷ ರು. ವೆಚ್ಚದಲ್ಲಿ ಖರೀದಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ