ಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲಿನ ದುರ್ಗಾ ಸಂಜೀವನಿ ಆಸ್ಪತ್ರೆಯು ಗ್ರಾಮೀಣ ಪ್ರದೇಶದಲ್ಲಿ ಎಲ್ಲ ವ್ಯವಸ್ಥೆಯನ್ನು ಹೊಂದಿದ ಏಕೈಕ ಆಸ್ಪತ್ರೆಯಾಗಿದ್ದು ಕಟೀಲು ಸುರೇಶ್ ರಾಯರ ಕನಸಿನಂತೆ ಈ ಅಸ್ಪತ್ರೆ ನಿರ್ಮಾಣವಾಗಿದೆ ಎಂದು ಮಣಿಪಾಲ ಶಿಕ್ಷಣ ಸಂಸ್ಥೆಯ ಡಾ.ಎಚ್.ಎಸ್.ಬಲ್ಲಾಳ್ ಹೇಳಿದ್ದಾರೆ.ಕಟೀಲು ದುರ್ಗಾ ಸಂಜೀವವನಿ ಮಣಿಪಾಲ್ ಅಸ್ಪತ್ರೆಯಲ್ಲಿ ಎಂ.ಆರ್.ಪಿ.ಎಲ್. ಮಣಿಪಾಲ್ ನೇತ್ರ ಸಂಜೀವನಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೋಗಿಗಳಿಗೆ ಕೈಗೆಟಕುವ ದರದಲ್ಲಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಗ್ರಾಮೀಣ ಪ್ರದೇಶದ ಬಡ ಜನರಿಗೆ ಈ ಆಸ್ಪತ್ರೆ ಅತ್ಯಂತ ಅನುಕೂಲವಾಗಿದೆ, ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಯನ್ನು ಮನೆ ಮನೆಗೆ ಮುಟ್ಟಿಸುತ್ತೇವೆ, ಎಂಆರ್ಪಿಎಲ್ ಸಹಕಾರದಿಂದ ಇದೀಗ ರೋಗಿಗಳಿಗೆ ಉನ್ನತ ಗುಣ ಮಟ್ಟದ ಕಣ್ಣಿನ ಆರೋಗ್ಯ ಸೇವೆ ನೀಡುವಂತಾಗುತ್ತಿದೆ ಎಂದರು.ದುರ್ಗಾ ಸಂಜೀವನಿ ಮಣಿಪಾಲ್ ಅಸ್ಪತ್ರೆಯ ಸುರೇಶ್ ರಾವ್ ಮಾತನಾಡಿ ಕಟೀಲು ದೇವಳದ ವತಿಯಿಂದ ವಿದ್ಯಾದಾನ, ಅನ್ನದಾನ ಸಿಗುತ್ತಿದೆ, ಉತ್ತಮ ಆರೋಗ್ಯ ಸೇವೆಗಾಗಿ ಮಂಗಳೂರಿನಂತಹ ಮಹಾನಗರಕ್ಕೆ ಹೋಗಬೇಕು. ಈ ಸಮಸ್ಯೆಯ ಪರಿಹಾರಕ್ಕೆ ಕಟೀಲಿನಲ್ಲಿ ದುರ್ಗಾಸಂಜೀವನಿ ಮಣಿಪಾಲ್ ಆಸ್ಪತ್ರೆ ಪ್ರಾರಂಭಿಸಲಾಗಿದೆ ಎಂದರು.
ಎಂ.ಆರ್.ಪಿ ಎಲ್.ನ ಕೃಷ್ಣ ಹೆಗ್ಡೆ ಮಾತನಾಡಿ, ನಮ್ಮ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ಶಿಕ್ಷಣ ಆರೋಗ್ಯ, ಸಂಸ್ಕೃತಿ, ಕಲೆ ಹೀಗೆ ಎಲ್ಲಾ ಕ್ಷೇತ್ರಗಳಿಗೂ ಸಹಕಾರ ನೀಡಿದೆ ಎಂದರು.ಕಾರ್ಯಕ್ರಮದಲ್ಲಿ ಎಂ.ಆರ್.ಪಿ.ಎಲ್.ನ ಕೃಷ್ಣ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಡಾ. ಶಿವಾನಂದ ಪ್ರಭು, ಡಾ. ಉನ್ನಿಕೃಷ್ಣನ್, ಡಾ. ಆನಂದ್ ವೇಣುಗೋಪಾಲ್, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರು ಗುತ್ತು ಮತ್ತಿತರರು ಉಪಸ್ಥಿತರಿದ್ದರು. ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಆಶೀರ್ವಚನ ನೀಡಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.