ಹಾವೇರಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಜಿಲ್ಲೆಯ ಹೊಸೂರ ಗ್ರಾಪಂ ಅರಟಾಳ ಗ್ರಾಮವನ್ನು ಆಯ್ದುಕೊಳ್ಳಲಾಗಿದೆ. ಈ ಯೋಜನೆಯು 60 ದಿನಗಳವರೆಗೆ ತಮ್ಮ ಗ್ರಾಮದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿರಾದಾರ ದೇವೇಂದ್ರಪ್ಪ ಎನ್. ಅವರು ಹೇಳಿದರು.
ತಮ್ಮ ಊರಿನ ಹಾಗೂ ತಮ್ಮ ಸಮಸ್ಯೆಗಳನ್ನು ಇಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ. ತಮ್ಮ ಮನೆ ಬಾಗಿಲಿಗೆ ಸರ್ವೇ ಕಾರ್ಯಕ್ಕಾಗಿ ಅರೆಕಾಲಿಕ ಸ್ವಯಂ ಸೇವಕರು ಸಂಗ್ರಹಣಾ ನಮೂನೆಯೊಂದಿಗೆ ಬರಲಿದ್ದು, ಅವರು ಕೇಳುವ ಮಾಹಿತಿಯನ್ನು ಸರಿಯಾಗಿ ನೀಡಬೇಕು. ಸರಿಯಾದ ಮಾಹಿತಿ ನೀಡಿದಲ್ಲಿ ತಮ್ಮ ಸಮಸ್ಯೆಗಳು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ 13 ಯೋಜನೆಗಳಡಿ ಬರುತ್ತಿದ್ದರೆ, ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಎಂ.ಜಿ. ಶಿವಳ್ಳಿ ಅಧ್ಯಕ್ಷತೆ ವಹಿಸಿದ್ದರು.ನ್ಯಾಯಾಧೀಶರಾದ ಸುನಿಲ ತಳವಾರ, ಅಶ್ವಿನಿ ಚಂದ್ರಕಾಂತ, ಗ್ರಾ.ಪಂ. ಪ್ರಭಾರ ಅಧ್ಯಕ್ಷ ನಿಂಬಣ್ಣ ಹೊಸಮನಿ, ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ, ಕಾನೂನು ನೆರವು ಮುಖ್ಯ ಅಭಿರಕ್ಷಣಾ ವಕೀಲ ವಿ.ಜಿ. ದೊಡ್ಡಗೌಡರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ಶಿಗ್ಗಾಂವಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಬಿ. ಲಕ್ಕಣ್ಣನವರ, ಕಾರ್ಯದರ್ಶಿ ವಿವೇಕ ರಾಮಗೇರಿ, ವಿಕಲಚೇತನ ಕಲ್ಯಾಣಾಧಿಕಾರಿ ಆಶು ನದಾಫ್, ಗ್ರಾಮದ ಹಿರಿಯ ನಾಗರಿಕ ವೀರೇಶ ಪಾಟೀಲ, ಪಿಡಿಒ ಅವಿನಾಶ ಅಂಗರಗಟ್ಟಿ ಇತರರು ಭಾಗವಹಿಸಿದ್ದರು.