ಕನ್ನಡಪ್ರಭ ವಾರ್ತೆ ಮಂಗಳೂರು
ತಪಸ್ಯ ಫೌಂಡೇಶನ್ ವತಿಯಿಂದ ನಡೆಯಲಿರುವ ಮಂಗಳೂರು ಟ್ರಿಯಾಥ್ಲನ್, ಬೀಚ್ ಫೆಸ್ಟಿವಲ್ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಗರದ ಟಿಎಂಎ ಪೈ ಸ್ಟಾರ್ ಕಾನ್ಫರೆನ್ಸ್ ಹಾಲ್ನಲ್ಲಿ ನಡೆಯಿತು. ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಮೂಡಿಸುತ್ತಿರುವ ತಪಸ್ಯ ಫೌಂಡೇಶನ್ ಸಾರ್ಥಕ ಕೆಲಸವನ್ನು ಮಾಡುತ್ತಿದೆ. ಕ್ಯಾನ್ಸರ್ ಪೀಡಿತ ಮಕ್ಕಳ ಆರೈಕೆಗೆ 100 ಕೋಟಿ ರು. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸುತ್ತಿರುವ ಸಂಘಟನೆಯ ಜೊತೆಗೆ ಮಹಾನಗರ ಪಾಲಿಕೆ ನಿರಂತರ ಸಹಕಾರ ನೀಡಲಿದೆ ಎಂದರು. ದ.ಕ. ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮಾತಾಡಿ, ತಪಸ್ಯ ಫೌಂಡೇಶನ್ ಮಾಡುವ ಈ ಕಾರ್ಯದಲ್ಲಿ ಇಡೀ ಮಂಗಳೂರಿನ ಜನರು ಪಾಲ್ಗೊಳ್ಳಬೇಕು. ತುಳುನಾಡಿನಲ್ಲಿ ಒಳ್ಳೆಯ ಕೆಲಸ ಮಾಡಿದರೆ ದೈವ, ದೇವರ ಸಹಕಾರ ಖಂಡಿತ ಇದ್ದೇ ಇರುತ್ತದೆ ಎಂದರು.ಯೋನೆಪೋಯ ವಿವಿ ಉಪ ಕುಲಪತಿ ಡಾ.ವಿಜಯ್ ಕುಮಾರ್ ಮಾತನಾಡಿ, ತಪಸ್ಯ ಫೌಂಡೇಶನ್ ಸಮಾಜದಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ ಕ್ಯಾನ್ಸರ್ ರೋಗಿಗಳ ಆರೈಕೆಗಾಗಿ ಪ್ಯಾಲೇಟಿವ್ ಕೇರ್ ಇಂದಿನ ಕಾಲದಲ್ಲಿ ಅಗತ್ಯವಿದೆ ಎಂದರು.ಇದೇ ಸಂದರ್ಭದಲ್ಲಿ 52ನೇ ವಯಸ್ಸಿನಲ್ಲಿ ಮೌಂಟ್ ಏವರೆಸ್ಟ್ ಶಿಖರ ಏರಿರುವ ಕರ್ನಾಟಕದ ಮೊದಲ ಮಹಿಳೆ ಡಾ. ಉಷಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಟಿ ಶರ್ಟ್, ಮೆಡಲ್, ಬ್ಯಾಡ್ಜ್ ಅನಾವರಣಗೊಳಿಸಲಾಯಿತು. ಐಡಿಎಫ್ಸಿ ಬ್ಯಾಂಕಿನ ರೀಜನಲ್ ಹೆಡ್ ಶರಣ್ ರಜನಿ, ಎನ್ಐಟಿಕೆ ಡೀನ್ ಎ.ಸಿ. ಹೆಗ್ಡೆ, ಶಾಸಕ ವೇದವ್ಯಾಸ ಕಾಮತ್, ಇಂಡಿಯನ್ ಟ್ರಿಯಾಥ್ಲನ್ ಫೆಡರೇಷನ್ ಅಭಿವೃದ್ಧಿ ಅಧಿಕಾರಿ ಹರೀಶ್ ಪ್ರಸಾದ್, ರಾಜ್ಯ ರೆಸ್ಲಿಂಗ್ ಫೆಡರೇಷನ್ ಅಧ್ಯಕ್ಷ ಗುಣರಂಜನ್ ಶೆಟ್ಟಿ, ಶರಣ್ ರಜನಿ, ಸಂದೇಶ್ ಹೆಗ್ಡೆ, ನರಸಿಂಹ ಹೆಗ್ಡೆ, ಕೆಎಂಸಿ ಆಸ್ಪತ್ರೆಯ ಹರ್ಷ ಪ್ರಸಾದ್ ಮತ್ತಿತರರು ಇದ್ದರು.
ತಪಸ್ಯ ಫೌಂಡೇಶನ್ ಮೆನೇಜಿಂಗ್ ಟ್ರಸ್ಟಿ ಸಬಿತಾ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು.