ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮಾತೃಭೂಮಿ ಋಣ ತೀರಿಸಲು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸುಮಾರು 28 ಕೋಟಿ ರು. ವೆಚ್ಚದಲ್ಲಿ 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿ ಅಗತ್ಯ ಅನುದಾನ ನೀಡಿದ್ದರು.
ಅಂದಿನ ಶಾಸಕ, ಸಚಿವರಾಗಿದ್ದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಅಗತ್ಯ ವೇಗ ನೀಡಿದ್ದರು. ಕಾಮಗಾರಿ ಪೂರ್ಣಗೊಂಡು ಮೂರು ವರ್ಷಗಳು ಕಳೆದರೂ ಈಗಿನ ಕಾಂಗ್ರೆಸ್ ಆಸ್ಪತ್ರೆಗೆ ಅಗತ್ಯ ಚಿಕಿತ್ಸಾ ಪರಿಕರಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಪೀಠೋಪಕರಣಗಳ ಪೂರೈಕೆ ಮಾಡಿರಲಿಲ್ಲ. ಆದರೆ, ಸೌಲಭ್ಯ ಒದಗಿಸಿ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸುವಂತೆ ಹಾಲಿ ಶಾಸಕ ಎಚ್.ಟಿ.ಮಂಜು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಆದರೂ ಸಚಿವರು ಮತ್ತು ಶಾಸಕರ ನಡುವಿನ ಸಮಯದ ಹೊಂದಾಣಿಕೆ ಕೊರತೆಯಿಂದ ಆಸ್ಪತ್ರೆ ಲೋಕಾರ್ಪಣೆ ಕಾರ್ಯಕ್ರಮ ಎರಡು ಸಲ ಮುಂದೂಡಲ್ಪಟ್ಟಿತ್ತು.ಮೂಲ ಸೌಕರ್ಯಗಳ ಕೊರತೆ ನಡುವೆಯೇ ಮೇ 25ರಂದು ಆಸ್ಪತ್ರೆ ಉದ್ಘಾಟನೆಗೆ ಸಮಯ ನಿಗದಿಯಾಗಿದೆ. ಆದರೆ, ಆಸ್ಪತ್ರೆಗೆ ಇನ್ನೂ ಪೂರ್ಣ ಪ್ರಮಾಣದ ವೈದ್ಯಕೀಯ ಸಿಬ್ಬಂದಿ ನೇಮಕವಾಗಿಲ್ಲ. ಒಬ್ಬರು ಅನಸ್ತೇಶಿಯಾ ತಜ್ಞರು, ಮಕ್ಕಳು ವೈದ್ಯರು ಹಾಗೂ ಪ್ರಸೂತಿ ವೈದ್ಯರ ನೇಮಕ ಮಾಡಲಾಗಿದೆ.
ಕೆ.ಆರ್.ನಗರ ಆಸ್ಪತ್ರೆ ವೈದ್ಯರು ಬಳಕೆ ಮಾಡಿರುವ ಯಂತ್ರೋಪಕರಣಗಳು ಮತ್ತು ಪೀಠೋಪಕರಗಳನ್ನು ಅಲ್ಲಿಯೇ ಬಿಟ್ಟು ಉಳಿದವುಗಳನ್ನು ಕೆ.ಆರ್.ಪೇಟೆ ಆಸ್ಪತ್ರೆಗೆ ತರಲಾಗಿದೆ. ಹೀಗಾಗಿ ಪಟ್ಟಣದ ದುಂಡುಶೆಟ್ಟಿ ಲಕ್ಷ್ಮಮ್ಮ ತಾಯಿ ಮಕ್ಕಳ ಆಸ್ಪತ್ರೆಗೆ ಶೇ.50 ರಷ್ಟು ಚಿಕಿತ್ಸಾ ಯಂತ್ರಗಳು ಮತ್ತು ಪೀಠೋಪಕರಣಗಳ ಕೊರತೆಯಿದೆ.
ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.