ಕಿತ್ರೆ ದೇವಿಮನೆಯಲ್ಲಿ ನೂತನ ಭೋಜನಾಲಯ, ಸಭಾಭವನ ಲೋಕಾರ್ಪಣೆ

KannadaprabhaNewsNetwork | Published : Feb 18, 2024 1:30 AM

ಸಾರಾಂಶ

ಭಟ್ಕಳ ತಾಲೂಕಿನ ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ನಿರ್ಮಿಸಲಾದ ಅನ್ನಪೂರ್ಣೇಶ್ವರಿ ಭೋಜನಾಲಯ ಮತ್ತು ಶ್ರೀ ದುರ್ಗಾಪರಮೇಶ್ವರಿ ಸಭಾಭವನವನ್ನು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಲೋಕಾರ್ಪಣಗೊಳಿಸಿದರು.

ಭಟ್ಕಳ: ತಾಲೂಕಿನ ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ನೂತನವಾಗಿ ನಿರ್ಮಿಸಲಾದ ಅನ್ನಪೂರ್ಣೇಶ್ವರಿ ಭೋಜನಾಲಯ ಮತ್ತು ಶ್ರೀ ದುರ್ಗಾಪರಮೇಶ್ವರಿ ಸಭಾಭವನವನ್ನು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಶನಿವಾರ ಸಂಜೆ ಲೋಕಾರ್ಪಣಗೊಳಿಸಿದರು.

ಕಿತ್ರೆ ದೇವಿಮನೆಗೆ ಆಗಮಿಸಿದ ಶ್ರೀಗಳನ್ನು ಪೂರ್ಣಕುಂಭ, ಬೈಕ್ ರ‍್ಯಾಲಿ, ಚಂಡೆ ವಾದ್ಯದ ಮೂಲಕ ಅದ್ಧೂರಿಯಾಗಿ ಭಕ್ತರು ಬರಮಾಡಿಕೊಂಡರು.

ಶ್ರೀಗಳು ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಶ್ರೀ ಕ್ಷೇತ್ರ ದೇವಿಮನೆ ಸಜ್ಜುಗೊಂಡ ಪರಿ ಬಗ್ಗೆ ಮೆಚ್ಚುಗೆ ವ್ಯಕ್ತಡಿಸಿದರು. ಸುಸಜ್ಜಿತ ಭೋಜನಾಲಯ, ಸಭಾಭವನದ ಬಗ್ಗೆಯೂ ಶ್ರೀಗಳು ಖುಷಿ ಪಟ್ಟರು. ಶ್ರೀಗಳಿಗೆ ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ ದಂಪತಿ ತುಳಸಿ ಮಾಲೆ ಹಾಕುವ ಮೂಲಕ ಸ್ವಾಗತ ಕೋರಿದರು. ಶ್ರೀಗಳು ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ, ದೇವಿಮನೆ ಆಡಳಿತ ಕಮಿಟಿ ಅಧ್ಯಕ್ಷ ಶಿವಾನಂದ ಹೆಬ್ಬಾರ ಮುಲ್ಲೆಮಕ್ಕಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಭವತಾರಿಣಿ ವಲಯದ ವಿನಾಯಕ ಭಟ್ಟ ತೆಕ್ನಗದ್ದೆ, ವೆ.ಮೂ. ಬಾಲಚಂದ್ರ ಭಟ್ಟ, ಶಂಭು ಉಪಾಧ್ಯಾಯ, ಪ್ರಮುಖರಾದ ಎಂ.ಎಂ. ಹೆಬ್ಬಾರ, ನಾರಾಯಣ ಹೆಬ್ಬಾರ ಬೆಣಂದೂರು, ಎಂ.ವಿ. ಭಟ್ಟ, ನಾರಾಯಣ ಹೆಬ್ಬಾರ ಕೋಟಖಂಡ, ಗಣೇಶ ಹೆಬ್ಬಾರ ಮೂಡ್ಲಿಕೇರಿ, ಪರಮೇಶ್ವರ ಭಟ್ಟ, ಶಂಕರ ಭಟ್ಟ, ಸೇರಿದಂತೆ ಹಲವರಿದ್ದರು. ಬೆಳಗ್ಗೆ ಮತ್ತು ಸಂಜೆ ದೇವಸ್ಥಾನದ ತಾಂತ್ರಿಕ ವೇ.ಮೂ. ಅಮೃತೇಶ ಭಟ್ಟ ಗೋಕರ್ಣ ಅವರ ನೇತೃತ್ವದಲ್ಲಿ ವಿವಿಧ ಹೋಮ, ಹವನಗಳು ನಡೆದವು. ಸಂಜೆ ಸಂಗೀತ ಕಾರ್ಯಕ್ರಮ ಮತ್ತು ಯಕ್ಷಗಾನ ಲವ-ಕುಶ ಪ್ರೇಕ್ಷಕರ ಮನ ರಂಜಿಸಿತು. ಭಾನುವಾರ ದೇವಿಮನೆಯಲ್ಲಿ ಸ್ವಣಲೇಪಿತ ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ರಥೋತ್ಸವ ಮುಂತಾದ ಕಾರ್ಯಕ್ರಮಗಳು ಜರುಗಲಿದೆ. ರಾಘವೇಶ್ವರ ಶ್ರೀಗಳು ಫೆ. 19ರ ಮಧ್ಯಾಹ್ನದ ವರೆಗೆ ದೇವಿಮನೆಯಲ್ಲಿ ವಾಸ್ತವ್ಯ ಇರಲಿದ್ದಾರೆ.

Share this article