14ರಂದು ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್ ನೂತನ ವಿಟ್ಲ ಶಾಖೆಯ ಉದ್ಘಾಟನೆ

KannadaprabhaNewsNetwork | Published : Nov 11, 2024 11:50 PM

ಸಾರಾಂಶ

ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರು ಸ್ಥಾಪಿಸಿದ 115 ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್‌ನ ನೂತನ ವಿಟ್ಲ ಶಾಖೆಯ ಉದ್ಘಾಟನಾ ಸಮಾರಂಭ ನ. 14ರಂದು ವಿಟ್ಲದಲ್ಲಿನ ಎಂಪೈರ್ ಮಾಲ್‌ನಲ್ಲಿ ನಡೆಯಲಿದೆ

ಕನ್ನಡಪ್ರಭವಾರ್ತೆ ಪುತ್ತೂರು

ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರು ಸ್ಥಾಪಿಸಿದ 115 ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್‌ನ ನೂತನ ವಿಟ್ಲ ಶಾಖೆಯ ಉದ್ಘಾಟನಾ ಸಮಾರಂಭ ನ. 14ರಂದು ವಿಟ್ಲದಲ್ಲಿನ ಎಂಪೈರ್ ಮಾಲ್‌ನಲ್ಲಿ ನಡೆಯಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಎನ್.ಕಿಶೋರ್ ಕೊಳತ್ತಾಯ ತಿಳಿಸಿದ್ದಾರೆ. ಅವರು ಸೋಮವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನೂತನ ಶಾಖೆಯನ್ನು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದಾರೆ. ಭದ್ರತಾ ಕೋಶವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮತ್ತು ಗಣಕ ಯಂತ್ರವನ್ನು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಪ್ರಥಮ ಠೇವಣಿ ಪತ್ರ ಹಸ್ತಾಂತರ ಮಾಡಲಿದ್ದಾರೆ. ಅತಿಥಿಗಳಾಗಿ ಎಸ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ದ.ಕ.ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ರಮೇಶ್, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ವಿಟ್ಲ ಅರಮನೆಯ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಬಂಗಾರು ಅರಸರು ಭಾಗವಹಿಸಲಿದ್ದಾರೆ.ಬ್ಯಾಂಕ್‌ನ ವಾರ್ಷಿಕ ವ್ಯವಹಾರವು 120 ಕೋಟಿಗೂ ಮಿಕ್ಕಿರುತ್ತದೆ. ಮೀಸಲು ಕ್ಷೇಮನಿಧಿಯು 4.81 ಕೋಟಿ ರು. ಹೊಂದಿದೆ. ಪ್ರಸ್ತುತ ವರ್ಷದಲ್ಲಿ 1.55 ಕೋಟಿ ಲಾಭ ಪಡೆಯಲಾಗಿದೆ. 2023-24 ನೇ ಸಾಲಿನಲ್ಲಿ ಮೀಸಲು ನಿಧಿಗೆ 77 ಲಕ್ಷಕ್ಕೂ ಮಿಕ್ಕಿ ವರ್ಗಾಯಿಸಿ ದಾಖಲೆ ನಿರ್ಮಿಸಲಾಗಿದೆ. ಬ್ಯಾಂಕ್ ಸದಸ್ಯರಿಗೆ ಪ್ರಸ್ತುತ ವರ್ಷದಲ್ಲಿ ಶೇ. 12 ಡಿವಿಡೆಂಟ್ ನೀಡಲಾಗಿದೆ. ರಿಸರ್ವ್ ಬ್ಯಾಂಕ್‌ನ ನಿಯಮದಂತೆ ಸಮರ್ಪಕತೆಯ ಅನುಪಾತವು ಶೇ. 10ಕ್ಕಿಂತ ಹೆಚ್ಚಿರಬೇಕು ಆದರೆ ಪ್ರಸ್ತುತ ವರ್ಷದಲ್ಲಿ ಅನುಪಾತವು ಶೇ.33 ಆಗಿದ್ದು ಬ್ಯಾಂಕ್‌ನ ಸದೃಡತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೋ-ಓಪರೇಟಿವ್ ಟೌನ್ ಬ್ಯಾಂಕ್ ಉಪಾಧ್ಯಕ್ಷ ಕೂಡ್ಗಿ ವಿಶ್ವಾಸ್ ಶೆಣೈ, ನಿರ್ದೇಶಕರಾದ ಚಂದ್ರಶೇಖರ ರಾವ್ ಬಪ್ಪಳಿಗೆ, ಕಿರಣ್ ಕುಮಾರ್ ಬಲ್ನಾಡು, ಬ್ಯಾಂಕ್‌ನ ಕಾರ್ಯನಿರ್ವಹಣಾಧಿಕಾರಿ ಶೇಖರ್ ಶೆಟ್ಟಿ ಉಪಸ್ಥಿತರಿದ್ದರು.

Share this article