ನಾಡಿದ್ದು ಅಯೋಧ್ಯೆಯಲ್ಲಿ ರಾಮಾಂಜನೇಯ ಹೋಟೆಲ್‌ ಉದ್ಘಾಟನೆ

KannadaprabhaNewsNetwork | Published : Nov 28, 2024 12:30 AM

ಸಾರಾಂಶ

ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ನಾನು, ಸಹೋದರ ಯತಿರಾಜ ಶೆಟ್ಟಿ ಮತ್ತು ಸಹೋದರರು ಕೂಡಿಕೊಂಡು ನೂತನವಾಗಿ ಆರಂಭಿಸಿರುವ ರಾಮಾಂಜನೇಯ ದ ಎಕ್ಸಿಕ್ಯೂಟಿವ್ ಹೋಟೆಲ್ ಮತ್ತು ಉಡುಪಿ ಅಯೋಧ್ಯಾ ಫುಡ್ ಪ್ಯಾಲೇಸ್ ನ.30ರಂದು ಉದ್ಘಾಟನೆ ಆಗುತ್ತಿದೆ ಎಂದು ಹೋಟೆಲ್‌ ಮಾಲೀಕ ಪ್ರಭಾಕರ ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ನಾನು, ಸಹೋದರ ಯತಿರಾಜ ಶೆಟ್ಟಿ ಮತ್ತು ಸಹೋದರರು ಕೂಡಿಕೊಂಡು ನೂತನವಾಗಿ ಆರಂಭಿಸಿರುವ ರಾಮಾಂಜನೇಯ ದ ಎಕ್ಸಿಕ್ಯೂಟಿವ್ ಹೋಟೆಲ್ ಮತ್ತು ಉಡುಪಿ ಅಯೋಧ್ಯಾ ಫುಡ್ ಪ್ಯಾಲೇಸ್ ನ.30ರಂದು ಉದ್ಘಾಟನೆ ಆಗುತ್ತಿದೆ ಎಂದು ಹೋಟೆಲ್‌ ಮಾಲೀಕ ಪ್ರಭಾಕರ ಶೆಟ್ಟಿ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಟೆಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಟ್ರಸ್ಟಿ ಹಾಗೂ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್ ನಾಗರಕಟ್ಟೆ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಅಮಿತ್ ಮಿಶ್ರಾ, ಮೌಂಟ್ ಏವರೆಸ್ಟ್ ಏರಿದ ಪ್ರಥಮ ಮಹಿಳೆ ಅರುನಿಮಾ ಸಿನ್ಹಾ, ಬಂಟರ ಸಂಘದ ಅಧ್ಯಕ್ಷ ವಿಠಲ ಹೆಗಡೆ, ಗೋಪಾಲ ಶೆಟ್ಟಿ, ವಿಜಯ ಶೆಟ್ಟಿ ಸೇರಿ ಮತ್ತಿತರ ಗಣ್ಯರು ಉಪಸ್ಥಿತಿ ಇರಲಿದ್ದಾರೆ ಎಂದರು.ಈಗಾಗಲೇ ಬೆಳಗಾವಿ, ಕೊಲ್ಹಾಪುರದಲ್ಲಿ ಹೋಟೆಲ್‌ಗಳನ್ನು ಹೊಂದಿರುವ ನಾವು ಪವಿತ್ರ ರಾಮ ಜನ್ಮಭೂಮಿಯಲ್ಲಿ ಹೋಟೆಲ್ ಆರಂಭಿಸಬೇಕು ಎಂದು ಕನಸು ಕಂಡಿದ್ದೇವು. ಅದು ಈಗ ಸಾಕಾರವಾಗುತ್ತಿದ್ದು, ಅಯೋಧ್ಯೆಯಲ್ಲಿ ನಿರ್ಮಿಸಿರುವ ನೂತನ ಹೋಟೆಲ್‌ನಲ್ಲಿ ಉತ್ತರಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿ ಉತ್ತರ ಭಾರತದ ಗುಣಮಟ್ಟದ ಪ್ರಸಿದ್ಧ ಸಸ್ಯಾಹಾರಿ ತಿಂಡಿ-ತಿನಿಸುಗಳನ್ನು ಸವಿಯಬಹುದು. ಡಿಲಕ್ಸ್, ಎಸಿ, ನಾನ್ ಎಸಿ ಸುಸಜ್ಜಿತ ರೂಮ್, ಪಾರ್ಟಿ ಹಾಲ್ ಸೇರಿ ಮತ್ತಿತರ ಸೌಲಭ್ಯಗಳು ಇಲ್ಲಿರಲಿವೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಜಯರಾಮ ಶೆಟ್ಟಿ, ಸುರೇಶ ಶೆಟ್ಟಿ, ಆರ್.ಅಭಿಲಾಷ ಉಪಸ್ಥಿತರಿದ್ದರು.

ಅಯೋಧ್ಯೆಯಲ್ಲಿ ಶ್ರೀರಾಮನ ಬಾಲ ಮೂರ್ತಿ ಲೋಕಾರ್ಪಣೆಗೊಂಡ ಬಳಿಕ ಇಲ್ಲಿನ ಹೋಟೆಲ್, ವಸತಿ ಗೃಹಗಳ ದರಗಳು ಗಗನಕ್ಕೇರಿವೆ. ಆದರೆ, ನಾವು ಆರಂಭಿಸುತ್ತಿರುವ ಹೋಟೆಲ್ ಮತ್ತು ವಸತಿ ಗೃಹದಲ್ಲಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಅಲ್ಲದೇ ಇಡೀ ಹೋಟೆಲ್ ಕನ್ನಡಮಯ ಆಗಿರಲಿದ್ದು, ಕೆಲಸಕ್ಕೆ ಕನ್ನಡಿಗರಿಗೆ ಆದ್ಯತೆ ನೀಡಲಾಗುವುದು. ಒಟ್ಟಾರೆ ಕರ್ನಾಟಕದಿಂದ ಬರುವ ಭಕ್ತರಿಗೆ ವಿಶೇಷ ಆದರಾತಿಥ್ಯ ನೀಡಲಾಗುತ್ತದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಲಾಗುವುದು.

-ಪ್ರಭಾಕರ ಶೆಟ್ಟಿ,

ರಾಮಾಂಜನೇಯ ಹೋಟೆಲ್‌ ಮಾಲೀಕ.

Share this article