ಕಾರ್ಖಾನೆಯ ಪ್ರಗತಿಗೆ ದಾಂಡೇಲಿ ನಗರದ ಜನತೆಯ ಕೊಡುಗೆ ಅಪಾರ
ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಪ್ರಗತಿಗೆ ದಾಂಡೇಲಿ ನಗರದ ಜನತೆಯ ಕೊಡುಗೆ ಅಪಾರ ಎಂದು ಕಾರ್ಖಾನೆಯ ಮಾಲಕರಾದ ಶ್ರೀಕುಮಾರ ಬಂಗೂರ ಹೇಳಿದರು.ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ಅಂದಾಜು ₹೫೩ ಲಕ್ಷ ವೆಚ್ಚದಲ್ಲಿ ನವಿಕರಣಗೊಂಡ ಕರ್ನಾಟಕ ಸಂಘದ ಕಟ್ಟದ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಮಾತನಾಡಿದರು.
ಈ ಸ್ಪರ್ದಾತ್ಮಕ ಯುಗದಲ್ಲಿ ಕಾರ್ಖಾನೆಯನ್ನು ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಅವೆಲ್ಲವುಗಳನ್ನು ಮೆಟ್ಟಿ ನಿಂತು ಹಂತಹಂತವಾಗಿ ಕಾಗದ ಕಾರ್ಖಾನೆ ದಿನದಿಂದ ದಿನಕ್ಕೆ ಪ್ರಗತಿಯಲ್ಲಿ ಸಾಗುತ್ತಿದೆ. ಕಾಗದ ಕಾರ್ಖಾನೆಗೆ ಎಲ್ಲವನ್ನು ಕೊಟ್ಟ ದಾಂಡೇಲಿಯ ಪ್ರತಿಗೆ ಕಾಗದ ಕಾರ್ಖಾನೆಯು ತನ್ನದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಕಾರ್ಖಾನೆಯು ತನ್ನ ಸಿಎಸ್ಆರ್ ಯೋಜನೆಯಡಿ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ಕ್ರಿಡಾ ಕ್ಷೇತ್ರಗಳ ಅಭ್ಯೂದಯಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಕಾರ್ಖಾನೆಯು ಸಮಾಜಮುಖಿ ಕಾರ್ಯಗಳಿಗೆ ಆದ್ಯತೆಯನ್ನು ನೀಡುತ್ತಿದೆ. ಈ ಭಾಗದ ಅಭಿವೃದ್ದಿಗೆ ಕಾಗದ ಕಾರ್ಖಾನೆ ಸದಾ ಬದ್ಧವಾಗಿದೆ ಎಂದರು.ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಕಾರ್ಖಾನೆಯ ಮಾಲೀಕ ಶ್ರೀಕುಮಾರ ಬಂಗೂರ ಅವರ ಮಾರ್ಗದರ್ಶನದಂತೆ ಕಾರ್ಖಾನೆಯ ಪ್ರಗತಿಯ ಜೊತೆ ಈ ಭಾಗದ ಪ್ರಗತಿಗೂ ಅತ್ಯಂತ ಬದ್ದತೆಯಿಂದ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು.ಕರ್ನಾಟಕ ಸಂಘದ ಪ್ರಭಾರಿ ಅಧ್ಯಕ್ಷ ಮೋಹನ ಹಲವಾಯಿ ಮಾತನಾಡಿದರು.
ವೇದಿಕೆಯಲ್ಲಿ ಡಿವೈಎಸ್ಪಿ ಶಿವಾನಂದ ಮದರಕಂಡಿ, ಶಶಿದೇವೆ ಬಂಗೂರ, ವೀರೇಂದ್ರ ಬಂಗೂರ, ಆರ್ಯಣ ಬಂಗೂರ, ಶ್ರೀವಸ್ತ ಬಂಗೂರ ಉಪಸ್ಥಿತರಿದ್ದರು.
ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ ಸ್ವಾಗತಿಸಿದರು. ಸಂಘದ ಆರ್.ಪಿ. ನಾಯ್ಕ ವಂದಿಸಿದರು. ಸಂದೇಶ ಜೈನ ನಿರೂಪಿಸಿದರು. ಕಾರ್ಖಾನೆಯ ಸಾರ್ವಜನಿಕ ಸಂಪರ್ಕವಿಭಾಗದ ಉಪಪ್ರಧಾನ ವಯವಸ್ಥಾಪಕ ರಾಘವೇಂದ್ರ ಜೆ.ಆರ್. ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಮತ್ತು ವಿಭಾಗದ ಸಿಬ್ಬಂದಿ ಸಹಕರಿಸಿದರು.