ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರಲ್ಲಿ ಉಡುಪಿ ಜಿಲ್ಲೆಯ ವಿವಿಧ ಕ್ರೈಸ್ತ ಸಭೆಗಳನ್ನು ಒಗ್ಗೂಡಿಸುವ ಅಖಿಲ ಕರ್ನಾಟಕ ಮಾನವ ಹಕ್ಕುಗಳ ಸಂಯುಕ್ತ ಕ್ರೈಸ್ತ ಐಕ್ಯತಾ ವೇದಿಕೆ ಜಿಲ್ಲಾ ಘಟಕದ ಉದ್ಘಾಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಸಮಾಜದ ಕಳಕಳಿಯನ್ನು ಬಾಲ್ಯದಲ್ಲಿಯೇ ಮಕ್ಕಳಲ್ಲಿ ಬೆಳೆಸಿ ಪ್ರತಿಯೊಂದು ಸಮುದಾಯಗಳೊಂದಿಗೆ ಒಗ್ಗಟ್ಟಿನಿಂದ ಬದುಕುವ ಮೂಲಕ ಲೋಕಕ್ಕೆ ಬೆಳಕಾಗಬೇಕು ಎಂದು ಸಿಎಸ್ಐ ಕರ್ನಾಟಕ ಸದರ್ನ್ ಡಯೋಸಿಸ್ ಧರ್ಮಾಧ್ಯಕ್ಷ ಡಾ.ಹೇಮಚಂದ್ರ ಹೇಳಿದರು.ಅವರು ಮಂಗಳವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರಲ್ಲಿ ಉಡುಪಿ ಜಿಲ್ಲೆಯ ವಿವಿಧ ಕ್ರೈಸ್ತ ಸಭೆಗಳನ್ನು ಒಗ್ಗೂಡಿಸುವ ಅಖಿಲ ಕರ್ನಾಟಕ ಮಾನವ ಹಕ್ಕುಗಳ ಸಂಯುಕ್ತ ಕ್ರೈಸ್ತ ಐಕ್ಯತಾ ವೇದಿಕೆ ಜಿಲ್ಲಾ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ನಾವು ಒಗ್ಗಟ್ಟಿನಲ್ಲಿದ್ದರೆ ಶಕ್ತಿಯುತವಾಗಿರಲು ಸಾಧ್ಯ, ಅದೇ ವಿಭಜನೆಗೊಂಡರೆ ಅದು ನಮ್ಮ ಸಮುದಾಯದ ಸೋಲು ಆಗುತ್ತದೆ. ಒಗ್ಗಟ್ಟಿನಿಂದ ಬಾಳುವುದು ಇಂದಿನ ಪ್ರಮುಖ ಅವಶ್ಯಕತೆಯಾಗಿದ್ದು ಈ ಮೂಲಕ ಸಮುದಾದಯದ ಹಕ್ಕುಗಳಿಗೆ ಹೋರಾಟ ನಡೆಸಬಹುದು. ಒಗ್ಗಟ್ಟಿನ ಹೋರಾಟದಿಂದ ಯಶಸ್ಸು ಸದಾ ನಮ್ಮದಾಗುತ್ತದೆ ಎಂದರು.ತಮ್ಮ ಜೀವನದ 75 ಸಂವತ್ಸರಗಳನ್ನು ಪೂರೈಸಿದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ, ಕ್ರೈಸ್ತ ಐಕ್ಯತಾ ವೇದಿಕೆ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಬ್ಯಾಪ್ಟಿಸ್ಟ್ ಪಾಯ್ಸ್ ಹಾಗೂ ವೇದಿಕೆ ರಾಷ್ಟ್ರೀಯ ಸದಸ್ಯರಾಗಿ ನೇಮಕಗೊಂಡಿರುವ ಡೆನಿಸ್ ಡೆಸಾ ಅವರನ್ನು ಸನ್ಮಾನಿಸಲಾಯಿತು.ಅಖಿಲ ಕರ್ನಾಟಕ ಮಾನವ ಹಕ್ಕುಗಳ ಸಂಯುಕ್ತ ಕ್ರೈಸ್ತ ಐಕ್ಯತಾ ವೇದಿಕೆ ಕಾರ್ಯಚಟುವಟಿಕೆಗಳು, ಮುಂದಿನ ಯೋಜನೆಗಳ ಕುರಿತು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಬಿ. ಸಲ್ಡಾನಾ ಮಾಹಿತಿ ಕಾರ್ಯಾಗಾರವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ರೈಸ್ತ ಸಭೆಗಳಾದ ರೋಮನ್ ಕೆಥೊಲಿಕ್, ಸೀರೊ ಮಲಬಾರ್, ಸೀರೋ ಮಲಂಕರ, ಸಿಎಸ್ಐ, ಯುಬಿಎಂಸಿ, ಸೀರಿಯನ್ ಓರ್ಥೊಡಕ್ಸ್, ಮಾರ್ಥೋಮಾ ಸೇರಿದಂತೆ ಇತರ ಸ್ವತಂತ್ರ ಕ್ರೈಸ್ತ ಸಭೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.ಸಿಎಸ್ಐ ಉಡುಪಿ ಸಭಾಪಾಲಕ ಐವನ್ ಸೋನ್ಸ್ ಪ್ರಾರ್ಥನೆ ನೆರವೇರಿಸಿದರು. ಅಖಿಲ ಕರ್ನಾಟಕ ಮಾನವ ಹಕ್ಕುಗಳ ಸಂಯುಕ್ತ ಕ್ರೈಸ್ತ ಐಕ್ಯತಾ ವೇದಿಕೆ ಉಪಾಧ್ಯಕ್ಷ ಪ್ರಶಾಂತ್ ಜತ್ತನ್ನ ಸ್ವಾಗತಿಸಿದರು. ಕ್ರೈಸ್ತ ಐಕ್ಯತಾ ವೇದಿಕೆ ಧರ್ಮಪ್ರಾಂತ್ಯದ ಕಾರ್ಯದರ್ಶಿ ಲಿಯೋ ಡಿಸೋಜ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.