ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಿಯಂತ್ರಿಸಲಾಗದಷ್ಟು ಪ್ರಮಾಣದಲ್ಲಿ ಜನರು ಸೇರಿ, ಸ್ಟೇಡಿಯಂ ಗೇಟನ್ನು ಕಿತ್ತು ಬಿಸಾಕಿದ್ದರಿಂದ ಕಾಲ್ತುಳಿತದ ದುರ್ಘಟನೆ ಸಂಭವಿಸಿದೆ. ಇದರಿಂದ 11 ಮಂದಿ ಮೃತಪಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು : ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಜನಸಂದಣಿ ನಿಭಾಯಿಸಲು ಪೊಲೀಸರು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಎಷ್ಟು ಭದ್ರತೆ ಮಾಡಬೇಕೋ ಅಷ್ಟು ಮಾಡಿದ್ದರು. ಆದರೆ, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಿಯಂತ್ರಿಸಲಾಗದಷ್ಟು ಪ್ರಮಾಣದಲ್ಲಿ ಜನರು ಸೇರಿ, ಸ್ಟೇಡಿಯಂ ಗೇಟನ್ನು ಕಿತ್ತು ಬಿಸಾಕಿದ್ದರಿಂದ ಕಾಲ್ತುಳಿತದ ದುರ್ಘಟನೆ ಸಂಭವಿಸಿದೆ. ಇದರಿಂದ 11 ಮಂದಿ ಮೃತಪಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದುರ್ಘಟನೆ ಸಂಭವಿಸಿದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ತೆರೆದ ವಾಹನದಲ್ಲಿ ಆರ್ಸಿಬಿ ತಂಡದ ಸದಸ್ಯರ ಮೆರವಣಿಗೆ ನಡೆಸಲು ಆಲೋಚಿಸಲಾಗಿತ್ತು. ಆದರೆ, ಭಾರೀ ಜನಸ್ತೋಮ ಸೇರಿದ ಕಾರಣಕ್ಕೆ ಪೊಲೀಸರ ಸಲಹೆಯಂತೆ ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ರದ್ದುಪಡಿಸಿದೆವು.
ವಿಧಾನಸೌಧದ ಮುಂಭಾಗದಲ್ಲೂ ಕೇವಲ 15 ನಿಮಿಷಗಳಲ್ಲಿ ತಂಡದ ಸದಸ್ಯರಿಗೆ ಸನ್ಮಾನ ಸಮಾರಂಭ ಮುಗಿಸಿದೆವು. ನಾವ್ಯಾರು ಭಾಷಣ ಕೂಡ ಮಾಡಲಿಲ್ಲ. ಪೊಲೀಸರು ಅಭಿಮಾನಿಗಳನ್ನು ನಿಭಾಯಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಎಷ್ಟು ಭದ್ರತೆ ಮಾಡಬೇಕೋ ಅಷ್ಟು ಮಾಡಿದ್ದಾರೆ. ಆದರೆ, ಚಿನ್ನಸ್ವಾಮಿ ಸ್ಟೇಡಿಯಂ ಬಳಿಕ ನಿಯಂತ್ರಿಸಲಾಗದಷ್ಟು ಜನರು ಸೇರಿ, ಗೇಟ್ನ್ನೂ ಕಿತ್ತು ಬಿಸಾಕಿ ನುಗ್ಗಿದ್ದರಿಂದ ದುರ್ಘಟನೆ ನಡೆದಿದೆ.
ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ದೊರಕಿದೆ. ಬೌರಿಂಗ್ ಆಸ್ಪತ್ರೆಯಲ್ಲಿ 7 ಮಂದಿ, ವೈದೇಹಿ ಆಸ್ಪತ್ರೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೂ 10, 12 ಜನ ಅಸ್ವಸ್ಥರಾಗಿದ್ದರು. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.
ಇಂತಹ ಘಟನೆ ಆಗಬಾರದಿತ್ತು. ಆಗಿಹೋಗಿದೆ. ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಮೃತರ ಕುಟುಂಬಗಳಿಗೆ, ನೊಂದವರಿಗೆ ಸಾಂತ್ವನ ಹೇಳ ಬಯಸುತ್ತೇನೆ. ಮುಖ್ಯಮಂತ್ರಿ ಅವರೊಂದಿಗೆ ಕೂತು ಮಾತನಾಡಿ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದರು.
ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷದವರು ಆರೋಪಿಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಪ್ರತಿಪಕ್ಷದವರು ಅಧಿಕಾರದಲ್ಲಿದ್ದಾಗ ಇದ್ದ ಪೊಲೀಸರೇ ಈಗ ನಮ್ಮ ಅಧಿಕಾರಾವಧಿಯಲ್ಲೂ ಇದ್ದಾರೆ. ಹೊಸಬರೇನೂ ಬಂದಿಲ್ಲ. ನಾನು ಯಾರನ್ನೂ ದೂರುವುದಿಲ್ಲ ಎಂದರು.
ಬಿಜೆಪಿಯ ಸಿ.ಟಿ.ರವಿ ಅವರು ಇದು ಪ್ರಾಯೋಜಿತ ಕೊಲೆ ಎಂದು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ಆರ್ಸಿಬಿ ಬಗ್ಗೆ ಸಿ.ಟಿ.ರವಿ ಏನು ಮಾತನಾಡಿದ್ದಾರೆ. ಜನ ಹೇಗೆ ರೊಚ್ಚಿಗೆದ್ದಿದ್ದಾರೆ ಎಲ್ಲಾ ಗೊತ್ತಿದೆಯಲ್ಲ ಎಂದರು.