3.40 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಗುದ್ದಲಿಪೂಜೆ । 7 ವಾರ್ಡ್ಗಳಲ್ಲಿ ನಿರ್ಮಾಣ
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ದಲಿತರ, ಹಿಂದುಳಿದವರ, ಅಲ್ಫಸಂಖ್ಯಾತರ ಪರವಾದ ಆಡಳಿತವನ್ನು ನಡೆಸುತ್ತಿದ್ದು ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಜೊತೆಗೆ ರಾಜ್ಯದ ಅಭಿವೃದ್ದಿಗೂ ನಮ್ಮ ಸರ್ಕಾರ ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಬಸವರಾಜ ವಿ.ಶಿವಗಂಗಾ ಹೇಳಿದರು.
ನಗರದಲ್ಲಿ ಬುಧುವಾರ 2024-25ನೇ ಸಾಲಿನ ಅಲ್ಫಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಪಟ್ಟಣದ ವಿವಿಧ 7 ವಾರ್ಡ್ಗಳಲ್ಲಿ 3.40 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿ ಕೆಲಸಗಳಿಗೆ ಗುದ್ದಲಿಪೂಜೆಯನ್ನು ನೆರವೇರಿಸಿ ಮಾತನಾಡಿದರು.ಭಾರತ ದೇಶದ ಮಹಾನ್ ವ್ಯಕ್ತಿಗಳಾದ ಬುದ್ದ-ಬಸವ-ಅಂಬೇಡ್ಕರ್ ಅವರ ಆಶಯವಾದ ಸಮ-ಸಮಾಜದ ನಿರ್ಮಾಣದ ತತ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು ಸರ್ಕಾರದ ಯಾವುದೇ ಯೋಜನೆಗಳಾದರೂ ಅವು ಅರ್ಹ ಫಲಾನುಭವಿಗಳಿಗೆ ಕೊಡಿಸುವುದು ನನ್ನ ಉದ್ದೇಶ. ಒತ್ತಡಕ್ಕೆ ಮಣಿದು ಕೆಲಸ ಮಾಡುವವನು ನಾನಲ್ಲ ಎಂದರು.
ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವನ್ನು ಇಟ್ಟು ಶಾಸಕನನ್ನಾಗಿ ಮಾಡಿದ್ದು ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದಾಗಿ ತಿಳಿಸುತ್ತಾ ಪುರಸಭೆಯ ಸದಸ್ಯರು ಪಕ್ಷಭೇದ ಮರೆತು ಪಟ್ಟಣದ ಅಭಿವೃದ್ದಿಗೆ ಕೈ ಜೋಡಿಸಬೇಕಾಗಿದೆ ಎಂದು ಹೇಳುತ್ತಾ ಚುನಾವಣೆಗಳು ಬಂದಾಗ ರಾಜಕಾರಣ ಮಾಡೋಣ ಚುನಾವಣೆ ಮುಗಿದ ನಂತರ ನಾವೆಲ್ಲರೂ ಒಗ್ಗಟ್ಟಾಗಿ ಪಟ್ಟಣದ ಅಭಿವೃದ್ದಿಗೆ ಶ್ರಮಿಸೋಣ ಎಂದರು.
ಪಟ್ಟಣದ ಜನರು ಈ ಹಿಂದಿನ ಎಲ್ಲಾ ಚುನಾವಣೆಗಳಿಗಿಂತಲೂ ನನ್ನ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಅಧಿಕ ಮತಗಳನ್ನು ನೀಡಿ ನನ್ನನ್ನು ಶಾಸಕನನ್ನಾಗಿ ಮಾಡಿದ್ದು ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸ, ನಂಬಿಕೆಗೆ ಯಾವತ್ತು ಚ್ಯುತಿ ಬಾರದ ರೀತಿ ಕೆಲಸ ಮಾಡುತ್ತೇನೆ ಎಂದರು.ಚನ್ನಗಿರಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಪಟ್ಟಣದ ಸ್ವಚ್ಛತೆ ಸೇರಿದಂತೆ ಪಟ್ಟಣದ ಜನತೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಹೊದಗಿಸಲು ನಾನು ಬದ್ಧನಾಗಿದ್ದೇನೆ ಎಂದರು.
ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಕಂದಾಯ ಅಧಿಕಾರಿ ಮಂಜುನಾಥ್, ಅಮಾನುಲ್ಲಾ, ಸದಸ್ಯರಾದ ಅಮೀರ್ ಅಹಮದ್, ಗೌಸ್ ಪೀರ್, ಜಿ.ನಿಂಗಪ್ಪ, ಇಮ್ರಾನ್, ಜರಿನಾಭಿ, ಜಿತೇಂದ್ರರಾಜ್, ಕಾಪೀಪುಡಿ ಶಿವಾಜಿರಾಜ್, ಶಶಿಕುಮಾರ್, ಸೈಯ್ಯಾದ್ ಅಪ್ರೋಜ್ ಸೇರಿದಂತೆ ಮೊದಲಾದವರು ಹಾಜರಿದ್ದರು.