ಯಲ್ಲಾಪುರ: ಇಂದಿನ ಯುಗ ಕೊರೋನಾ ಡೆಂಘಿಯಂತಹ ರೋಗಗಳ ವೈರಸ್ ಯುಗವಾಗಿದ್ದು, ಅವುಗಳ ಬಾಧೆಯಿಂದ ದೂರವಿರಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರೂ ಶುಚಿ- ರುಚಿಯಾದ, ಹಿತ- ಮಿತವಾದ ತಾಜಾ ಆಹಾರ ಸೇವನೆಯಿಂದ ದೀರ್ಘಕಾಲದವರೆಗೆ ಆರೋಗ್ಯವಂತರಾಗಿ ಇರಲು ಸಾಧ್ಯ ಎಂದು ತಾಲೂಕು ಆಸ್ಪತ್ರೆಯ ತಜ್ಞ ವೈದ್ಯೆ ಡಾ. ಸೌಮ್ಯ ಕೆ.ವಿ. ತಿಳಿಸಿದರು.
ಸಾಂಪ್ರದಾಯಿಕ ಆಚರಣೆಯ ಆಹಾರ ಪದ್ಧತಿಯಲ್ಲಿ ವೈಜ್ಞಾನಿಕ ತಳಕು ಇರುವುದರಿಂದ ಅದನ್ನು ಪಾಲಿಸುವ ಮೂಲಕ ಒತ್ತಡದ ಜೀವನಶೈಲಿಯಿಂದಾಗಿ ಕಂಡುಬರುವ ಬೊಜ್ಜು, ಮಧುಮೇಹ, ಮಲಬದ್ಧತೆಯಂತಹ ರೋಗಗಳನ್ನು ನಿಯಂತ್ರಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪಪಂ ಮಾಜಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ ಮಾತನಾಡಿ, ಎಷ್ಟೇ ಐಶ್ವರ್ಯವಂತರಾಗಿದ್ದರೂ ಉತ್ತಮ ಆರೋಗ್ಯವಿದ್ದರೆ ಮಾತ್ರ ಅದನ್ನು ಅನುಭವಿಸಲು ಸಾಧ್ಯ. ಪೌಷ್ಟಿಕ ಆಹಾರ ಸೇವನೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.ಪತ್ರಕರ್ತೆ ಪ್ರಭಾವತಿ ಗೋವಿ ಮಾತನಾಡಿದರು. ಒಕ್ಕೂಟದ ಅಧ್ಯಕ್ಷೆ ಲಕ್ಷ್ಮಿ ಗುಡಿಗಾರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ತಯಾರಿಸಿದ ಪೌಷ್ಟಿಕ ಖಾದ್ಯಗಳ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಿತು. ಸ್ಪರ್ಧೆಯಲ್ಲಿ ವಿಜೆತರಾದವರಿಗೆ ಬಹುಮಾನ ವಿತರಿಸಲಾಯಿತು. ವಲಯ ಮೇಲ್ವಿಚಾರಕ ಮಾಂತಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಸೂಯಾ ಸ್ವಾಗತಿಸಿದರು. ಸೇವಾಪ್ರತಿನಿಧಿ ಅನಿತಾ ದೇಸಾಯಿ ನಿರ್ವಹಿಸಿದರು. ಗ್ರಾ.ಯೋ. ಜ್ಞಾನ ವಿಕಾಸದ ಸಮನ್ವಯಾಧಿಕಾರಿ ಚೈತ್ರ ವಂದಿಸಿದರು.