ಮೆಡಿಕಲ್ ಕಾಲೇಜಿಗೆ ಸೀಟು ಹೆಚ್ಚಳ; ಜಾಗದ ಕೊರತೆ..!

KannadaprabhaNewsNetwork |  
Published : Jul 07, 2026, 01:30 AM IST
೬ಕೆಎಂಎನ್‌ಡಿ-೧ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಚಿತ್ರ. | Kannada Prabha

ಸಾರಾಂಶ

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೆಳವಣಿಗೆಗಾಗಿ ಕೇಂದ್ರ ಸರ್ಕಾರ ಹಾಲಿ ಇರುವ ಎಂಬಿಬಿಎಸ್ ಪದವಿ ಹಾಗೂ ಸ್ನಾತಕೋತ್ತರ ಪದವಿ ಸೀಟುಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಗ್ರೀನ್‌ಸಿಗ್ನಲ್ ಕೊಟ್ಟಿದೆ. ಸೀಟುಗಳ ಹೆಚ್ಚಳಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಜಾಗದ ಕೊರತೆ ಬಹಳವಾಗಿ ಕಾಡುತ್ತಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೆಳವಣಿಗೆಗಾಗಿ ಕೇಂದ್ರ ಸರ್ಕಾರ ಹಾಲಿ ಇರುವ ಎಂಬಿಬಿಎಸ್ ಪದವಿ ಹಾಗೂ ಸ್ನಾತಕೋತ್ತರ ಪದವಿ ಸೀಟುಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಗ್ರೀನ್‌ಸಿಗ್ನಲ್ ಕೊಟ್ಟಿದೆ. ಸೀಟುಗಳ ಹೆಚ್ಚಳಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಜಾಗದ ಕೊರತೆ ಬಹಳವಾಗಿ ಕಾಡುತ್ತಿದೆ.

ಪ್ರಸ್ತುತ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಒಟ್ಟು ೧೫೦ ಎಂಬಿಬಿಎಸ್ ಸೀಟುಗಳಿವೆ. ಈಗ ಅದನ್ನು ೨೦೦ಕ್ಕೆ ಹೆಚ್ಚಿಸಲು ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರ ಹಸಿರು ನಿಶಾನೆ ತೋರಿಸಿದೆ. ಅದೇ ರೀತಿ ಸ್ನಾತಕೋತ್ತರ ಪದವಿಗೂ ೨೩ ಹೆಚ್ಚುವರಿ ಸೀಟುಗಳನ್ನು ನೀಡಲು ಸಮ್ಮತಿಸಿದೆ. ೫೦ ಎಂಬಿಬಿಎಸ್ ಪದವಿ ಸೀಟುಗಳ ಹೆಚ್ಚಳಕ್ಕೆ ೪೫ ಕೋಟಿ ರು. ಹಾಗೂ ೨೩ ಪಿಜಿ ಸೀಟುಗಳ ಹೆಚ್ಚಳಕ್ಕೆ ೩೪.೫ ಕೋಟಿ ರು.ಗಳನ್ನು ಭರಿಸಲು ಸಿದ್ಧವಿದೆ.

ಇದು ಕೇಂದ್ರ ಸರ್ಕಾರದಿಂದ ಸಿಗುವ ಶೇ.೬೦ರಷ್ಟು ಅನುದಾನವಾಗಿದ್ದರೆ, ರಾಜ್ಯ ಸರ್ಕಾರದ ಶೇ.೪೦ರಷ್ಟು ಅನುದಾನವೂ ಮಂಡ್ಯ ಮೆಡಿಕಲ್ ಕಾಲೇಜಿಗೆ ಸಿಗಲಿದೆ. ಹೆಚ್ಚುವರಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಪೀಠೋಪಕರಣಗಳು, ಲೆಕ್ಚರರ್‌ ಹಾಲ್, ಪ್ರಯೋಗಾಲಯ ಉಪಕರಣಗಳು, ಸಲಕರಣೆಗಳು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಅನಿವಾರ್ಯವಾಗಿದೆ. ಈಗಿರುವ ಸ್ಥಳದಲ್ಲಿ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಕಷ್ಟಸಾಧ್ಯವಿರುವುದರಿಂದ ಹೆಚ್ಚುವರಿ ಜಾಗಕ್ಕೆ ಹುಡುಕಾಟ ನಡೆಸಲಾಗುತ್ತಿದೆ.

ಯಾರೂ ಸಿದ್ಧರಿಲ್ಲ:

ಆಸ್ಪತ್ರೆ ಜಾಗದಲ್ಲಿ ನೆಲೆಯೂರಿರುವ ತಮಿಳು ಕಾಲೋನಿಯನ್ನು ತೆರವುಗೊಳಿಸುವುದಕ್ಕೆ ಜನ ಪ್ರತಿನಿಧಿಗಳಾದಿಯಾಗಿ ಜಿಲ್ಲಾಡಳಿತವೂ ಧೈರ್ಯ ಮಾಡುತ್ತಿಲ್ಲ. ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಪ್ರಕರಣವನ್ನು ಇತ್ಯರ್ಥಗೊಳಿಸುವುದಕ್ಕೆ ಆಸಕ್ತಿಯನ್ನೇ ತೋರಿಸುತ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವುದನ್ನೇ ಮುಂದಿಟ್ಟುಕೊಂಡು ವರ್ಷಗಳನ್ನು ದೂಡಲಾಗುತ್ತಿದೆ. ಹೈಕೋರ್ಟ್ ಆದೇಶವಿದ್ದರೂ, ತಮಿಳು ಕಾಲೋನಿ ನಿವಾಸಿಗಳಿಗೆ ಕೆರೆಯಂಗಳದಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದರೂ ನಿವಾಸಿಗಳನ್ನು ತೆರವುಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಈಗಾಗಲೇ ಸ್ಯಾಟಲೈಟ್ ಮೂಲಕ ಆಸ್ಪತ್ರೆ ಜಾಗವನ್ನು ಸರ್ವೇ ನಡೆಸಲಾಗಿದೆ. ೪೨ ಎಕರೆ ಜಾಗವಿರುವುದಾಗಿ ಗೊತ್ತಾಗಿದೆ. ತಮಿಳು ಕಾಲೋನಿ ಸೇರಿದಂತೆ ಕೆಲವು ಶಿಕ್ಷಣ ಸಂಸ್ಥೆಗಳು, ಸಂಘ-ಸಂಸ್ಥೆಗಳಿಗೆ ನೀಡಿರುವ ಕಟ್ಟಡಗಳು ಹಾಗೂ ಕೆಲವೊಂದು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮನೆಗಳೂ ಆಸ್ಪತ್ರೆ ಜಾಗದೊಳಗೆ ಗುರುತಿಸಲ್ಪಟ್ಟಿವೆ. ಮೆಡಿಕಲ್ ಕಾಲೇಜು ಹಾಗೂ ಮಿಮ್ಸ್ ಆಸ್ಪತ್ರೆ ಬೆಳವಣಿಗೆ ದೃಷ್ಟಿಯಿಂದ ಆದಷ್ಟು ಶೀಘ್ರವಾಗಿ ಆಸ್ಪತ್ರೆ ಜಾಗದಲ್ಲಿರುವವರನ್ನು ತೆರವುಗೊಳಿಸುವುದಕ್ಕೆ ಯಾರೊಬ್ಬರೂ ಮನಸ್ಸು ಮಾಡದಿರುವುದರಿಂದ ಕಾಲೇಜು ಮತ್ತು ಆಸ್ಪತ್ರೆ ಬೆಳವಣಿಗೆ ನೆನೆಗುದಿಗೆ ಬೀಳುವಂತಾಗಿದೆ.

೧೯ ಎಕರೆ ಜಾಗ ಬಿಡಿಸಿಕೊಡುವಂತೆ ಮನವಿ:

ಆಸ್ಪತ್ರೆ ಜಾಗದ ೫.೨೫ ಎಕರೆ ಪ್ರದೇಶದಲ್ಲಿ ಮಾತ್ರ ತಮಿಳು ಕಾಲೋನಿ ನೆಲೆಯೂರಿದೆ. ಒಟ್ಟು ಜಾಗದಲ್ಲಿ ೧೯ ಎಕರೆ ಜಾಗದ ಸಂಬಂಧ ನ್ಯಾಯಾಲಯದಲ್ಲಿ ವಿವಾದಗಳಿಲ್ಲ. ಆ ಜಾಗವನ್ನು ಮಿಮ್ಸ್‌ಗೆ ದೊರಕಿಸಿಕೊಡುವಂತೆ ನಿರ್ದೇಶಕ ಡಾ.ಪಿ. ನರಸಿಂಹಸ್ವಾಮಿ ಅವರು ಜಿಲ್ಲಾಧಿಕಾರಿ ಡಾ.ಕುಮಾರ ಅವರ ಗಮನಕ್ಕೆ ತಂದಿದ್ದಾರೆ. ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗಿದೆ.

ಈ ೧೯ ಎಕರೆ ಜಾಗವನ್ನು ದೊರಕಿಸಿಕೊಟ್ಟರೆ ಮಿಮ್ಸ್ ಕಾಲೇಜುಗಳ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಕ್ಕೆ ಅವಕಾಶ ಸಿಗಲಿದೆ. ಅದೇ ರೀತಿ ಟ್ರಾಮಾಕೇರ್ ಸೆಂಟರ್ ತೆರೆಯುವುದಕ್ಕೂ ಅನುಕೂಲವಾಗಲಿದೆ. ಆಸ್ಪತ್ರೆಯ ಸೌಲಭ್ಯ ವಿಸ್ತರಣೆಗೂ ಉಪಯುಕ್ತ ಜಾಗ ದೊರಕಲಿದೆ. ಇದೆಲ್ಲವನ್ನು ಕಾರ್ಯಗತಗೊಳಿಸುವುದಕ್ಕೆ ಬದ್ಧತೆ ಮತ್ತು ಇಚ್ಛಾಶಕ್ತಿ ಪ್ರದರ್ಶಿಸುವವರಿಲ್ಲದಿರುವುದು ವಿಪರ್ಯಾಸವಾಗಿದೆ.

ಹಣವಿದ್ದರೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗುತ್ತಿಲ್ಲ:

ತಮಿಳು ಕಾಲೋನಿ ಸೇರಿದಂತೆ ಆಸ್ಪತ್ರೆಯ ಒಟ್ಟಾರೆ ಜಾಗ ಮಿಮ್ಸ್‌ಗೆ ಹಸ್ತಾಂತರವಾದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಉತ್ತಮ ಸ್ಥಳಾವಕಾಶ ದೊರೆಯಲಿದೆ. ಜೊತೆಗೆ ಟ್ರಾಮಾ ಕೇರ್ ಸೆಂಟರ್ ತೆರೆದು ಜನರಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸೌಲಭ್ಯಗಳನ್ನು ದೊರಕಿಸಬಹುದು. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯವಿರುವಷ್ಟು ಹಣವಿದ್ದರೂ ಜಾಗದ ಕೊರತೆಯಿಂದ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಆಸ್ಪತ್ರೆಗೆ ನಿತ್ಯ ೨ ರಿಂದ ೩ ಸಾವಿರ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಜನಸಂಖ್ಯೆಗೆ ತಕ್ಕಂತೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದಕ್ಕೆ ಕಷ್ಟವಾಗುತ್ತಿದೆ. ಕಿಷ್ಕಿಂಧೆಯಾದ ಜಾಗದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿಲ್ಲ. ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳನ್ನು ವಿಸ್ತರಣೆ ಮಾಡಲಾಗದೆ ಪರಿತಪಿಸಲಾಗುತ್ತಿದೆ. ಜಿಲ್ಲಾ ಕೇಂದ್ರದ ಹೃದಯಭಾಗದಲ್ಲಿದ್ದರೂ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಬೆಳವಣಿಗೆ ಕಾಣದಂತಾಗಿದೆ.ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಸೀಟುಗಳ ಸಂಖ್ಯೆ ಹೆಚ್ಚಳಕ್ಕೆ ಇಟ್ಟಿದ್ದ ಪ್ರಸ್ತಾವಕ್ಕೆ ಕೇಂದ್ರ ಸಮ್ಮತಿ ಸೂಚಿಸಿದೆ. ಇದರಿಂದ ವೈದ್ಯಕೀಯ ಸೀಟುಗಳು ೫೦ ಹಾಗೂ ಸ್ನಾತಕೋತ್ತರ ಸೀಟುಗಳು ೨೩ ಹೆಚ್ಚುವರಿಯಾಗಿ ಸಿಗಲಿವೆ. ೭೯ ಕೋಟಿ ರು. ಕೇಂದ್ರದ ಅನುದಾನವೂ ಸಿಗಲಿದೆ. ಆದರೆ, ಜಾಗದ ಸಮಸ್ಯೆ ಕಾಡುತ್ತಿದೆ. ಹಾಸ್ಟೆಲ್, ಉಪಕರಣಗಳು, ಪೀಠೋಪಕರಣಗಳು, ಲೆಕ್ಚರರ್‌ ಹಾಲ್ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿಲ್ಲ. ತಮಿಳು ಕಾಲೋನಿ ಪ್ರಕರಣ ನ್ಯಾಯಾಲಯದಲ್ಲಿದೆ. ಉಳಿದ ೧೯ ಎಕರೆಯನ್ನು ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

- ಡಾ.ಪಿ.ನರಸಿಂಹಸ್ವಾಮಿ, ನಿರ್ದೇಶಕರು, ಮಿಮ್ಸ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3000ಕ್ಕೂ ಅಧಿಕ ಪಿಂಚಣಿ ಕಾರ್ಡ್ ರದ್ದುಗೊಳಿಸಿ ವಂಚನೆ: ನವೀನ್
ರಾಷ್ಟ್ರದ ಹಿತದೃಷ್ಟಿಯಿಂದ ಎಸ್‌ಐಆರ್ ಅಭೂತಪೂರ್ವ ಕಾರ್ಯಕ್ರಮ