ಸೋಮರಡ್ಡಿ ಅಳವಂಡಿ
ಬಜರಂಗದಳದ ನೀಲಕಂಠ ನಾಗಶೆಟ್ಟಿ, ಶಿವಕುಮಾರ ಅರಿಕೇರಿ, ಅಯ್ಯನಗೌಡ ಹೇರೂರು, ಜಗದೀಶ ಬಡಿಗೇರ, ಚಂದ್ರು ಕರಾಟೆ, ವಿಷ್ಣು ನಾಯರ್ ಹಾಗೂ ಶಿವು ಎನ್ನುವವರು ಪ್ರಥಮ ಬಾರಿಗೆ ಮಾಲಾಧಾರಣೆ ಕುರಿತು ಚಿಂತನೆ ಮಾಡಿದರು. ಅಯ್ಯಪ್ಪ ಸ್ವಾಮೀಜಿಗೆ ಇರುವಂತೆ ಇರುಮುಡಿಕಟ್ಟಿ ಆಂಜನೇಯನಿಗೂ ಮಾಲೆ ಧರಿಸೋಣ ಎಂದು ಚಿಂತನೆ ಮಾಡಿದರು. ಆದರೆ, ಇದನ್ನು ಪ್ರಾರಂಭಿಸಬೇಕೋ ಅಥವಾ ಬೇಡವೋ ಎನ್ನುವ ಗೊಂದಲಕ್ಕೆ ಸಿಲುಕಿದಾಗ ಮಂತ್ರಾಲಯದ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಬಳಿ ಹೋಗಿ ಕೇಳಿದರು. ಅವರ ಒಪ್ಪಿಗೆ-ಆಶೀರ್ವಾದ ಪಡೆದು, ಅವರ ಅಣತಿಯಂತೆ ಪ್ರಾರಂಭಿಸಿದರು.
ಹೀಗೆ ಪ್ರಾರಂಭವಾದ ಹನುಮಮಾಲೆ ಧಾರಣೆ ಮುಂದೆ ವಿಸ್ತಾರವಾಗುತ್ತ ಹೋಯಿತು. 2ನೇ ವರ್ಷವೇ ನೂರಾಯಿತು. ಮಾಲಾಧಾರಿಗಳು ಟೀಕೆಯನ್ನೂ ಎದುರಿಸಬೇಕಾಯಿತು. ಇಡೀ ದೇಶದಲ್ಲಿ ಎಲ್ಲಿಯೂ ಆಂಜನೇಯನಿಗೆ ಮಾಲೆ ಹಾಕುವುದಿಲ್ಲ. ಇವರು ಹೊಸದಾಗಿ ಪ್ರಾರಂಭಿಸಿದ್ದಾರೆ ಎಂದು ಕೆಲವರು ನಿಂದಿಸಿದರು. ಆದರೂ ಬಿಡದೆ 48 ದಿನಗಳ ವರೆಗೆ ಅವರು ಹನುಮಮಾಲೆ ಧರಿಸುತ್ತಿದ್ದರು.2010ರಲ್ಲಿ ವಿಶ್ವ ಹಿಂದೂ ಪರಿಷತ್ ಇದನ್ನು ಕೈಗೆತ್ತಿಕೊಂಡಾಗ ಇದು ರಾಜ್ಯಾದ್ಯಂತ ವ್ಯಾಪಿಸಿತು. ಆನಂತರ ದೇಶವ್ಯಾಪಿಯಾಗಿದ್ದು, ಈಗ ದೇಶದ ಮೂಲೆ ಮೂಲೆಯಿಂದಲೂ ಹನುಮ ಮಾಲೆಯನ್ನು ಧರಿಸಲು ಆಗಮಿಸುತ್ತಿದ್ದಾರೆ.
ಪಾಂಡವರು ವನವಾಸದಲ್ಲಿದ್ದರು. ಆಗ ಅವರು ಹನುಮದ್ ವ್ರತ ಮಾಡುವ ಮೂಲಕ ಮುಕ್ತಿ ಪಡೆಯುತ್ತಾರೆ. ಹೀಗಾಗಿ, ಈಗ ಹನುಮದ್ ವ್ರತ ಇರುವುದರಿಂದ ಹನುಮಮಾಲೆ ಧರಿಸಲಾಗುತ್ತದೆ. ಕೆಲವರು ಆಂಜನೇಯನ ಜನ್ಮದಿನ ಮತ್ತು ಹನುಮದ್ ವ್ರತ ಈ ಎರಡೂ ಸಂದರ್ಭಗಳಲ್ಲಿ ಹನುಮಮಾಲೆ ಧರಿಸುತ್ತಾರೆ.
ಈ ವರ್ಷ ಹನುಮದ್ ವ್ರತ ನಿಮಿತ್ತ 60 ಸಾವಿರಕ್ಕೂ ಅಧಿಕ ಭಕ್ತರು ಹನುಮಮಾಲೆ ಧರಿಸಿದ್ದಾರೆ. ಎರಡು ದಿನಗಳ ಬಳಿಕ ವಿಸರ್ಜನೆ ಮಾಡಿದ್ದಾರೆ.ಕೇವಲ ಏಳು ಜನರಿಂದ ಪ್ರಾರಂಭವಾದ ಹನುಮಮಾಲಾಧಾರಣೆ ಈಗ ಸಹಸ್ರಾರು ಸಂಖ್ಯೆ ದಾಟಿದೆ. ದೇಶದಾದ್ಯಂತ ಹನುಮ ಭಕ್ತರು ಮಾಲೆಯನ್ನು ಧರಿಸಿ ಬರುತ್ತಿದ್ದಾರೆ. ನಾವು ಪ್ರಾರಂಭಿಸಿದಾಗ ಈ ರೀತಿಯಾಗುತ್ತದೆ ಎಂದು ಕನಸು ಕಂಡಿರಲಿಲ್ಲ ಎಂದು ಬಜರಂಗದಳ ಕಾರ್ಯಕರ್ತ ನೀಲಕಂಠ ನಾಗಶೆಟ್ಟಿ ಹೇಳುತ್ತಾರೆ.