ಭಟ್ಕಳದಲ್ಲಿ ಹೆಚ್ಚಿದ ಬಿಸಿಲ ತಾಪಮಾನ: ಬತ್ತುತ್ತಿರುವ ಹೊಳೆಗಳು

KannadaprabhaNewsNetwork |  
Published : Apr 19, 2026, 02:30 AM IST
ಭಟ್ಕಳ ಗ್ರಾಮಾಂತರ ಭಾಗದಲ್ಲಿ ಬಿಸಿಲ ತಾಪಮಾನಕ್ಕೆ ಹೊಳೆ ನೀರಿಲ್ಲದೇ ಒಣಗಿರುವುದು. | Kannada Prabha

ಸಾರಾಂಶ

ತಾಲ್ಲೂಕಿನಲ್ಲಿ ಅಂತರ್ಜಲಮಟ್ಟ ಇಳಿಕೆ ಕಂಡಿದ್ದರಿಂದ ಹೊಳೆ, ಕೊಳ್ಳಗಳು ಬತ್ತಿದ್ದು, ಪರಿಣಾಮ ತೋಟಗಳು ನೀರಿಲ್ಲದೇ ಒಣಗುವಂತಾಗಿದೆ.

ವ್ಯಾಪಕ ಸೆಕೆಯಿಂದ ಮನೆಯಿಂದ ಹೊರಬರದ ಸ್ಥಿತಿ । ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಕುಸಿತ

ರಾಘವೇಂದ್ರ ಹೆಬ್ಬಾರ

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲ್ಲೂಕಿನಲ್ಲಿ ಅಂತರ್ಜಲಮಟ್ಟ ಇಳಿಕೆ ಕಂಡಿದ್ದರಿಂದ ಹೊಳೆ, ಕೊಳ್ಳಗಳು ಬತ್ತಿದ್ದು, ಪರಿಣಾಮ ತೋಟಗಳು ನೀರಿಲ್ಲದೇ ಒಣಗುವಂತಾಗಿದೆ.ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ಸಲ ಬಿಸಿಲ ತಾಪಮಾನ ಹೆಚ್ಚಾಗಿದ್ದು, ವ್ಯಾಪಕ ಸೆಕೆಯಿಂದ ಮನೆಯಿಂದ ಹೊರಬರದ ಸ್ಥಿತಿ ಇದೆ. ದಿನದಿಂದ ದಿನಕ್ಕೆ ಬಿಸಿಲ ಹೊಡೆತ ಹೆಚ್ಚುತ್ತಿದೆ.

ಈ ಸಲ ಎಪ್ರಿಲ್ ಮೂರನೇ ವಾರದಲ್ಲೇ ಕೆರೆ, ಹೊಳೆ, ಕೊಳ್ಳಗಳು ಬತ್ತಲಾರಂಭಿಸಿದ್ದರಿಂದ ತೋಟಗಳಿಗೆ ನೀರು ಹಾಯಿಸಲು ಪರದಾಡುವಂತಾಗಿದೆ. ಅಂತರ್ಜಲ ಮಟ್ಟ ಇಳಿಕೆ ಕಂಡಿದ್ದರಿಂದ ದಿನಕ್ಕೆ ಐದಾರು ತಾಸು ತೋಟಕ್ಕೆ ನೀರು ಹಾಕುತ್ತಿದ್ದವರು ಕೇವಲ ಒಂದು ತಾಸಿಗೆ ಸೀಮಿತಗೊಂಡಿದೆ. ಕೆಲವು ಕಡೆ ಹೊಳೆಯಲ್ಲಿ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗಿದ್ದರಿಂದ ತೋಟಕ್ಕೆ ಸರಿಯಾಗಿ ನೀರು ಹಾಯಿಸಲು ಆಗುತ್ತಿಲ್ಲ. ಆದರೆ ಇಷ್ಟರ ವರೆಗೆ ಕುಡಿಯುವ ನೀರಿಗೆ ತೊಂದರೆ ಆಗಿಲ್ಲ. ಇದೇ ರೀತಿ ಬಿಸಿಲ ತಾಪಮಾನ ಮುಂದುವರಿದರೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಬರಲಿದೆ.

ಅಂತರಜಲಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಬಾವಿಗಳಲ್ಲಿಯೂ ನೀರು ಬತ್ತಿ ಹೋಗುತ್ತಿದೆ. ಬಾವಿಯನ್ನು ನಂಬಿ ತೋಟಗಳಿಗೆ ನೀರು ಹಾಕದ ಪರಿಸ್ಥಿತಿ ಇದೆ. ಗ್ರಾಮಾಂತರ ಭಾಗದಲ್ಲಿ ನೀರಿಲ್ಲದೇ ತೋಟಗಳು ಒಣಗಿರುವುದು ರೈತರ ಚಿಂತೆಗೆ ಕಾರಣವಾಗಿದೆ. ನೀರಿನ ತುಟಾಗ್ರತೆ ಉಂಟಾಗಿದ್ದರಿಂದ ಕೆಲವರು ವಾರಕ್ಕೊಮ್ಮೆಯೂ ತೋಟಕ್ಕೆ ನೀರು ಹಾಕಿಲ್ಲ. ರೈತರು ಅಡಕೆಗೆ ಕೊಳೆ ರೋಗ, ಎಲೆಚುಕ್ಕಿ ರೋಗದಿಂದ ಕಂಗಾಲಾಗಿದ್ದು ಇದರ ಹೊಡೆತಕ್ಕೆ ಇಳುವರಿ ಕೂಡ ಗಣನೀಯವಾಗಿ ಕುಸಿತ ಕಂಡಿದೆ.

ಅಡಕೆ ದರ ಕ್ವಿಂಟಲ್‌ಗೆ ₹46-48 ಸಾವಿರ ಇದ್ದರೂ ಸಹ ಇಳುವರಿ ಕಡಿಮೆ ಇದ್ದುದರಿಂದ ರೈತರಿಗೆ ದರ ಏರಿಕೆಯಿಂದ ಲಾಭ ಆಗಿಲ್ಲ. ಇದೀಗ ಬಿಸಿಲ ತಾಪಮಾನದಿಂದ ಹೊಳೆಗಳು ಬತ್ತುತ್ತಿದ್ದು, ತೋಟಕ್ಕೆ ಸರಿಯಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಸದ್ಯದಲ್ಲೇ ಮಳೆ ಬಂದರೆ ಮಾತ್ರ ತೋಟ ಉಳಿಸಿಕೊಳ್ಳಬಹುದು. ಇಲ್ಲದಿದ್ದಲ್ಲಿ ಸುಡು ಬಿಸಿಲಿಗೆ ತೋಟ ನಾಶವಾಗಬಹುದು. ದಿನದಿಂದ ದಿನಕ್ಕೆ ಸೆಕೆಯ ಪ್ರಮಾಣ ಜೋರಾಗುತ್ತಿದೆ. ತೀವ್ರ ಸೆಕೆಯಿಂದ ಜನರು ಬಳಲಿದ್ದಾರೆ. ಪೇಟೆಯಲ್ಲಿ ಬಿರುಬಿಸಿಲು ಜೋರಾಗಿದ್ದು ಹಗಲು ಹೊತ್ತಿನಲ್ಲಿ ತಿರುಗುವುದೇ ಬೇಡ ಎಂಬಂತಾಗಿದೆ. ಗ್ರಾಮಾಂತರ ಪ್ರದೇಶದಲ್ಲೂ ಸೆಕೆಯ ಪ್ರಮಾಣ ಹೆಚ್ಚಿದ್ದು, ಮಳೆ ಬಂದರೆ ಮಾತ್ರ ಸೆಕೆಯ ಪ್ರಮಾಣ ಕಡಿಮೆ ಆಗಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಗಿರಿಯಲ್ಲಿ ಮಧ್ಯರಾತ್ರಿ ದಾಳಿಂಬೆ ಕಳ್ಳತನ
ಕನಕಗಿರಿ ಜನತೆಯಲ್ಲಿ 5ನೇ ಉತ್ಸವದ ಸಂಭ್ರಮ