ಹಿರೇಕೆರೂರಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ

KannadaprabhaNewsNetwork | Published : Dec 9, 2023 1:15 AM

ಹಿರೇಕೆರೂರು ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಜನರು ಓಡಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಚಿಕ್ಕಮಕ್ಕಳನ್ನು ಕರೆದೊಯ್ಯುವುದಕ್ಕೆ ಜನರು ಅಂಜುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಜನರು ಪಪಂಗೆ ಮೌಖಿಕವಾಗಿ ದೂರು ನೀಡಿದ್ದಾರೆ. ಆದರೆ ಯಾವುದೇ ಕ್ರಮವಾಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ನಾಯಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವ ಜನತೆಯ ಮೇಲೂ ನಾಯಿಗಳು ಎರಗಿ ಗಾಯಗೊಳಿಸಿದ ಘಟನೆಗಳು ನಡೆದಿವೆ.

ರವಿ ಮೇಗಳಮನಿ

ಹಿರೇಕೆರೂರು: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಜನರು ಓಡಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಚಿಕ್ಕಮಕ್ಕಳನ್ನು ಕರೆದೊಯ್ಯುವುದಕ್ಕೆ ಜನರು ಅಂಜುತ್ತಿದ್ದಾರೆ.

ಈಗಾಗಲೇ ಹಲವು ಬಾರಿ ಜನರು ಪಪಂಗೆ ಮೌಖಿಕವಾಗಿ ದೂರು ನೀಡಿದ್ದಾರೆ. ಆದರೆ ಯಾವುದೇ ಕ್ರಮವಾಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ನಾಯಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರ ಬಳಿ, ಚಿಕ್ಕೇರೂರ ರಸ್ತೆ, ಬಾಳಂಬೀಡ ಕ್ರಾಸ್, ಬಸ್ ಸ್ಟ್ಯಾಂಡ್‌ ಹತ್ತಿರ, ಸಂತೆ ಮೈದಾನ, ಸಿಇಎಸ್ ಸಂಸ್ಥೆಯ ಎದುರುಗಡೆ, ಪೇಟೆ ಬಸವೇಶ್ವರ ದೇವಸ್ಥಾನದ ಬಳಿ, ಚೌಡಿ ಸರ್ಕಲ್, ಜಾಲಿಕಟ್ಟೆ, ಮಿನಿ ವಿಧಾನಸಭೆ ಮುಂಭಾಗ, ಬಸ್ ನಿಲ್ದಾಣ, ಸರ್ವಜ್ಞ ಸರ್ಕಲ್, ಗುರುಭವನ, ವಿದ್ಯಾನಗರ, ಜನತಾ ಪ್ಲಾಟ್, ಹೌಸಿಂಗ್ ಬೋರ್ಡ್‌, ಸಂತೆ ಮೈದಾನ, ಪ್ರಮುಖ ರಸ್ತೆ, ಪಪಂ ಬಳಿ ಯಾವಾಗಲೂ ನಾಯಿಗಳ ಗುಂಪು ಇರುತ್ತದೆ. ಇದಲ್ಲದೆ ವಿವಿಧ ಕಾಲನಿಗಳಲ್ಲೂ ನಾಯಿಗಳ ಹಾವಳಿ ಹೆಚ್ಚಿದೆ.ಅವು ರಸ್ತೆಯಲ್ಲಿ ಸಂಚರಿಸುವವರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿವೆ. ಹಂದಿಗಳ ಮೇಲೂ ದಾಳಿ ನಡೆಸುತ್ತಿವೆ. ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವ ಜನತೆಯ ಮೇಲೂ ನಾಯಿಗಳು ಎರಗಿ ಗಾಯಗೊಳಿಸಿದ ಘಟನೆಗಳು ನಡೆದಿವೆ. ಇನ್ನು ಬೈಕಿಗೆ ಅಡ್ಡ ಬಂದ ಪರಿಣಾಮ ಅನೇಕ ಬೈಕ್ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ಶಾಲಾ ಸಮಯದಲ್ಲಿ ಮಕ್ಕಳು ಜೀವಭಯದಿಂದ ಶಾಲೆಗೆ ಹೋಗಿ ಬರುವ ಸ್ಥಿತಿ ನಿರ್ಮಾಣವಾಗಿದೆ. ಮುಂಜಾನೆ ಮತ್ತು ರಾತ್ರಿಯ ಸಮಯದಲ್ಲಿ ಪಾದಚಾರಿಗಳಿಗೆ ಮತ್ತು ವಾಹನ ಸವಾರನನ್ನು ಬೆನ್ನುಹತ್ತುತ್ತವೆ. ಕೆಲವು ವಾಹನ ಸವಾರರನ್ನು ಬೀಳಿಸಿವೆ. ಕೂಡಲೆ ಪಪಂ ಅಧಿಕಾರಿಗಳು ಬೀದಿನಾಯಿಗಳನ್ನು ಹಿಡಿಸಿ, ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.ಹಿರೇಕೆರೂರು ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ದ್ವಿಚಕ್ರವಾಹನದಲ್ಲಿ ಹೋಗುವಾಗ ನಾಯಿ ನಡೆಸಿದ್ದರಿಂದ ಬಿದ್ದು ಗಾಯಗೊಂಡಿದ್ದೇನೆ. ಹಲವರು ನನ್ನಂತೆ ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ನಾಯಿ ಹಿಡಿದು, ಸ್ಥಳಾಂತರಿಸಬೇಕು ಎಂದು ಸಂತ್ರಸ್ತ ಸತೀಶ ಬೋಗೇರ್ ಹೇಳಿದರು.ಬೀದಿನಾಯಿಗಳ ನಿಯಂತ್ರಣಕ್ಕೆ ಒಂದು ವಾರದ ಒಳಗೆ ಟೆಂಡರ್ ಕರೆಯುತ್ತೇವೆ. ಎಬಿಸಿ ಅಂದರೆ ಎನಿಮಲ್‌ ಬರ್ತ್‌ ಕಂಟ್ರೋಲ್ ನಿಯಮ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪಪಂ ಮುಖ್ಯಧಿಕಾರಿ ಕೋಡಿ ಭೀಮರಾಯ್ ಹೇಳಿದರು.